ಸಾರಾಂಶ
ಲೋಕಸಭಾ ಚುನಾವಣೆ ಬಳಿಕ ಮೋದಿ ಪ್ರಧಾನಿಯಾಗುವುದು ಎಷ್ಟು ಸತ್ಯವೋ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವುದು ಅಷ್ಟೆ ಸತ್ಯ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಭವಿಷ್ಯ ನುಡಿದರು.
ಗಜೇಂದ್ರಗಡ: ಲೋಕಸಭಾ ಚುನಾವಣೆ ಬಳಿಕ ಮೋದಿ ಪ್ರಧಾನಿಯಾಗುವುದು ಎಷ್ಟು ಸತ್ಯವೋ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವುದು ಅಷ್ಟೆ ಸತ್ಯ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಭವಿಷ್ಯ ನುಡಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ೨೦ನೇ ವಾರ್ಡಿನ ೮೪ನೇ ಬೂತ್ನಲ್ಲಿ ಬಿಜೆಪಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೋದಿ ಅವರು ದೇಶದ ಪ್ರಧಾನಮಂತ್ರಿಯಾಗಿ ೧೦ ವರ್ಷದ ಅವಧಿಯಲ್ಲಿ ವಿಶ್ವದ ಗಮನ ಸೆಳೆಯುವ ಜತೆಗೆ ಪಾರದರ್ಶಕ ಆಡಳಿತದ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ನಡೆಸುತ್ತಿದ್ದಾರೆ.
ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯವನ್ನು ಅಭಿವೃದ್ಧಿಹೀನವಾಗಿಸುತ್ತಿದೆ ಎನ್ನುವ ಅಸಮಾಧಾನ ವ್ಯಕ್ತವಾಗುತ್ತಲೇ ಇವೆ.
ಹೀಗಾಗಿ ಈಗಾಗಲೇ ಕಾಂಗ್ರೆಸ್ ಸರ್ಕಾರದಲ್ಲಿ ಬಣಗಳು ಹುಟ್ಟಿಕೊಂಡಿವೆ. ಪರಿಣಾಮ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದಲ್ಲಿನ ಅಸಮಾಧಾನಿತ ಬಣಗಳು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಲಿವೆ ಎಂದು ಭವಿಷ್ಯ ನುಡಿದರು.
ಬಿಜೆಪಿ ನಗರ, ಪಟ್ಟಣಗಳ ಅಭಿವೃದ್ಧಿಗೆ ಸೀಮಿತವಾಗದೆ ಗ್ರಾಮೀಣ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ, ರೈತರ ಸಂಕಷ್ಟ ನಿವಾರಣೆಗಾಗಿ ಕಿಸಾನ್ ಸಮ್ಮಾನ್, ಹೊಗೆ ರಹಿತ ಮನೆಗಳಿಗಾಗಿ ಉಜ್ವಲ ಹಾಗೂ ಕೈಗೆಟಕುವ ದರದಲ್ಲಿ ಔಷಧಿಗಾಗಿ ಜನೌಷಧಿ ಕೇಂದ್ರಗಳು ಮತ್ತು ಮನೆ, ಮನೆಗಳಿಗೆ ಜಲಜೀವನ ಮಿಷನ್ ಮೂಲಕ ಗಂಗೆಯನ್ನು ಹರಿಸಿದ್ದಾರೆ.
ಇಂತಹ ನೂರಕ್ಕೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಮೋದಿ ಸರ್ಕಾರವು ಮತ್ತೊಮ್ಮೆ ಕೇಂದ್ರದಲ್ಲಿ ಐತಿಹಾಸಿಕ ಗೆಲುವಿನ ಮೂಲಕ ಅಧಿಕಾರ ಹಿಡಿಯಲಿದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿ, ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪಕ್ಷದ ಕಾರ್ಯಕರ್ತರು ಪ್ರಚಾರ ಪಡಿಸುವ ಜತೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮರೆತಿರುವ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಜನತೆಗೆ ತಿಳಿಸಿ ಎಂದರು.
ಈ ವೇಳೆ ಪುರಸಭೆ ಹಂಗಾಮಿ ಅಧ್ಯಕ್ಷ ವೀರಪ್ಪ ಪಟ್ಟಣಶೆಟ್ಟಿ, ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ, ಪುರಸಭೆ ಸದಸ್ಯ ಮುದಿಯಪ್ಪ ಮುಧೊಳ, ಉಮೇಶ ಚನ್ನುಪಾಟೀಲ, ಉಮೇಶ ಮಲ್ಲಾಪುರ ಇದ್ದರು.