ಹಳ್ಳಿಕಾರ ಸಮುದಾಯದ ಮೂಲ ಪುರುಷನಾಗಿರುವ ಶ್ರೀ ಕೃಷ್ಣ ಪರಮಾತ್ಮ ಜಗದೋದ್ಧಾರಕರಾಗಿದ್ದಾರೆಂದು ಶ್ರೀ ಹಳ್ಳಿಕಾರ ಮಠದ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಹಳ್ಳಿಕಾರ ಸಮುದಾಯದ ಮೂಲ ಪುರುಷನಾಗಿರುವ ಶ್ರೀ ಕೃಷ್ಣ ಪರಮಾತ್ಮ ಜಗದೋದ್ಧಾರಕರಾಗಿದ್ದಾರೆಂದು ಶ್ರೀ ಹಳ್ಳಿಕಾರ ಮಠದ ಶ್ರೀ ಬಾಲಕೃಷ್ಣಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಶೆಟ್ಟಿಗೊಂಡನಹಳ್ಳಿಯಲ್ಲಿರುವ ಶ್ರೀ ಹಳ್ಳಿಕಾರ ಮಠದ ಆವರಣದಲ್ಲಿ ನಡೆದ ನಾಲ್ಕನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು.

ಶ್ರೀ ಕೃಷ್ಣ ಪರಮಾತ್ಮ ಜಗತ್ತಿನಲ್ಲೇ ಪೂಜಿಸುವ ಮಹಾನುಭಾವರಾಗಿದ್ದಾರೆ. ಇವರನ್ನು ಜಾತಿ, ಧರ್ಮ ಭೇದವಿಲ್ಲದೇ ಎಲ್ಲರೂ ಪೂಜಿಸುವರು. ಹಳ್ಳಿಕಾರರಿಗೆ ಹಳ್ಳಿಕಾರ್ ತಳಿಯ ರಾಸುಗಳು ದೇವರಿಗೆ ಸಮಾನ. ಶ್ರೀ ಕೃಷ್ಣ ಪರಮಾತ್ಮ ಹಳ್ಳಿಕಾರ್ ತಳಿಗಳ ರಾಸುಗಳನ್ನು ಮೇಯಿಸುತ್ತಿದ್ದರು ಎಂಬುದು ವಾಸ್ತವ. ಹಾಗಾಗಿ ಅನಾದಿಕಾಲದಿಂದಲೂ ಹಳ್ಳಿಕಾರರಿಗೆ ಶ್ರೀ ಕೃಷ್ಣ ಪರಮಾತ್ಮನೇ ದೈವರಾಗಿದ್ದಾರೆ. ಹಾಗಾಗಿ ಹಳ್ಳಿಕಾರರೆಲ್ಲರೂ ಶ್ರೀಕೃಷ್ಣನ ಪರಮ ಭಕ್ತರು ಎಂದು ಅವರು ಹೇಳಿದರು.

ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ದೊಡ್ಡೇರಿ ಕಟ್ಟೆಮನೆಯ ಮೂಲ ದೇವರಿಗೆ ಪೂಜೆ ಸಲ್ಲಿಸಿ ಹಳ್ಳಿಕಾರ್ ಎತ್ತುಗಳೊಂದಿಗೆ ಬೆಳ್ಳಿ ರಥದಲ್ಲಿ ಶ್ರೀಗಳನ್ನು ಮತ್ತು ಕೃಷ್ಣ ಮತ್ತು ರಾಧಾ ವೇಷ ಧರಿಸಿದ್ದ ಮಕ್ಕಳನ್ನು ಭವ್ಯ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಹಳ್ಳಿಕಾರ್ ಮಠ ಟ್ರಸ್ಟ್ ನ ಅಧ್ಯಕ್ಷ ನಾಗಯ್ಯ, ಟ್ರಸ್ಟ್ ನ ಗೌರವಾಧ್ಯಕ್ಷ ಪಟೇಲ್ ಪಾಂಡು ರಾಜಣ್ಣ, ಕೃಷ್ಣರಾಜು, ಪುಟ್ಟೆಗೌಡ, ದೊಡ್ಡೇಗೌಡ, ತಿಮ್ಮಪ್ಪ, ಮುಖ್ಯ ಶಿಕ್ಷಕಿ ಶಾಂತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.