ಚುನಾವಣೆ ಕೊನೆ ಹೊತ್ತಲ್ಲಿ ನಕಲಿ ಸುದ್ದಿಗಳ ಹರಿಬಿಡ್ತಾರೆ: ಕೆ.ಎಸ್. ಈಶ್ವರಪ್ಪ

| Published : May 22 2024, 12:51 AM IST

ಚುನಾವಣೆ ಕೊನೆ ಹೊತ್ತಲ್ಲಿ ನಕಲಿ ಸುದ್ದಿಗಳ ಹರಿಬಿಡ್ತಾರೆ: ಕೆ.ಎಸ್. ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಅಂದರೆ ಈಶ್ವರಪ್ಪ, ಈಶ್ವರಪ್ಪ ಅಂದರೆ ಪಕ್ಷ ಎನ್ನುತ್ತಿದ್ದ ಸಂದರ್ಭದಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಅದೇ ರೀತಿ ನಾನು ಸತ್ತರೆ ನನ್ನ ಎದೆಯ ಮೇಲೆ ಬಿಜೆಪಿ ಬಾವುಟ ಇರಬೇಕು ಎಂದು ಹೇಳುವ ರಘುಪತಿ ಭಟ್‌ ಅವರಿಗೂ ಮೋಸವಾಯಿತು. ಪಕ್ಷ ನಿಷ್ಠ ರಘುಪತಿರನ್ನು ಬಹುಮತದಿಂದ ಗೆಲ್ಲಿಸಬೇಕು. ಆ ರೀತಿ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು. ಪಕ್ಷ ಎಂದರೆ ತಾವುಗಳು ಮಾತ್ರ, ತಮ್ಮ ಕುಟುಂಬ ಮಾತ್ರ. ತಮ್ಮ ನಿರ್ಧಾರವೇ ಪಕ್ಷದ ನಿರ್ಧಾರ. ತಮ್ಮ ಹಿಂಬಾಲಕರಿಗೆ ಮಾತ್ರ ಎಲ್ಲ ಅವಕಾಶ ಕಲ್ಪಿಸಬೇಕು ಎಂದುಕೊಂಡವರಿಗೆ ಈ ಮೂಲಕ ಪಾಠ ಕಲಿಸಬೇಕು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಚುನಾವಣೆಗೆ ಒಂದು ದಿನ ಇರುವಾಗ ನಕಲಿ ಸುದ್ದಿಗಳ ಹರಿಬಿಟ್ಟು ನನಗೆ ಮೋಸ ಮಾಡಿದಂತೆ ರಘುಪತಿ ಭಟ್‌ರಿಗೂ ಯಾಮಾರಿಸುವ, ಮೋಸ ಮಾಡುವ ಎಲ್ಲ ಸಾಧ್ಯತೆ ಇದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.

ತಮ್ಮ ಮನೆಯಂಗಳದಲ್ಲಿ ಕರೆಯಲಾಗಿದ್ದ ರಾಷ್ಟ್ರಭಕ್ತರ ಸಭೆಯಲ್ಲಿ ಮಾತನಾಡಿ ನನಗೂ ಮೊದಲು ಗೊತ್ತಾಗಲಿಲ್ಲ. ಆಮೇಲೆ ನಾನು ಮೋಸ ಹೋಗಿದ್ದು ಗೊತ್ತಾಯ್ತು. ಪಾಪ! ಆಯನೂರು ಮಂಜುನಾಥ್‌ ಅವರೂ ಈ ಸುದ್ದಿಯನ್ನು ನಂಬಿ ನನಗೆ ಮತ ಹಾಕಲಾಗಲಿಲ್ಲ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಅಂದರೆ ಈಶ್ವರಪ್ಪ, ಈಶ್ವರಪ್ಪ ಅಂದರೆ ಪಕ್ಷ ಎನ್ನುತ್ತಿದ್ದ ಸಂದರ್ಭದಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುವ ಸಂದರ್ಭ ಎದುರಾಯಿತು. ಅದೇ ರೀತಿ ನಾನು ಸತ್ತರೆ ನನ್ನ ಎದೆಯ ಮೇಲೆ ಬಿಜೆಪಿ ಬಾವುಟ ಇರಬೇಕು ಎಂದು ಹೇಳುವ ರಘುಪತಿ ಭಟ್‌ ಅವರಿಗೂ ಮೋಸವಾಯಿತು ಎಂದರು.

ಪಕ್ಷ ನಿಷ್ಠ ರಘುಪತಿರನ್ನು ಬಹುಮತದಿಂದ ಗೆಲ್ಲಿಸಬೇಕು. ಆ ರೀತಿ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು. ಪಕ್ಷ ಎಂದರೆ ತಾವುಗಳು ಮಾತ್ರ, ತಮ್ಮ ಕುಟುಂಬ ಮಾತ್ರ. ತಮ್ಮ ನಿರ್ಧಾರವೇ ಪಕ್ಷದ ನಿರ್ಧಾರ. ತಮ್ಮ ಹಿಂಬಾಲಕರಿಗೆ ಮಾತ್ರ ಎಲ್ಲ ಅವಕಾಶ ಕಲ್ಪಿಸಬೇಕು ಎಂದುಕೊಂಡವರಿಗೆ ಈ ಮೂಲಕ ಪಾಠ ಕಲಿಸಬೇಕೆಂದು ಹೇಳಿದರು.ರಘುಪತಿ ಭಟ್ಟರಿಗೆ ಮೋಸ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ನಿರಾಕರಿಸಿದಾಗ ರಾಷ್ಟ್ರೀಯ ನಾಯಕರ ಕರೆ ಬಂದಿತ್ತು. ಆದರೆ ಉಡುಪಿಯಲ್ಲಿ ರಘುಪತಿ ಭಟ್ಟರಿಗೆ ಕರೆ ಕೂಡ ಬರಲಿಲ್ಲ. ಆಗ ಮಾಧ್ಯಮದವರು ನೀವು ಯಾವ ಪಕ್ಷಕ್ಕೆ ಹೋಗುತ್ತೀರಾ ಎಂದು ಕೇಳಿದಾಗ ನಾನು ಸತ್ತ ಮೇಲೆ ನನ್ನ ಹೆಣದ ಮೇಲೆ ಬಿಜೆಪಿ ಧ್ವಜ ಇರುತ್ತದೆ ಎಂದು ರಘುಪತಿ ಭಟ್‌ ಹೇಳಿದ್ದರು. ಅಂತಹ ನಿಷ್ಠಾವಂತ ಕಾರ್ಯಕರ್ತ ರಘುಪತಿ ಭಟ್ಟರಿಗೆ ಮೋಸ ಆಗಿದೆ ಎಂದು ವಿಷಾದಿಸಿದರು.

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಟಿಕೆಟ್‌ ಘೋಷಣೆಗೆ ಎರಡು ದಿನ ಇರುವಾಗ ನಿನಗೇ ಟಿಕೆಟ್‌ ಎಂದು ರಘುಪತಿ ಭಟ್‌ರಿಗೆ ಹೇಳಿದವರು ಕೊನೆ ಗಳಿಗೆಯಲ್ಲಿ ಮೋಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷ ನಿಷ್ಠೆಯ ಜೊತೆಗೆ ರಾಷ್ಟ್ರೀಯತೆ ಪ್ರತೀಕ ರಘುಪತಿ ಭಟ್ ಆಗಿದ್ದಾರೆ. ಹೀಗಾಗಿ ರಾಷ್ಟ್ರ ಭಕ್ತರ ಬಳಗ ಸಂಪೂರ್ಣವಾಗಿ ಅವರಿಗೆ ಬೆಂಬಲ ಸೂಚಿಸಿದೆ ಎಂದರು.ಎಷ್ಟರಮಟ್ಟಿಗೆ ಪಕ್ಷ ಶುದ್ಧೀಕರಣ ಆಗುತ್ತದೆ ಎಂದು ಎಂಪಿ, ಎಂಎಲ್ಸಿ ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗುತ್ತದೆ ಎಂದು ನುಡಿದರು. ಚುನಾವಣೆ ಮುಗಿಯುತ್ತಿದ್ದಂತೆ ರಘುಪತಿ ಭಟ್ಟರಿಗೆ ನೋಟಿಸ್ ಬರಬಹುದು. ನನಗೆ ಆಗ ಖುಷಿ. ನಾನೊಬ್ಬನೇ ಆಗಿದ್ದೆನಲ್ಲ, ಸದ್ಯ ಈಗ ಭಟ್ರು ಜೊತೆಗೆ ಬರ್ತಾರಲ್ಲ ಸಮಾಧಾನ ಎಂದು ಈಶ್ವರಪ್ಪ ತಮಾಷೆಯಾಗಿ ಹೇಳಿದರು.ಜಾತಿ ನೋಡದೆ ಮತ ಹಾಕ್ತಾರೆ

ಉಡುಪಿಯ ಕೃಷ್ಣ ಮತ್ತು ಕನಕದಾಸನನ್ನು ನಂಬುವ ಲಿಂಗಾಯತರು ರಘುಪತಿ ಭಟ್‌ರಿಗೆ ಮತ ಹಾಕುತ್ತಾರೆ. ಯಾವ ಜಾತಿ ಎಂದು ನೋಡದೆ ರಘುಪತಿ ಭಟ್ಟರಿಗೆ ಮತ ನೀಡುವ ವಿಶ್ವಾಸ ಇದ್ದು, ರಘುಪತಿ ಭಟ್‌ ಕೂಡ ಎಂದೂ ಜಾತಿ ನೋಡದ ವ್ಯಕ್ತಿ. ಮತದಾರರು ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿಯವರೇ ಆಗಿರಬಹುದು. ರಾಷ್ಟ್ರೀಯತೆ ವಿಚಾರ ನೋಡಿಕೊಂಡು ರಘುಪತಿ ಭಟ್‌ರಿಗೆ ಮತ ಹಾಕುತ್ತಾರೆ.

ಕೆ.ಎಸ್. ಈಶ್ವರಪ್ಪ, ಮಾಜಿ ಡಿಸಿಎಂ

-----------ಈಶ್ವರಪ್ಪ ರಾಷ್ಟ್ರಭಕ್ತರ ಬಳಗದಿಂದ ರಘುಪತಿ ಭಟ್‌ಗೆ ಬೆಂಬಲ

* ಬಿಜೆಪಿ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿದ್ದು, ಪಕ್ಷಕ್ಕಾಗಿ ದುಡಿದವರ ಪರವಾಗಿ ಇಲ್ಲ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸಿಡಿದೆದ್ದು, ಪಕ್ಷೇತರರಾಗಿ ಸ್ಪರ್ಧಿಸಿ ರಾಜ್ಯಾದ್ಯಂತ ಗಮನ ಸೆಳೆದಿದ್ದ ಬಿಜೆಪಿ ಹಿರಿಯ ನಾಯಕ ಕೆ. ಎಸ್‌.ಈಶ್ವರಪ್ಪನವರ ರಾಷ್ಟ್ರಭಕ್ತ ಬಳಗ ಇದೀಗ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಲ್ಪಟ್ಟು, ಬಂಡೆದ್ದು ಸ್ಪರ್ಧಿಸಿದ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್‌ರಿಗೆ ಬೆಂಬಲ ಘೋಷಿಸಿದೆ.

ಮಾಜಿ ಡಿಸಿಎಂ ಈಶ್ವರಪ್ಪ ನಿವಾಸದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿ ಕೆಲವೇ ವ್ಯಕ್ತಿಗಳ ಹಿಡಿತದಲ್ಲಿದ್ದು, ಪಕ್ಷಕ್ಕಾಗಿ ದುಡಿದವರ ಪರವಾಗಿ ಇಲ್ಲ. ಕೇವಲ ತಮ್ಮ ಹಿಂಬಾಲಕರಿಗೆ ಮಾತ್ರ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ನಿರತವಾಗಿದೆ. ಹೀಗಾಗಿ ನೈಜ ಕಾರ್ಯಕರ್ತರ ಹಿತಾಸಕ್ತಿ ಉಳಿಸಬೇಕಾಗಿದೆ. ಪಕ್ಷವನ್ನು ಕೈಗೆ ತೆಗೆದುಕೊಳ್ಳುತ್ತಿರುವವರಿಗೆ ಪಾಠ ಕಲಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ರಿಗೆ ಬಿಜೆಪಿ ಬಿಟ್ಟರೆ ಬೇರೆ ಗೊತ್ತಿಲ್ಲ. ಲಾಗಾಯ್ತಿನಿಂದಲೂ ಬಿಜೆಪಿಗಾಗಿ ದುಡಿದಿದ್ದಾರೆ. ಕಳೆದ ಬಾರಿ ಟಿಕೆಟ್‌ ನಿರಾಕರಿಸಿದಾಗಲೂ ಪಕ್ಷ ನಿಷ್ಠೆ ಮರೆಯಲಿಲ್ಲ. ಆದರೆ ಇದೀಗ ಕೊಟ್ಟ ಮಾತಿನಂತೆ ಪರಿಷತ್‌ ಚುನಾವಣೆಯ ಟಿಕೆಟ್‌ ನೀಡದೆ ವಂಚಿಸಿದ್ದಾರೆ. ಇವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ರಾಷ್ಟ್ರಭಕ್ತರ ಬಳಗ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂಬ ಅಭಿಪ್ರಾಯ ಮಂಡಿಸಿದರು.