ರಾಜ್ಯದ ಪ್ರಥಮ 25 ಸಿಎಸ್‌ಸಿಗಳಿಗೆ ಉಡುಪಿ ಜಿಲ್ಲೆಯಲ್ಲಿ ಚಾಲನೆ

| Published : Jun 23 2025, 11:47 PM IST

ಸಾರಾಂಶ

ಈ ಸೇವಾ ಕೇಂದ್ರಗಳಿಂದ ನಿಜವಾದ ಅಧಿಕಾರದ ವಿಕೇಂದ್ರೀಕರಣವಾಗಲಿದೆ. ಇದುವರೆಗೆ ಜನಸಾಮಾನ್ಯರು ಮದುವೆ ನೋಂದಣಿ, ಪಿಂಚಣಿ, ವಿಮಾ ಸೌಲಭ್ಯ ಇತ್ಯಾದಿಗಳಿಗೆ ತಾಲೂಕು ಕಚೇರಿಗಳಿಗೆ ಅಲೆದಾಡಬೇಕಾಗಿತ್ತು, ಆದರೆ ಇನ್ನುಮುಂದೆ ಅದೆಲ್ಲವೂ ಜನರ ಊರಲ್ಲಿರುವ ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿಯೇ 24 ಅಥವಾ 48 ಗಂಟೆಗಳಲ್ಲಿ ಲಭ್ಯ ಆಗಲಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಇ-ಗವರ್ನೆನ್ಸ್ ಯೋಜನೆಯಡಿ ಕಾರ್ಯಾರಂಭ

ಕನ್ನಡಪ್ರಭ ವಾರ್ತೆ ಉಡುಪಿ

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತವು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ)ಗಳನ್ನು ತೆರೆಯುತ್ತಿರುವುದು ಸಹಕಾರಿ ರಂಗದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಲಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ವ್ಯಕ್ತಪಡಿಸಿದ್ದಾರೆ.ಅವರು ಸೋಮವಾರ, ಕೇಂದ್ರ ಸರ್ಕಾರದ ರಾಷ್ಟ್ರೀಯ ಇ-ಗವರ್ನೆನ್ಸ್ ಯೋಜನೆಯಡಿ ಉಡುಪಿ ಜಿಲ್ಲೆಯ 25 ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದರು.ಈ ಸೇವಾ ಕೇಂದ್ರಗಳಿಂದ ನಿಜವಾದ ಅಧಿಕಾರದ ವಿಕೇಂದ್ರೀಕರಣವಾಗಲಿದೆ. ಇದುವರೆಗೆ ಜನಸಾಮಾನ್ಯರು ಮದುವೆ ನೋಂದಣಿ, ಪಿಂಚಣಿ, ವಿಮಾ ಸೌಲಭ್ಯ ಇತ್ಯಾದಿಗಳಿಗೆ ತಾಲೂಕು ಕಚೇರಿಗಳಿಗೆ ಅಲೆದಾಡಬೇಕಾಗಿತ್ತು, ಆದರೆ ಇನ್ನುಮುಂದೆ ಅದೆಲ್ಲವೂ ಜನರ ಊರಲ್ಲಿರುವ ಸೌಹಾರ್ದ ಸಹಕಾರಿ ಸಂಸ್ಥೆಗಳಲ್ಲಿಯೇ 24 ಅಥವಾ 48 ಗಂಟೆಗಳಲ್ಲಿ ಲಭ್ಯ ಆಗಲಿವೆ ಎಂದವರು ಹೇಳಿದರು.

ಕೆಲವು ಸೌಹಾರ್ದ ಸಹಕಾರಿ ಸಂಸ್ಥೆಗಳಿಗೆ ಸಾಂಕೇತಿಕವಾಗಿ ಸಾಮಾನ್ಯ ಸೇವಾ ಕೇಂದ್ರಗಳ ಕೀಲಿಕೈಗಳನ್ನು ಹಸ್ತಾಂತರಿಸಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ದೇಶದಲ್ಲಿ 30 ಕೋಟಿಗೂ ಹೆಚ್ಚು ಜನರು ಸಹಕಾರಿ ಸಂಸ್ಥೆಗಳ ಲಾಭ ಪಡೆಯುತಿದ್ದಾರೆ. ಇದೀಗ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಜನರಿಗೆ ಇನ್ನೂ ಹೆಚ್ಚಿನ ಲಾಭವಾಗಲಿದೆ ಎಂದರು.ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ ಭಾಗವಹಿಸಿದ್ದರು. ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿರ್ದೇಶಕರಾದ ಮಂಜುನಾಥ ಕೆ.ಎಸ್., ಭಾರತಿ ಜಿ. ಭಟ್, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಪಿ.ಜಗನ್ನಾಥ ಶೆಟ್ಟಿ, ಸಿಎಸ್‌ಸಿ ಇ-ಗವರ್ನೆನ್ಸ್‌ ಸರ್ವೀಸಸ್ ಇಂಡಿಯಾ ಲಿ.ನ ಮುಖ್ಯಸ್ಥ ರಜಿತ್ ಟಿ.ಕೆ. ಉಪಸ್ಥಿತರಿದ್ದರು.

................

300 ಸಿಎಸ್‌ ಕೇಂದ್ರಗಳಲ್ಲಿ 100 ಸೇವೆಗಳು: ನಂಜನಗೌಡ

ರಾಜ್ಯದಲ್ಲಿ 6514 ಸೌಹಾರ್ದ ಸಹಕಾರಿ ಸಂಸ್ಥೆಗಳಿದ್ದು, 72 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಮಂದಿ ಇವುಗಳಲ್ಲಿ ದುಡಿಯುತಿದ್ದು, 735 ಕೋಟಿ ರು. ಲಾಭ ಗಳಿಸಿವೆ. 1683 ಸಂಸ್ಥೆಗಳು ಇ - ಸ್ಟಾಂಪಿಂಗ್ ಸೇವೆ ನೀಡುತ್ತಿದ್ದು, ಸರ್ಕಾರಕ್ಕೆ ಪ್ರತಿದಿನ 2 ಕೋಟಿ ರು. ಆದಾಯ ನೀಡುತ್ತಿವೆ ಎಂದು ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ರಾಜ್ಯದಲ್ಲಿ ಈಗಾಗಲೇ 125ಕ್ಕೂ ಹೆಚ್ಚು ಸೌಹಾರ್ದ ಸಹಕಾರಿ ಸಂಸ್ಥೆಗಳು ಸಿಎಸ್‌ಸಿ ಕೇಂದ್ರ ಆರಂಭಿಸಲು ಸಿದ್ಧವಾಗಿವೆ. ಒಟ್ಟು 300 ಸಿಎಸ್‌ಸಿ ಕೇಂದ್ರಗಳನ್ನು ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಕೇಂದ್ರಗಳ ಮೂಲಕ 19 ಬಗೆಯ ವಿಮೆಗಳು. ರೈಲ್ವೆ ಟಿಕೆಟ್ ಬುಕಿಂಗ್ ಜೊತೆಗೆ ಕೇಂದ್ರ ರಾಜ್ಯ ಸರ್ಕಾರಗಳ 100ಕ್ಕೂ ಅಧಿಕ ಸೇವೆಗಳು ಲಭ್ಯವಾಗುತ್ತವೆ ಎಂದರು.