ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಟಿ.ಬಿ.ಕ್ರಾಸ್ ನಲ್ಲಿರುವ ಎಸ್.ಬಿ.ಜಿ. ಕ್ರೀಡಾಂಗಣದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮಾಯಸಂದ್ರ ಶಾಖೆಯ ವತಿಯಿಂದ ಮಂಗಳವಾರ ರಾಜ್ಯಮಟ್ಟದ ಚುಂಚಾದ್ರಿ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಕ್ರೀಡಾಕೂಟವನ್ನು ವಿದ್ಯುಕ್ತವಾಗಿ ಚಾಲನೆಗೊಳಿಸಿದರು.

ವಿವಿಧ ಜಿಲ್ಲೆಗಳಿಂದ ಬಂದ ಕ್ರೀಡಾಪಟುಗಳು ತಮ್ಮ ಧ್ವಜ ಹಿಡಿದು ಮುಂದೆ ಸಾಗಿದರು. ಅದರ ಹಿಂದೆ ಅನೇಕ ವಿದ್ಯಾರ್ಥಿನಿಯರು ಪೂರ್ಣಕುಂಭ ಹೊತ್ತು ವೇದಿಕೆ ಕಾರ್ಯಕ್ರಮಕ್ಕೆ ಸಾಗಿದರು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ ಈ ಕೂಟವು ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ದಿನದ ಅಂಗವಾಗಿ ನಡೆಯುತ್ತಿದೆ. ದೇಶದಲ್ಲಿ ಹ್ಯಾಂಡ್ ಬಾಲ್ ಕ್ರೀಡೆಯ ಮಹತ್ವದ ಬಗ್ಗೆ ಕ್ರೀಟಾಪಟುಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು.

ವಿವಿಧ ಜಿಲ್ಲೆಯಿಂದ 16 ತಂಡಗಳು ಭಾಗವಹಿಸಿದ್ದವು. ಅದರಲ್ಲಿ 7 ಬಾಲಕಿಯರು, 9 ಬಾಲಕರ ತಂಡಗಳು ಸ್ಪರ್ಧೆಗೆ ಆಗಮಿಸಿದ್ದವು. ತಾಲೂಕಿನ ಎಸ್.ಬಿ.ಜಿ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿತು. ಈ ಸಂದರ್ಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸೋಮಶೇಖರ್, ರಾಜ್ಯ ಹ್ಯಾಂಡ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಪುಟ್ಟರಂಗಪ್ಪ, ಶಿವರಾಂ, ಕಾರ್ಯದರ್ಶಿ ಲೋಕೇಶ್, ಟ್ರಸ್ಟಿನ ಮಾರ್ಗದರ್ಶಿ ಪಾಂಡುರಂಗ, ಎಸ್.ಬಿ.ಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎ.ಬಿ ಚಂದ್ರಶೇಖರ್, ಕೃಷಿ ವಿಜ್ಞಾನ ಕಾಲೇಜಿನ ಡೀನ್.ಶಿವಲಿಂಗೇಗೌಡ, ಮುಖ್ಯ ಶಿಕ್ಷಕ ಯಶ್ವಂತ್ ಮತ್ತು ಸಹ ಶಿಕ್ಷಕರು, ಕ್ರೀಡಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.