ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋವುಗಳ ಅಕ್ರಮ ಸಾಗಣೆ, ಅನಧಿಕೃತ ಕಸಾಯಿಖಾನೆಗಳು, ಕಾನೂನು ಬಾಹಿರ ಗೋ ಹತ್ಯೆ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಕ್ರೀದ್ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗೋವುಗಳ ಅಕ್ರಮ ಸಾಗಾಟ, ಅನಧಿಕೃತ ಚಟುವಟಿಕೆ, ಕಾನೂನು ಬಾಹಿರ ಗೋ ಹತ್ಯೆ ಹೆಚ್ಚುವ ಸಾಧ್ಯತೆಯಿದೆ. ಹೀಗಾಗಿ ಜಾನುವಾರುಗಳ ಸಂರಕ್ಷಣೆ ಹಾಗೂ ಹತ್ಯೆ ನಿಷೇಧಿಸಲು ಕ್ರಮ ಕೈ ಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಕರ್ನಾಟಕ ಗೋ ಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣ ಕಾಯ್ದೆ ಅನ್ವಯ ಗೋಹಕ್ಕೆ ಗೋವುಗಳ ಅಕ್ರಮ ಸಾಗಾಟ, ಅನಧಿಕೃತ ವಧೆ, ಶಿಕ್ಷಾರ್ಹ ಗಂಭೀರ ಅಪರಾಧಗಳಾಗಿವೆ. ಆದರೂ ಹಬ್ಬಗಳ ಸಂದರ್ಭದಲ್ಲಿ ಅಕ್ರಮ ಜಾಲಗಳು ರಾತ್ರಿ ವೇಳೆ ಗೋವುಗಳ ಸಾಗಟ ಮಾಡುವುದು. ಜನವಸತಿ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ವಧೆ ಮಾಡುವ ಪ್ರಕರಣಗಳು ಆತಂಕ ಕಾರಿಯಾಗಿವೆ ಎಂದು ಮಾನವಿಯಲ್ಲಿ ತಿಳಿಸಲಾಗಿದೆ.

ಜಿಲ್ಲೆಯ ಎಲ್ಲಾ ಚೆಕ್‌ ಪೋಸ್ಟ್ ಗಳು, ಗಡಿ ಭಾಗಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ದಿನದ 24 ಗಂಟೆಯೂ ವಿಶೇಷ ತಪಾಸಣೆ ವ್ಯವಸ್ಥೆ ಕಲ್ಪಿಸಬೇಕು. ಗೋವು ಸಾಗಣೆ ವಾಹನಗಳ ದಾಖಲೆ, ಪರವಾನಗಿ, ಪಶು ವೈದ್ಯಕೀಯ ಪ್ರಮಾಣ ಪತ್ರ, ಸಾಕಣಿಕೆ ಕಾನೂನನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಇದಲ್ಲದೆ ಅನಧಿಕೃತ ಕಸಾಯಿಖಾನೆಗಳ ಮೇಲೆ ವಿಶೇಷ ದಾಳಿ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.


ಜಿಲ್ಲೆಯಾದ್ಯಂತ ರಾತ್ರಿ ಪಾಳಿಯಲ್ಲಿ ವಿಶೇಷ ಪೊಲೀಸ್ ಪೆಟ್ರೋಲಿಂಗ್ ವ್ಯವಸ್ಥೆ ಜಾರಿಗೆ ತರಬೇಕು. ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಚೋದನಕಾರಿ ಕಾನೂನುಬಾಹಿರ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪೋಸ್ಟ್ ಗಳ ಮೇಲೆ ವಿಶೇಷ ನಿಗಾ ವಹಿಸಬೇಕು. ತಾಲೂಕು ಮಟ್ಟದಲ್ಲಿ ವಿಶೇಷ ನಿಯಂತ್ರಣ ಕೊಠಡಿ ಸ್ಥಾಪಿಸಿ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಸಹಾಯವಾಣಿ ಒದಗಿಸಲು ಮನವಿಯಲ್ಲಿ ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಹಾಗೂ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳ ಬೇಕು. ಸಾರ್ವಜನಿಕ ಅಶಾಂತಿ ಕಾನೂನು ಸುವ್ಯವಸ್ಥೆ ಬಂದ ಹಾಗೂ ಸಂವಿಧಾನದ ನಿರ್ದೇಶಕ ತತ್ವಗಳ ಉಲ್ಲಂಘನೆ ಆಗಲಿ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ನೇರ ಹೊಣೆ ಎಂದು ತಿಳಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಶ್ರೀರಾಮ ಸೇನೆ ಮುಖಂಡರಾದ ಪೃಥ್ವಿರಾಜ್ ಕರ್ಲೇಕರ್, ಸುನಿಲ್ ಶೆಟ್ಟಿ, ಶಶಾಂಕ್ ಗೌಡ ಮತ್ತಿತರರಿದ್ದರು.ಫೋಟೋ ಇದೆ