- ಕರ್ನಾಟಕದ ರಾಜಕೀಯ ಪಕ್ಷಗಳಲ್ಲಿ ಹೊಂದಾಣಿಕೆ ರಾಜಕಾರಣ: ವಿಜಯೇಂದ್ರ ವಿರುದ್ಧ ಹರಿಹರ ಕ್ಷೇತ್ರ ಶಾಸಕ ಪರೋಕ್ಷ ಕಿಡಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಂಕಾಳ ವೈದ್ಯ ಹೆಸರನ್ನು ಬದಲಿಸಿ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ನೀಡಿರುವುದು ಬ್ಲ್ಯಾಕ್ ಮೇಲ್ ರಾಜಕಾರಣವಾಗಿದೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಕುಟುಕಿದ್ದಾರೆ.

ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಸದಸ್ಯರು ತಮ್ಮ ಮನೆಯಲ್ಲೇ ಇದ್ದಾರೆ. ತಾವು, ತಮ್ಮ ಮಗ ಶಾಸಕನಿದ್ದು, ಮೂರೂ ಜನ ರಾಜೀನಾಮೆ ನೀಡಿ, ಬೇರೆ ಪಕ್ಷ ಸೇರುತ್ತೇವೆಂದು ಎಸ್‌.ಎಸ್‌. ಮಲ್ಲಿಕಾರ್ಜುನ ಹೈಕಮಾಂಡ್‌ಗೆ ಹೇಳಿದ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ ಎಂದರು.

ಮೂವರೂ ರಾಜೀನಾಮೆ ಕೊಡುತ್ತೇವೆ ಎಂದಿದ್ದರೆ ಇಂತಹವರನ್ನು ಯಾರಾದರೂ ಕರೆದಿರಬೇಕಲ್ಲವೇ? ಕಳೆದ 20 ವರ್ಷಗಳಿಂದ ಹೊಂದಾಣಿಕೆ ರಾಜಕಾರಣದಿಂದಾಗಿ ನಮ್ಮ ರಾಜ್ಯದ ಅಭಿವೃದ್ಧಿಯೇ ಕುಂಠಿತವಾಗಿದೆ. ಎಸ್‌.ಎಸ್‌. ಮಲ್ಲಿಕಾರ್ಜುನ ಕಾಂಗ್ರೆಸ್ ಹೈಕಮಾಂಡ್‌ಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದರು.


ವಿಜಯೇಂದ್ರ ವಿರುದ್ಧ ಪರೋಕ್ಷ ಟೀಕೆ:

ಕರ್ನಾಟದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಹೊಂದಾಣಿಕೆ ರಾಜಕಾರಣ ಇದೆಯೆಂಬುದು ಇದರಿಂದಲೇ ಗೊತ್ತಾಗುತ್ತದೆ. ಶಾಮನೂರು ಮನೆತನಕ್ಕೆ ಕಷ್ಟ ಬಂದಾಗಲೆಲ್ಲಾ ಯಾರನ್ನು ಜ್ಞಾಪಿಸಿಕೊಳ್ಳುತ್ತಾರೆ? ಇನ್ನು ನಾನು ಹೇಳುತ್ತಿರುವುದು ಆ ಕುಟುಂಬಕ್ಕೆ ಬೇಕಾದಾಗಲೆಲ್ಲಾ ವೀರಶೈವ ಮಹಾಸಭಾ ಹೆಸರನ್ನು ಹೇಳಿಕೊಂಡು, ಶಾಮನೂರು ಶಿವಶಂಕರಪ್ಪ ಬೆಂಬಲ ಪಡೆಯುತ್ತಿದ್ದರು ಎಂದು ಪರೋಕ್ಷವಾಗಿ ವಿಜಯೇಂದ್ರ ವಿರುದ್ಧ ಅವರು ಕಿಡಿಕಾರಿದರು.

ನಮ್ಮ ರಾಜ್ಯದಲ್ಲಿ ಎಲ್ಲ ಪಕ್ಷಗಳ ಮುಖಂಡರೂ ಹೊಂದಾಣಿಕೆ ರಾಜಕಾರಣ‍ವನ್ನೇ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಹೆದರಿಸಿ, ಬೆದರಿಸಿ ಶಾಮನೂರು ಮಲ್ಲಿಕಾರ್ಜುನ ಸಚಿವ ಸ್ಥಾನವನ್ನು ಪಡೆದಿದ್ದಾರೆ. ಹೆದರಿಸಿದವರಿಂದ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ? ಮಲ್ಲಿಕಾರ್ಜುನ ಡೊನೇಷನ್ ಫ್ಯಾಕ್ಟರಿ ಮಾಡುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡುವುದಿಲ್ಲ ಎಂದು ಅವರು ಟೀಕಿಸಿದರು.

ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ನನಗೂ ಖುಷಿ ತಂದಿದೆ. ಎಸ್‌.ಎಸ್‌. ಮಲ್ಲಿಕಾರ್ಜುನ ಅವರಿಗಿಂತ ಮೊದಲ ಪಟ್ಟಿಯಲ್ಲೇ ಬಸವಂತಪ್ಪ ಹೆಸರು ಬಂದಿದ್ದು ನಮಗೆ ತುಂಬಾ ಹೆಮ್ಮೆಯಾಗಿದೆ. ಬಸವಂತಪ್ಪ ಬಡವರ ಕಷ್ಟದ ಬಗ್ಗೆ ಸಂಪೂರ್ಣ ಗೊತ್ತಿರುವಂತಹವರು. ಇಂತಹ ವ್ಯಕ್ತಿಗೆ ಸಚಿವರಾಗಿ ಮಾಡಿದ್ದಾರೆ. ಸದ್ಯಕ್ಕೆ ನಾವು ಪುಣ್ಯವಂತರು ಎಂದು ಬಿಜೆಪಿ ಶಾಸಕ ಬಿ.ಪಿ.ಹರೀಶ ಹರ್ಷ ವ್ಯಕ್ತಪಡಿಸಿದರು.

- - -

(ಬಾಕ್ಸ್‌)

* ನಾಗೇಂದ್ರಗೆ ಮಂತ್ರಿ ಪಟ್ಟ, ರಾಜ್ಯಕ್ಕೆ ಅಪಮಾನ

- ಡಿಕೆಶಿ ಆಳ್ವಿಕೆಯಲ್ಲಿ ಇಡೀ ರಾಜ್ಯದಲ್ಲೇ ಅವ್ಯವಸ್ಥೆ: ಬಿ.ಪಿ.ಹರೀಶ ದಾವಣಗೆರೆ: ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾದ ನಂತರ ಇಡೀ ರಾಜ್ಯ ಅವ್ಯವಸ್ಥೆಯಿಂದ ಕೂಡಿದ್ದು, ಭ್ರಷ್ಟಾಚಾರದ ಆರೋಪದ ಮೇಲೆ ಸಂಪುಟದಿಂದ ಹೊರಹೋಗಿದ್ದ ಬಿ.ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದು ರಾಜ್ಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ ಹೇಳಿದ್ದಾರೆ.

ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿಯ ಬಿ.ನಾಗೇಂದ್ರ ಭ್ರಷ್ಟಾಚಾರದ ಆರೋಪದಿಂದಾಗಿ ಸಂಪುಟದಿಂದ ಹೊರ ಹೋಗಿದ್ದವರು. ಅಂತಹವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆಂದರೆ ಇದು ರಾಜ್ಯಕ್ಕೆ ಮಾಡಿದ ಅಪಮಾನ. ಒಬ್ಬ ಸಚಿವ ದೆಹಲಿಗೆ ಹೋಗುವುದಕ್ಕೆ ಸಾಧ್ಯವಿಲ್ಲವೆಂದರೆ ಹೇಗೆ? ಅಂತಹ ವ್ಯಕ್ತಿಯ ಖಾತೆಯ ಕಾರ್ಯಕ್ರಮವನ್ನು ಯಾವ ರೀತಿ ಮಾಡುವುದಕ್ಕೆ ಸಾಧ್ಯ? ಸ್ವಲ್ವವೂ ಗೌರವ ಎಂಬುದೇ ಇಲ್ಲವಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- - -

-6ಕೆಡಿವಿಜಿ1, 2: ಬಿ.ಪಿ.ಹರೀಶ.