ಕೋಟ: ಇಲ್ಲಿನ ಸಾಸ್ತಾನದ ಕೋಡಿ ಎಂಬಲ್ಲಿನ ಮನೆಯೊಂದರಲ್ಲಿ ಕಳವಾಗಿದ್ದ ಲಕ್ಷಾಂತರ ರು. ಮೌನ್ಯದ ಚಿನ್ನಾಭರಣ ಕೊರಗಜ್ಜನಿಗೆ ಪ್ರಾರ್ಥನೆ ಸಲ್ಲಿಸಿದ ಮೂರೇ ದಿನಗಳಲ್ಲಿ ಮರಳಿ ಸಿಕ್ಕಿದ್ದು, ಕಳಿಬೈಲು ಕೊರಗಜ್ಜನ ಸಾನಿಧ್ಯದ ಈ ಪವಾಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮನೆಮಾತಾಗುತ್ತಿದೆ.
ಸಾಸ್ತಾನ ಕೋಡಿ ಕುಟುಂಬವೊಂದು ಏ. 29ರಂದು ಮನೆಗೆ ಬೀಗ ಹಾಕಿ ಮದುವೆಗೆ ತೆರಳಿತ್ತು. ಇದನ್ನು ಗಮನಿಸಿದ ಕಳ್ಳರು, ಮನೆಗೆ ನುಗ್ಗಿ ಬೆಂಡೋಲೆ, ಕರಿಮಣಿ ಹಾಗೂ ಸರ ಸೇರಿದಂತೆ ಒಟ್ಟು 3.50 ಲಕ್ಷ ರು. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದರು.ಮದುವೆ ಮುಗಿಸಿ ಮನೆಗೆ ಮರಳಿದ ಕುಟುಂಬ ಕಳ್ಳತನದಿಂದ ಕಂಗೆಟ್ಟು, ಕಳಿಬೈಲು ಕೊರಗಜ್ಜನ ಸನ್ನಿಧಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿತು. ನಂತರ ಪೊಲೀಸರಿಗೂ ದೂರು ನೀಡಿತ್ತು.ಇದೀಗ ದೂರು ನೀಡಿದ ಮೂರೇ ದಿನದಲ್ಲಿ ಅಂದರೆ ಮೇ 1ರಂದು ಪಕ್ಕದ ಮನೆಯ ಜಗುಲಿ ಮೇಲೆ ಕಳವಾದ ಚಿನ್ನಾಭರಣಗಳು ಪತ್ತೆಯಾಗಿವೆ. ಬಹುಶಃ ಮನೆಯವರು ಕೊರಗಜ್ಜನಿಗೆ ದೂರು ನೀಡಿದ್ದು ತಿಳಿದು ಹೆದರಿದ ಕಳ್ಳರು ಆಭರಣಗಳನ್ನು ತಂದು ಅಲ್ಲಿಟ್ಟಿರಬಹುದು ಎಂದು ಶಂಕಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನೇ ಈ ಪವಾಡ ಮಾಡಿಸಿದ್ದಾನೆ ಎಂದು ಭಕ್ತರು ಕೊಂಡಾಡುತಿದ್ದಾರೆ. ಮರಳಿ ಚಿನ್ನಾಭರಣಗಳನ್ನು ಪಡೆದ ಕುಟುಂಬವು ಮತ್ತೆ ಕಳಿಬೈಲು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ.