ಶಾಲೆಯಲ್ಲಿ ಹಲವು ಕಾರ್ಯಕ್ರಮ ನಡೆಸಿದರೂ ಅದಕ್ಕೆ ಪೋಷಕರ ಸಹಕಾರ ಅತ್ಯಗತ್ಯ. ನಿಮ್ಮ ಮಕ್ಕಳನ್ನು ಅಲಂಕರಿಸಿ ಸುಂದರವಾಗಿ ಸಿದ್ದಪಡಿಸಿ ಶಾಲೆಗೆ ಕಳುಹಿಸುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ಕೆಲಸ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಮತ್ತು ಪೋಷಕರಿಗೆ ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆ ನಡೆಯಿತು.ಸ್ಪರ್ಧೆಯಲ್ಲಿ ವಿಶೇಷವಾಗಿ ಮುಸ್ಲಿಂ ಸಮುದಾಯದ ಪೋಷಕರು ಸಹ ತಮ್ಮ ಮಕ್ಕಳಿಗೆ ಕೃಷ್ಣ, ರಾಧೆಯ ವೇಷಧರಿಸಿ ಭಾಗವಹಿಸಿ ಧರ್ಮ ಸಮಾನತೆ ಸಾರಿದರು. ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಸ್ಪರ್ಧೆಗೆ ಚಾಲನೆ ನೀಡಿದರು.
ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಶ್ರೀಕೃಷ್ಣ, ರಾಧೆ, ರುಕ್ಮಣಿ, ಕನಕದಾಸರು ಸೇರಿದಂತೆ ಹಲವು ವೇಷಗಳನ್ನು ಧರಿಸುವ ಮೂಲಕ ರಂಜಿಸಿದರು. ವಿಶೇಷವಾಗಿ ಪೋಷಕರಿಗೂ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು.ಹಲವು ಪೋಷಕರು ಕೃಷ್ಣ, ರಾಧೆ ವೇಷಧರಿಸಿ ಭಾಗವಹಿಸಿ ಸಂಭ್ರಮಿಸಿದರು. ವಿಶೇಷವಾಗಿ ಮುಸ್ಲಿಂ ಸಮುದಾಯದ ನೂರ್ ಫಾತೀಮ ಹಾಗೂ ಸಾರಿಯ ಸೀರಾನ್ ಎಂಬ ಪೋಷಕರು ತಮ್ಮ ಮಕ್ಕಳಿಗೆ ಶ್ರೀಕೃಷ್ಣ ವೇಷಭೂಷಣ ಹಾಕಿಸುವ ಮೂಲಕ ಸಮಾನತೆ ಸಂದೇಶ ಸಾರಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಹಾಗೂ ಪೋಷಕರಿಗೂ ಬಹುಮಾನ, ಪ್ರಶಸ್ತಿ ಪ್ರಮಾಣ ಪತ್ರ ನೀಡಿದರು. ಶಾಲಾ ಮಕ್ಕಳಿಂದ ಕೃಷ್ಣ ಕುರಿತ ಹಾಗೂ ಶಿಕ್ಷಕರ ಕುರಿತ ಹಲವು ನೃತ್ಯ, ನಾಟಕ ಪ್ರದರ್ಶನ ಮಾಡುವ ಮೂಲಕ ಪೋಷಕರು, ಮಕ್ಕಳನ್ನು ರಂಜಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಬಿಜಿಎಸ್ ಶಾಲೆಯೂ ಮಕ್ಕಳಲ್ಲಿ ಇರುವ ಪ್ರತಿಭೆ ಹೊರತೆಗೆಯಲು ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಶಾಲೆಯಲ್ಲಿ ಹಲವು ಕಾರ್ಯಕ್ರಮ ನಡೆಸಿದರೂ ಅದಕ್ಕೆ ಪೋಷಕರ ಸಹಕಾರ ಅತ್ಯಗತ್ಯ. ನಿಮ್ಮ ಮಕ್ಕಳನ್ನು ಅಲಂಕರಿಸಿ ಸುಂದರವಾಗಿ ಸಿದ್ದಪಡಿಸಿ ಶಾಲೆಗೆ ಕಳುಹಿಸುತ್ತಾರೆ. ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರವನ್ನು ಕಲಿಸುವ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು.ಇದೇ ವೇಳೆ ಶಿಕ್ಷಕರ ದಿನಾಚರಣೆ ಅಂಗವಾಗಿ ಎಲ್ಲಾ ಶಿಕ್ಷಕರನ್ನು ಅಭಿನಂದಿಸಲಾಯಿತು. ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಬಿಜೆಪಿ ಮುಖಂಡ ಎಚ್.ಎಲ್.ಮಂಜುನಾಥ್, ಕಾಂಗ್ರೆಸ್ ಮುಖಂಡ ಎಲ್.ಸಿ.ಮಂಜುನಾಥ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಬಿ.ಎಸ್.ಜಯರಾಮು, ಚನ್ನಮಾದೇಗೌಡ, ಎಸ್.ನಾಗಸುಂದರ್, ಹಾರೋಹಳ್ಳಿ ಪ್ರಕಾಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಶ್ವತ್ ಕುಮಾರೇಗೌಡ, ವಕೀಲ ಮುರುಳಿಧರ್ ಸೇರಿದಂತೆ ಹಲವರು ಹಾಜರಿದ್ದರು.