ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿಗೆ ಧರ್ಮಾಚರಣೆ ಮುಖ್ಯ. ಅರಿತು ಬಾಳುವುದರಿಂದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತಿ. ವಿಶ್ವ ಬಂಧುತ್ವ ಸಾರಿದ ವೀರಶೈವ ಧರ್ಮ ವೃಕ್ಷದ ತಾಯಿ ಬೇರಾಗಿ ಜೀವನ ದರ್ಶನದ ಅಮೂಲ್ಯ ಕೊಡುಗೆ ಕೊಟ್ಟ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ಭಾನುವಾರ ನಡೆದ ಶಿವಾದ್ವೈತ ಸಮಾವೇಶ ಹಾಗೂ ಶ್ರೀ ಜಗದ್ಗುರು ರೇಣುಕಾ ಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಕಲ ಜೀವರಾಶಿಗಳಿಗೆ ಸದಾ ಒಳಿತು ಬಯಸಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಸತ್ಯ ಸಾಕ್ಷಾತ್ಕಾರ ಪಡೆದ ಪರಮಾಚಾರ್ಯರು. ಅವರ ನಡೆ ನುಡಿಗಳಲ್ಲಿ ಸತ್ಯದ ಬೆಳಕು ಕಾಣುತ್ತೇವೆ. ಸತ್ಯವೇ ಅವರ ಜೀವನದ ಉಸಿರು ಹಸಿರು ಎಂದರು.ವೀರಶೈವ ಧರ್ಮದ ಪ್ರಾಚೀನತೆ ಮತ್ತು ಪರಂಪರೆ ಜೊತೆಗೆ ಆಧುನಿಕ ಜೀವ ಜಗತ್ತಿಗೆ ಅನ್ವಯಿಸುವ ಜಾಗೃತ ವಿಚಾರ ಹೊಂದಿದ ಶ್ರೇಷ್ಠ ಚಿಂತಕ ರವಿ ಹಂಜ್ ಅವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿ ನೀಡಿರುವುದು ತೃಪ್ತಿ ತಂದಿದೆ ಎಂದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾದ ರವಿ ಹಂಜ ಮಾತನಾಡಿ, ವೀರಶೈವ ಧರ್ಮ ಸಾಹಿತ್ಯ ಅಪಾರ. ಸತ್ಯ ಸೈದ್ಧಾಂತಿಕ ನೆಲೆ ಮೂಲ ಮರೆಯದೇ ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ. ವೀರಶೈವ ಧರ್ಮವನ್ನು ಛಿದ್ರಗೊಳಿಸುತ್ತಿರುವ ಕೆಲವರ ವರ್ತನೆ ಸರಿಯಲ್ಲ. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕ್ರಾಂತಿ ಎಲ್ಲ ಕ್ರಾಂತಿಗಳಿಗೆ ಸೆಲೆ. ಸತ್ಯದ ನಿಲುವು ಗಟ್ಟಿಗೊಳಿಸುವ ನನ್ನ ಪ್ರಯತ್ನ ಕಂಡು ಶ್ರೀ ರಂಭಾಪುರಿ ಜಗದ್ಗುರು ಬಹು ದೊಡ್ಡ ಪ್ರಶಸ್ತಿ ಅನುಗ್ರಹಿಸಿರುವುದು ನನ್ನ ಪೂರ್ವ ಜನ್ಮದ ಸುಕೃತ.ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಶೋಧನೆಯಲ್ಲಿ ತೊಡಗಿ ಸಾಹಿತ್ಯ ಸೇವೆ ಮುಂದುವರಿಸುತ್ತೇನೆ ಎಂದರು.ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್. ಜೀವರಾಜ್, ಬೆಂಗಳೂರಿನ ಶಿವಶಂಕರಪ್ಪ ಸಾಹುಕಾರ್, ಹಾಸನದ ಸಿದ್ಧೇಶ್ ನಾಗೇಂದ್ರ ಭಾಗವಹಿಸಿದ್ದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಡಾ.ಪ್ರಭು ಸಾರಂಗ ದೇವ ಸ್ವಾಮಿಗಳು ನೇತೃತ್ವ ವಹಿಸಿ ವಾಯ್ಸ್ ಆಫ್ ವೀರಶೈವ ಲಿಂಗಾಯತ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ದರು. ಶಿವಗಂಗಾ ಕ್ಷೇತ್ರದ ಡಾ.ಮಲಯ ಶಾಂತಮುನಿ ಸ್ವಾಮಿಗಳು ಮಾತನಾಡಿದರು.ತರೀಕೆರೆ ಕೂಡ್ಲೂರು ಬಸಪ್ಪ ಶಿವಮೂರ್ತಿ, ತುಮಕೂರಿನ ಬಿ.ಪಾಲಾಕ್ಷಯ್ಯ, ಬೆಂಗಳೂರಿನ ನಾಗರತ್ನ ಗಣೇಶ್ ಕುಮಾರ, ಸ್ನೇಹ ಶ್ರೀ ಶಿವಕುಮಾರಯ್ಯ ಎನ್., ಕೊಲ್ಲಾಪುರದ ಶಾಂತಮ್ಮ-ಶ್ರೀ ಪರಮೇಶ್ವರಯ್ಯ, ಕನ್ನಳ್ಳಿಯ ಎಸ್. ಶಾಂತರಾಜು, ಸಿದ್ಧಲಿಂಗಸ್ವಾಮಿಜಿಗೆ ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಆಶೀರ್ವದಿಸಿದರು.
೦೧ಬಿಹೆಚ್ಆರ್ ೧೧: ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತ್ಯ ಸಂಶೋಧಕ ರವಿ ಹಂಜ ಅವರಿಗೆ ರಂಭಾಪುರಿ ಶ್ರೀಗಳು ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಮಾಡಿದರು.