ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಭದ್ರ: ಡಿಸಿಎಂ ಡಿಕೆಶಿ

| Published : Mar 11 2024, 01:25 AM IST

ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಭದ್ರ: ಡಿಸಿಎಂ ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳಿಂದ ತಾಯಂದಿರ ಮೊಗದಲ್ಲಿ ನಗು ಕಾಣುತ್ತಿದೆ. ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ, ಪ್ರತಿ ಮನೆಯ ಯಜಮಾನಿಗೆ ೨೦೦೦ ರು. ತಲುಪುತ್ತಿದೆ. ಗಂಡಸರು ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಜನರಿಗೆ ಅನುಕೂಲವಾಗುವ ಇಂತಹ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ.

ಕನ್ನಡಪ್ರಭ ವಾರ್ತೆ ಮಂಡ್ಯಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನಮ್ಮ ಸರ್ಕಾರ ಸುಭದ್ರವಾಗಿದೆ. ಇಂತಹ ಕಾರ್ಯಕ್ರಮ ಕೊಟ್ಟಿದ್ದು ಯಡಿಯೂರಪ್ಪ, ಕುಮಾರಸ್ವಾಮಿ ಅಲ್ಲ, ನುಡಿದಂತೆ ನಡೆದದ್ದು ಕಾಂಗ್ರೆಸ್ ಸರ್ಕಾರ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಭಾನುವಾರ ನಗರದ ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

ಗ್ಯಾರಂಟಿ ಯೋಜನೆಗಳಿಂದ ತಾಯಂದಿರ ಮೊಗದಲ್ಲಿ ನಗು ಕಾಣುತ್ತಿದೆ. ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಓಡಾಡುತ್ತಿದ್ದಾರೆ, ಪ್ರತಿ ಮನೆಯ ಯಜಮಾನಿಗೆ ೨೦೦೦ ರು. ತಲುಪುತ್ತಿದೆ. ಗಂಡಸರು ವಿದ್ಯುತ್ ಬಿಲ್ ಕಟ್ಟುವಂತಿಲ್ಲ. ಜನರಿಗೆ ಅನುಕೂಲವಾಗುವ ಇಂತಹ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದರು.

೨೦೧೮ರ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲದೆ ಖಾಲಿ ಇದ್ದ ಮಂಡ್ಯದಲ್ಲಿ ಈಗ ೬ ಮಂದಿ ಗೆದ್ದಿದ್ದಾರೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮಗನನ್ನು ಗೆಲ್ಲಿಸಲು ನಿಮ್ಮ ಮುಂದೆ ಬಂದಿದ್ದೆ. ನೀವು ಓಟು ಕೊಡಲಿಲ್ಲ. ಆದರೂ ನಾನು ಮೈತ್ರಿಧರ್ಮ ಪಾಲಿಸಿ ಅವರ ಪರ ಪ್ರಚಾರ ಮಾಡಿದೆ. ಆದರೆ, ಈಗ ಅವರಿಗೆ ನಾವು ಬೇಡವಾಗಿದ್ದೇವೆ. ಬಿಜೆಪಿಯವರನ್ನು ಅಪ್ಪಿ ಮುದ್ದಾಡುತ್ತಿದ್ದಾರೆ. ಆದರೂ ಈ ಚುನಾವಣೆಯಲ್ಲಿ ಕೈ ಬಲಪಡಿಸಿ. ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಿ. ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳಿಗೆ ನಾವು ಸದಾ ಬದ್ಧರಾಗಿರುತ್ತೇವೆ ಎಂದು ಹೇಳಿದರು.

ಬರ ನಿರ್ವಹಣೆಯಲ್ಲಿ ಮೋದಿ ಸರ್ಕಾರ ನಿರ್ಲಕ್ಷ್ಯ: ಭರತ್ ರಾಜ್

ಮಳವಳ್ಳಿ:ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು, ಬರ ನಿರ್ವಹಣೆಯಲ್ಲಿ ಮೋದಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್‌.ಎಲ್.ಭರತ್ ರಾಜ್ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ತಲೆದೋರಿರುವ ಭೀಕರ ಬರಗಾಲದಿಂದ ನಾಗರಿಕರಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ಜಾನುವಾರುಗಳಿಗೆ ನೀರು, ಮೇವು ಇಲ್ಲದೆ ತತ್ತರಿಸುತ್ತಿವೆ. ಬೆಳೆದ ಬೆಳೆಗಳು ಒಣಗಿ ಹಾಳಾಗುತ್ತಿದೆ. ಕೂಡಲೇ ಸೂಕ್ತ ಪರಿಹಾರ ನೀಡಿ ಜನತೆ ಹಿತ ಕಾಪಾಡಬೇಕೆಂದು ಆಗ್ರಹಿಸಿದರು.

ಬರ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಸೇರಿದೆ ಎಂದು ವಿನಾಕಾರಣ ಆರೋಪ ಮಾಡುತ್ತಾ ಹೊರಟಿರುವ ಬಿಜೆಪಿ ನೀತಿಯನ್ನು ರಾಜ್ಯದ ಜನರು ಖಂಡಿಸಬೇಕು. ರಾಜ್ಯದ ತೆರಿಗೆಯನ್ನು ಕೇಂದ್ರಕ್ಕೆ ಏಕೆ ಕೊಡಬೇಕೆಂದು ಪ್ರಶ್ನಿಸಿದರು.ಗ್ಯಾರಂಟಿ ಯೋಜನೆಗಳನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತವೆ. ಸಮಾವೇಶ ಮಾಡುವುದನ್ನು ಬಿಟ್ಟು ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಹ ಹೆಚ್ಚಿನ ಗಮನ ನೀಡಬೇಕು. ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್‌.ಲಿಂಗರಾಜಮೂರ್ತಿ, ಪ್ರಮೀಳಾ, ಗುರುಸ್ವಾಮಿ, ಮಹಾದೇವು, ಹಿಪ್ಜುಲ್ಲಾ, ಮರಿಲಿಂಗೇಗೌಡ, ಚಿಕ್ಕಸ್ವಾಮಿ, ಸತೀಶ್, ಮೂರ್ತಿ, ಮಹೇಶ್ ಇದ್ದರು.