ಸಾರಾಂಶ
ಗಜೇಂದ್ರಗಡ ಪಟ್ಟಣದಿಂದ ಸುಕ್ಷೇತ್ರ ಧರ್ಮಸ್ಥಳಕ್ಕೆ ಬಸ್ ಸೌಲಭ್ಯ ಆರಂಭಿಸಲು ಸಾರಿಗೆ ಘಟಕದ ಅಧಿಕಾರಿಗಳು ಮುಂದಾಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಜಯ ಕರ್ನಾಟಕ ಸಂಘಟನೆಯ ಜಿಲಾಧ್ಯಕ್ಷ ರಫೀಕ್ ತೋರಗಲ್ ಹೇಳಿದರು.
ಗಜೇಂದ್ರಗಡ: ಪಟ್ಟಣದಿಂದ ಸುಕ್ಷೇತ್ರ ಧರ್ಮಸ್ಥಳಕ್ಕೆ ಬಸ್ ಸೌಲಭ್ಯ ಆರಂಭಿಸಲು ಸಾರಿಗೆ ಘಟಕದ ಅಧಿಕಾರಿಗಳು ಮುಂದಾಗದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಜಯ ಕರ್ನಾಟಕ ಸಂಘಟನೆಯ ಜಿಲಾಧ್ಯಕ್ಷ ರಫೀಕ್ ತೋರಗಲ್ ಹೇಳಿದರು.
ಪಟ್ಟಣದಿಂದ ಸುಕ್ಷೇತ್ರ ಧರ್ಮಸ್ಥಳಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಯ ಕರ್ನಾಟಕ ಸಂಘಟನೆಯಿಂದ ಗುರುವಾರ ಪಟ್ಟಣದ ಸಾರಿಗೆ ಘಟಕದ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಿಂದ ಸುಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಜನರು ಅಪಾರ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸರ್ಕಾರವು ಸಹ ಪಟ್ಟಣದ ಬಸ್ ನಿಲ್ದಾಣದಿಂದ ಧರ್ಮಸ್ಥಳಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ಆದರೆ ಇಲ್ಲಿನ ಘಟಕದ ನಿಷ್ಕಾಳಜಿಯಿಂದ ಬಸ್ ವ್ಯವಸ್ಥೆ ನಿಲ್ಲಿಸಲಾಗಿದೆ. ಪರಿಣಾಮ ಖಾಸಗಿ ಬಸ್ ಅಥವಾ ರೋಣ ಇಲ್ಲವೇ ಕುಷ್ಟಗಿ ಹಾಗೂ ಯಲಬುರ್ಗಾ ಮೂಲಕ ಧರ್ಮಸ್ಥಳಕ್ಕೆ ತೆರಳಬೇಕಾದ ಅನಿವಾರ್ಯತೆ ಇಲ್ಲಿನ ಜನತೆಗೆ ಉದ್ಭವಿಸಿದೆ. ಹೀಗಾಗಿ ೮ ದಿನದೊಳಗೆ ಧರ್ಮಸ್ಥಳಕ್ಕೆ ಬಸ್ ಸೌಕರ್ಯವನ್ನು ಭಕ್ತರಿಗೆ ಹಾಗೂ ಪ್ರಯಾಣಿಕರಿಗೆ ಒದಗಿಸಲು ಪಟ್ಟಣದ ಸಾರಿಗೆ ಘಟಕದ ವ್ಯವಸ್ಥಾಪಕರು ಮುಂದಾಗಬೇಕು ಎಂದು ಆಗ್ರಹಿಸಿದರು.ಸಂಘಟನೆಯ ಮುಖಂಡ ಶರಣಪ್ಪ ಚಳಗೇರಿ ಮಾತನಾಡಿ, ಪಟ್ಟಣ ಸೇರಿ ಸುತ್ತಲಿನ ೨೦ಕ್ಕೂ ಅಧಿಕ ಗ್ರಾಮಗಳ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳ ಪಾಲಕರು ಧರ್ಮಸ್ಥಳಕ್ಕೆ ತೆರಳುತ್ತಾರೆ. ಆದರೆ ಸಾರಿಗೆ ಘಟಕದ ನಿರ್ಲಕ್ಷ್ಯ ದಿಂದ ಶಿಕ್ಷಣ ಅರಿಸಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ನೂರಾರು ಸಂಖ್ಯೆಯಲ್ಲಿ ಹೋಗುವ ಜನರಿಗೆ ತೊಂದರೆಯಾಗಿದೆ. ಪರಿಣಾಮ ಖಾಸಗಿ ಬಸ್ ಅಥವಾ ನೆರೆಯ ತಾಲೂಕು ಕೇಂದ್ರಗಳಿಂದ ಧರ್ಮಸ್ಥಳಕ್ಕೆ ತೆರಳುವ ದುಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಾರಿಗೆ ಘಟಕದ ವ್ಯವಸ್ಥಾಪಕರು ಧರ್ಮಸ್ಥಳಕ್ಕೆ ಬಸ್ ಆರಂಭಿಸುವ ಮೂಲಕ ಇಲ್ಲಿನ ಭಕ್ತರ ಹಾಗೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದಿದ್ದರೆ ಸಂಘಟನೆಯಿಂದ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.ಸಂಘಟನೆಯ ತಾಲೂಕಾಧ್ಯಕ್ಷ ಮಹ್ಮದಗೌಸ್ ಅಕ್ಕಿ, ಶರಣಪ್ಪ ಕಡಬಲಕಟ್ಟಿ, ಶ್ರೀಕಾಂತ ತಾಳಿಕೋಟಿ ಮಾತನಾಡಿದರು.ಈ ವೇಳೆ ಪ್ರತಿಭಟನಾನಿರತ ಸಂಘಟನೆಯ ಮುಖಂಡರ ಅಹವಾಲು ಆಲಿಸಿದ ಘಟಕದ ವ್ಯವಸ್ಥಾಪಕ ರಾಘವೇಂದ್ರ ಬುದಾಪೂರ ಮಾತನಾಡಿ, ಪಟ್ಟಣದಿಂದ ಧರ್ಮಸ್ಥಳಕ್ಕೆ ಬಸ್ ವ್ಯವಸ್ಥೆಯನ್ನು ಕೆಲವೇ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಮೊಟಕುಗೊಳಸಿದರು.ಸಂಘಟನೆಯ ಮುಖಂಡರಾದ ಶರಣಪ್ಪ ಹಲಗಿ, ಲಾಡಸಾಬ ದೊಡ್ಡಮನಿ, ಹೈದರಅಲಿ ಹುನಗುಂದ, ರಮೇಶ ತಳವಾರ, ದಾವಲಸಾಬ ಮಳಗವಾಗಿ, ಮಾಬುಸಾಬ ಡಾಲಾಯತ್, ಕಾಶೀನಾಥ ಮುದಗಲ್, ಖಾಸಿಂಸಾಬ ಮುಚ್ಚಾಲಿ, ಮುತ್ತಯ್ಯ ಬಿನ್ನಾಳಮಠ, ರಸೂಲ್ ಮಾಲ್ದರ್, ಗಣೇಶ ಚಳಗೇರಿ, ಬಸವರಾಜ ನಿಡಗುಂದಿ, ಹನಮಂತಪ್ಪ ಜಿಗೇರಿ ಸೇರಿ ಇತರರು ಇದ್ದರು.