ಕಾರವಾರ: ಸಂವಿಧಾನದ ಆಶಯಗಳು ಹಾಗೂ ಹಕ್ಕುಗಳ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ''''''''ಸಂವಿಧಾನ ಅರಿವು ರಾಜ್ಯ ಸಂಚಾರ'''''''' ಅಭಿಯಾನದಡಿ, ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಎನ್. ನಾಗಮೋಹನದಾಸ ಅವರು ರಚಿಸಿರುವ ''''''''ಸಂವಿಧಾನ ಓದು'''''''' ಪುಸ್ತಕದ 25 ಸಾವಿರ ಪ್ರತಿಗಳನ್ನು ರಾಜ್ಯಾದ್ಯಂತ ವಿತರಿಸಲಾಗುತ್ತಿದೆ ಎಂದು ಅಭಿಯಾನದ ರಾಜ್ಯ ಸಂಚಾರ ಸಮಿತಿ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್ ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಮಾಹಿತಿ ಪತ್ರ ಬಿಡುಗಡೆ ಮಾಡಿ ಅವರು, ಮಾಜಿ ಸಚಿವೆ ಹಾಗೂ ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ ಅವರು 2025ರ ಜು. 1ರಂದೇ ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಅಭಿಯಾನದಡಿ ಇದುವರೆಗೆ ಐದು ಸಾವಿರಕ್ಕೂ ಹೆಚ್ಚು ಜನರನ್ನು ''''''''ಸಂವಿಧಾನ ರಕ್ಷಕರ''''''''ನ್ನಾಗಿ ನೋಂದಣಿ ಮಾಡಲಾಗಿದೆ. ಸದ್ಯ 25 ಸಾವಿರ ಪುಸ್ತಕಗಳನ್ನು ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಒಟ್ಟು ಒಂದು ಲಕ್ಷ ''''''''ಸಂವಿಧಾನ ಓದು'''''''' ಪುಸ್ತಕಗಳನ್ನು ವಿತರಿಸುವ ಬೃಹತ್ ಗುರಿ ಹೊಂದಲಾಗಿದೆ ಎಂದು ಫರ್ನಾಂಡೀಸ್ ವಿವರಿಸಿದರು.

ರಾಜ್ಯದ 31 ಜಿಲ್ಲೆಗಳಲ್ಲೂ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕ ವಲಯದಿಂದ ಅಭೂತಪೂರ್ವ ಬೆಂಬಲ ಹಾಗೂ ಪ್ರೋತ್ಸಾಹ ವ್ಯಕ್ತವಾಗುತ್ತಿದೆ. ಈ ಕಾರ್ಯಕ್ಕಾಗಿ ಸಾಹಿತಿಗಳು, ಬರಹಗಾರರು ಸೇರಿದಂತೆ ವಿವಿಧ ಕ್ಷೇತ್ರಗಳ 180ಕ್ಕೂ ಹೆಚ್ಚು ಗಣ್ಯರ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಂದು ಮನೆ-ಮನೆಗೆ ತೆರಳಿ ''''''''ಸಂವಿಧಾನ ಓದು'''''''' ಪುಸ್ತಕ ತಲುಪಿಸುವ ಜವಾಬ್ದಾರಿ ಹೊತ್ತಿದೆ ಎಂದರು.

ಅಭಿಯಾನದ ರಾಜ್ಯ ಸಂಚಾರ ಸಮಿತಿ ಗೌರವಾಧ್ಯಕ್ಷ ಡಾ. ಮಹೇಶ ಗೋಳಿಕಟ್ಟಿ ಮಾತನಾಡಿ, ಸಂವಿಧಾನ ಓದು ಪುಸ್ತಕವನ್ನು ಈಗಾಗಲೇ ಪದವಿ ಹಾಗೂ ಬಿಇಡಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಮುಂದಿನ ಹಂತದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಇದನ್ನು ತಲುಪಿಸುವ ಯೋಜನೆ ಇದೆ. ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪೂರ್ಣಗೊಂಡ ಬಳಿಕ, ಎಲ್ಲ ಗ್ರಾಮ ಪಂಚಾಯಿತಿಗಳ ನೂತನ ಜನಪ್ರತಿನಿಧಿಗಳಿಗೂ ಈ ಪುಸ್ತಕ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯ ಸಂಚಾರದ ಸಂಚಾಲಕ ಕೆ. ರಮೇಶ ಮಾತನಾಡಿ, ಜಾಗೃತಿ ಮೂಡಿಸಲು ಕೇವಲ ಪುಸ್ತಕ ವಿತರಣೆ ಮಾತ್ರವಲ್ಲದೆ, ''ನಮ್ಮ ಸಂವಿಧಾನ'' ನಾಟಕ ಪ್ರದರ್ಶನ, ಜಾಗೃತಿ ಗೀತೆಗಳ ಗಾಯನ, ವಿಚಾರ ಸಂಕಿರಣಗಳು ಹಾಗೂ ಬೃಹತ್ ಸದಸ್ಯತ್ವ ಅಭಿಯಾನಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದಲೂ ಈ ಕಾರ್ಯಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.