ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಹಣ್ಣಿನ ಬೀಜ ಬಿತ್ತಿದರೆ ಹತ್ತು ವರ್ಷ ಮಾತ್ರ ಫಲ. ಮಕ್ಕಳಲ್ಲಿ ವಿದ್ಯಾಬೀಜ ಬಿತ್ತಿದರೆ ನೂರು ವರ್ಷ ಫಲ ನೀಡಲಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲಿಗೆ ಮಕ್ಕಳನ್ನು ಆಸ್ತಿ ಮಾಡಲು ಶ್ರಮಿಸುವಂತೆ ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ಎಸ್.ಕೃಷ್ಣ ಪೋಷಕರಿಗೆ ಕರೆ ನೀಡಿದರು.ಜೆಪಿಎಂ ವಿದ್ಯಾಸಂಸ್ಥೆ ಅವರಣದಲ್ಲಿ ಆಯೋಜಿಸಿದ್ದ ಜೈ ಹೋ ಜೆಪಿಎಂ ಸಂಭ್ರಮ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒಂದು ಗುರಿ ನೀಡಿ ಒತ್ತಡ ಹೇರದೆ ಉತ್ತೇಜನದೊಂದಿಗೆ ಸ್ಪೂರ್ತಿ ತುಂಬಿದಾಗಸಾಧನೆ ತಾನಾಗಿಯೇ ನಿಮ್ಮ ಹೆಗೆಲಿಗೆ ಏರಲಿದೆ ಎಂದರು.
ಈ ಶಾಲೆ ಶೈಕ್ಷಣಿಕ ಪ್ರವಾಸ ,ಮಕ್ಕಳ ಸಂತೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಅನುಕೂಲವಾಗುವಂತೆ ಸರಳ ಪರೀಕ್ಷೆ ಕಾರ್ಯಾಗಾರ ನಡೆಸುತ್ತಿದೆ ಎಂದರು.ಸತತವಾಗಿ 19 ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.ನೂರರಷ್ಟು ಫಲಿತಾಂಶ ಪಡೆಯುವುದರ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯ ಸಾಂಸ್ಕೃತಿಕ ಮೌಲ್ಯ ಉದಾತ್ತ ಚಿಂತನೆ ಬೆಳೆಸುವಲ್ಲಿ ಈ ನಾಡು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವಲ್ಲಿ ಸಂಸ್ಥೆ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಹಿತವಾದ ಹೊರೆ, ದಂಡರಹಿತ ಯಾವುದೇ ಶಿಕ್ಷೆಗಳನ್ನು ಮಕ್ಕಳಿಗೆ ನೀಡದೆ ಅವರಿಗೆ ತೊಂದರೆಯಾಗುವ ಸಾಮಾಜಿಕ ಗುಣಲಕ್ಷಣಗಳನ್ನು ತೋರದೆ ಉತ್ತಮ ಪ್ರತಿಕ್ರಿಯೆ ತೋರುತ್ತಿರುವ ಈ ಶಿಕ್ಷಣ ಸಂಸ್ಥೆ ನಮ್ಮ ಶಿಕ್ಷಣ ಇಲಾಖೆಗೆ ಗೌರವ ತಂದು ಕೊಡುವ ವಿದ್ಯಾಸಂಸ್ಥೆ ಎಂದರೆ ತಪ್ಪಾಗಲಾರದು ಎಂದರು.ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು. ಜೆಪಿಎಂ ವಿದ್ಯಾಸಂಸ್ಥೆ ಅಧ್ಯಕ್ಷ ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಖಜಾಂಚಿ ಕೇಶವ್, ನಿವೃತ್ತ ಪ್ರಾಂಶುಪಾಲರಾದ ವಿ.ಸ್ವಾಮಿ, ಸಿ.ಆರ್.ಪಿ.ಕೃಷ್ಣ, ಜಾನಪದ ಕಲಾವಿದ ಪ್ರಸನ್ನ ಕುಮಾರ್, ಉಪನ್ಯಾಸಕ ಚಂದ್ರು, ಮುಖ್ಯ ಶಿಕ್ಷಕ ಮಧುಕುಮಾರ್, ಸೇರಿದಂತೆ ಹಲವರು ಭಾಗವಹಿಸಿದ್ದರು.