ಶಾಸಕ ಎಚ್.ಡಿ.ತಮ್ಮಯ್ಯ ಎಚ್ಚರಿಕೆ। ಶ್ರೇಷ್ಠ ಜೀವನ ಪರಿ ವರ್ತನೆಯ ಮಹಾ ಅಭಿಯಾನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶಾಲಾ, ಕಾಲೇಜಿನ ಅಕ್ಕಪಕ್ಕದಲ್ಲಿ ವ್ಯಸನಕ್ಕೆ ಸಂಬಂಧಿಸಿದ ವಸ್ತುಗಳ ಮಾರಾಟ ಕಂಡುಬಂದಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.
ನಗರದ ಮೆಡಿಕಲ್ ಕಾಲೇಜಿನಲ್ಲಿ ಸೋಮವಾರ ಪ್ರಜಾ ಪಿತಾ ಬ್ರಹ್ಮಕುಮಾರೀಸ್ ಸಂಸ್ಥೆ ಸಹಯೋಗದಡಿ ನಶೆ ಮುಕ್ತ ಭಾರತ ಅಭಿಯಾನ ಪ್ರಯುಕ್ತ ಆಯೋಜಿಸಿದ್ದ ಹತ್ತು ಕೋಟಿ ನಶಾಮುಕ್ತರಾಗುವ ಪ್ರತಿಜ್ಞೆ ಮೂಲಕ ಶ್ರೇಷ್ಠ ಜೀವನ ಪರಿ ವರ್ತನೆಯ ಮಹಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯುವ ಪ್ರಜೆಗಳನ್ನು ನಾಡಿನಲ್ಲಿ ಬಲಿಷ್ಟಗೊಳಿಸಲು ನಶಾ ಮುಕ್ತ ಅಭಿಯಾನಕ್ಕೆ ಕರೆಕೊಟ್ಟಿದೆ.ನಾಗರಿಕ ಸಮಾಜದಲ್ಲಿ ಯುವ ಪೀಳಿಗೆ ವ್ಯಸನದ ಚಟುವಟಿಕೆಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಹೀಗಾಗಿ ರಾಜ್ಯ ಸರ್ಕಾರ ಸದೃಢ ಜೀವನಕ್ಕೆ ಆ.೧ ರಿಂದ ವ್ಯಸನಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದರು.
ಇತ್ತೀಚೆಗೆ ಮನುಷ್ಯನ ಜೀವನ ಒತ್ತಡಗಳಿಗೆ ಸಿಲುಕಿಕೊಂಡು ಮಾದಕ ಚಟಕ್ಕೆ ಬಲಿಯಾಗುತ್ತಿದ್ದಾನೆ. ಸ್ವಾಸ್ಥ್ಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಮಾನವ ವೈಯಕ್ತಿಕವಾಗಿ ಕುಗ್ಗದೇ ಆತ್ಮಬಲ, ಶಾಂತಿ, ಸಕಾರಾತ್ಮಕ ಚಿಂತನೆ, ಏಕಾಗ್ರತೆ ರೂಢಿಸಿ ಕೊಂಡಲ್ಲಿ ಚಟಕ್ಕೆ ಅಂಟಿಕೊಳ್ಳದೇ ಸಾತ್ವಿಕ ಜೀವನ ನಡೆಸಬಹುದು ಎಂದು ತಿಳಿಸಿದರು.
ಪ್ರಸ್ತುತ ಯುವಕರು ಸ್ನೇಹಿತರೊಂದಿಗೆ ಮೊದಲ ಬಾರಿ ವ್ಯಸನಕ್ಕೆ ದಾಸರಾಗುತ್ತಾರೆ. ಇದು ಕಾಲಕ್ರಮೇಣ ದೇಹದ ಅವಿ ಭಾಜ್ಯ ಅಂಗವಾಗುವ ಜೊತೆಗೆ ಆರೋಗ್ಯಯುತ ಶರೀರದ ಅಂಗಾಂಗ ಹಂತ ಹಂತವಾಗಿ ಬಲಹೀನಗೊಳಿಸುತ್ತಾ ಸಾವಿಗೆ ದಾರಿ ಮಾಡುತ್ತದೆ ಎಂದು ಎಚ್ಚರಿಸಿದರು.
ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಕ್ಕೆ ಸುಮಾರು ಮೂರುವರೆ ಕೋಟಿ ವೆಚ್ಚದಲ್ಲಿ ಮಳೆನೀರು ಕೊಯ್ಲು ನಿರ್ಮಿಸಿ, ಶಾಶ್ವತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದೆ. ಒಟ್ಟಾರೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಸದಾ ಕಾರ್ಯೋನ್ಮುಖವಾಗುತ್ತೇವೆ ಎಂದರು.ಮೆಡಿಕಲ್ ಕಾಲೇಜಿನ ಡೀನ್ ಡಾ. ಹರೀಶ್ ಮಾತನಾಡಿ ಕಾಲೇಜು ಹಂತದಲ್ಲಿ ದೇಹ ಆರೋಗ್ಯದಿಂದ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದೆ. ವಿದ್ಯಾರ್ಥಿಗಳು ಇದನ್ನು ಮನದಟ್ಟು ಮಾಡಿಕೊಳ್ಳಬೇಕು. ದುಶ್ಚಟಕ್ಕೆ ಬಲಿಯಾಗುವ ವ್ಯಕ್ತಿಯನ್ನು ಆದಷ್ಟು ಚಟದಿಂದ ದೂರಗೊಳಿಸುವ ಮಹತ್ತರ ಕಾರ್ಯ ಎಲ್ಲರೂ ಮಾಡಬೇಕು ಎಂದರು.
ಬ್ರಹ್ಮಾಕುಮಾರೀಸ್ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯ ಮಾತನಾಡಿ, ಹತ್ತು ಕೋಟಿ ಜನರು ನಶಾ ಮುಕ್ತರಾಗುವ ಪ್ರತಿಜ್ಞೆ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಲ್ಲಿ ಹಮ್ಮಿಕೊಳ್ಳುವ ಸಲುವಾಗಿ ಇಂದು ಶಾಸಕರಿಂದ ಮೆಡಿಕಲ್ ಕಾಲೇಜಿನಲ್ಲಿ ಚಾಲನೆ ನೀಡಲಾಗಿದೆ. ಒಟ್ಟಿನಲ್ಲಿ ರಾಷ್ಟ್ರದ ಭದ್ರಬುನಾದಿ ಯುವ ಪೀಳಿಗೆ ರಕ್ಷಿಸುವ ಮಹತ್ತರ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸ ಬೇಕು ಎಂದು ಹೇಳಿದರು.ಕಾರ್ಯಕ್ರಮಕ್ಕೂ ಮುನ್ನ ನಶಾಮುಕ್ತ ಭಾರತ ಅಭಿಯಾನ ಆರೋಗ್ಯ ಜಾಗೃತಿಗೆ ಸಂಚಾರ ವಾಹನಕ್ಕೆ ಶಾಸಕರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಡಾ.ಮಂಜುನಾಥ್, ಜ್ಞಾನ ರಶ್ಮಿ ಶಾಲೆ ಸಂಸ್ಥಾಪಕ ನಂದಕುಮಾರ್, ವೈದ್ಯ ಡಾ. ಅನಿತ್ಕುಮಾರ್ ಉಪಸ್ಥಿತರಿದ್ದರು.