ರಾಜ್ಯ ಸರ್ಕಾರವು ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಲಿ: ನೌಕರರು

| Published : Jan 22 2024, 02:18 AM IST

ಸಾರಾಂಶ

ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎನ್.ಪಿ.ಎಸ್ ರದ್ದುಗೊಳಿಸಿ, ಓ.ಪಿ.ಎಸ್ ಜಾರಿ ಮಾಡುವ ಕುರಿತು ಕಳೆದ ಜ.೬ ರಂದು ನಡೆದ ಸಂಘದ ಪದಾಧಿಕಾರಿಗಳ ಸಬೆಯಲ್ಲಿ ತಿಳಿಸಿದಂತೆ ಮುಂಬರುವ ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶಿರಾ

ಸರ್ಕಾರವು ಐದೂ ಗ್ಯಾರಂಟಿಗಳನ್ನು ಈಗಾಗಲೇ ಯಶಸ್ವಿಗೊಳಿಸಿ, ರಾಜ್ಯದ ಜನ ಮನ್ನಣೆಗೆ ಪಾತ್ರವಾಗಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನೌಕರರಾದ ನಾವು ಭವಿಷ್ಯದಲ್ಲಿ ಪಿಂಚಣಿ ಇಲ್ಲದೆ, ಅಭದ್ರತೆಯನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ರಾಜಸ್ಥಾನ, ಛತ್ತೀಸಗಡ್, ಜಾರ್ಖಾಂಡ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿ ನಮ್ಮ ರಾಜ್ಯದಲ್ಲೂ ಎನ್.ಪಿ.ಎಸ್. ರದ್ದುಗೊಳಿಸುವ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ರಾಜ್ಯ ಸರಕಾರಿ ಎನ್.ಪಿ.ಎಸ್ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೆ.ಜಿ.ಮಂಜುನಾಥ್ ಒತ್ತಾಯಿಸಿದರು.

ಭಾನುವಾರ ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಸಭೆ ಸೇರಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಓಪಿಎಸ್ ಹಕ್ಕೊತ್ತಾಯ ಸಭೆ ನಡೆಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎನ್.ಪಿ.ಎಸ್ ರದ್ದುಗೊಳಿಸಿ, ಓ.ಪಿ.ಎಸ್ ಜಾರಿ ಮಾಡುವ ಕುರಿತು ಕಳೆದ ಜ.೬ ರಂದು ನಡೆದ ಸಂಘದ ಪದಾಧಿಕಾರಿಗಳ ಸಬೆಯಲ್ಲಿ ತಿಳಿಸಿದಂತೆ ಮುಂಬರುವ ಸಂಪುಟ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ಕೈಗೊಳ್ಳಬೇಕು. ಎನ್ ಪಿ ಎಸ್ ರದ್ದುಗೊಳಿಸಿ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ವಿಷಯವನ್ನು ರಾಜ್ಯ ಸರ್ಕಾರ ಅನುಮೋದಿಸುವವರೆಗೂ ನಿರಂತರ ಮನವಿ ಪತ್ರ ಸಲ್ಲಿಸಿ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಎನ್. ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ಪ್ರಸ್ತುತ ಎರಡೂವರೆ ಲಕ್ಷಕ್ಕೂ ಅಧಿಕ ನೌಕರರು ಸೇರಿ ನಿಗಮ ಮಂಡಳಿ, ಅನುದಾನಿತ ಸಂಸ್ಥೆಗಳ ನೌಕರರು ಸರ್ಕಾರದ ನಿರ್ಧಾರವನ್ನೇ ಎದುರು ನೋಡುತ್ತಿದ್ದು, ಎನ್.ಪಿ.ಎಸ್. ರದ್ದುಗೊಳಿಸುವುದರಿಂದ ರಾಜ್ಯ ಸರ್ಕಾರದ ೫ ಗ್ಯಾರಂಟಿಗಳ ಅನುಷ್ಠಾನಗೊಳಿಸಲು ವಾರ್ಷಿಕ ೧೮೬೫೫ ಕೋಟಿ ರು. ಗಳಷ್ಟು ಹಣ ಅಭಿವೃದ್ಧಿ ಕಾರ್ಯಗಳಿಗೆ ಲಭ್ಯವಾಗಲಿದೆ. ಕೂಡಲೇ ಎನ್.ಪಿ.ಎಸ್ ರದ್ದು ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹಣ ಕ್ರೋಢೀಕರಿಸಲು ಸಹಾಯವಾಗುತ್ತದೆ ಎಂದರು.

ಸಭೆಗೂ ಮುನ್ನ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರರನ್ನು ಭೇಟಿ ಮಾಡಿದ ನೌಕರರು, ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸುರೇಶ್, ಸಿ.ಎಂ.ಮಲ್ಲೇಶ್, ಎನ್ ಪಿ ಎಸ್ ನೌಕರರ ಸಂಘದ ಕಾರ್ಯದರ್ಶಿ ಹನುಮಂತರಾಜು, ಸರಕಾರಿ ನೌಕರರ ಸಂಘದ ಖಜಾಂಚಿ ನೇಜಂತಿ ರಾಮಣ್ಣ, ಡಿ.ಎಸ್.ಮನೋಹರ್, ಸಿ.ಆರ್.ಲಕ್ಷ್ಮೀಪತಿ, ಟಿ.ರುದ್ರೇಶ ನಾಯ್ಕ್, ಎನ್.ಎಂ.ಶಿವಲಿಂಗಯ್ಯ, ಜಿ.ಶಾಮು, ಸಿದ್ದೇಶ್ ಕುಮಾರ್ , ವೆಂಕಟೇಶ್ ನಾಯ್ಕ, ಬಾಲಕೃಷ್ಣ, ಶುಕೂರ್, ಶಾಹಿರಾಬಾನು, ಸಗೀರಾಬಾನು ಸೇರಿದಂತೆ ಹಲವರು ಹಾಜರಿದ್ದರು.