ಧಾರವಾಡ:

ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡಲು ಗೊತ್ತುವಳಿಯನ್ನು ಸ್ವತಃ ಇದೇ ಪಾಲಿಕೆ ಸ್ವೀಕರಿಸಿ, ಇದೀಗ ಅದೇ ಗೊತ್ತುವಳಿಯನ್ನು ನಿರಾಕರಿಸುತ್ತಿರುವುದು ಧಾರವಾಡದ ದುರಾದೃಷ್ಟ.

ಏ. 30ರಂದು ಹುಬ್ಬಳ್ಳಿಯಲ್ಲಿ ನಡೆಸುತ್ತಿರುವ ಸಾಮಾನ್ಯ ಸಭೆಯಲ್ಲಿ ತಾನೇ ಮಾಡಿದ ಪ್ರತ್ಯೇಕ ಪಾಲಿಕೆ ಗೊತ್ತುವಳಿ ನಿರಾಕರಿಸಲು ಗೊತ್ತುವಳಿ ಸಿದ್ಧಪಡಿಸಿರುವುದು ಹಾಸ್ಯಾಸ್ಪದ ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಬೇಸರ ವ್ಯಕ್ತಪಡಿಸಿದೆ.

ಈ ಕುರಿತು ಬುಧವಾರ ಸಂಜೆ ಸಭೆ ನಡೆಸಿದ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡಬೇಕೆಂಬ ಸರ್ವಾನುಮತದ ಗೊತ್ತುವಳಿ ಧಿಕ್ಕರಿಸಿ ಹಿಂದೆ ಸರಿದು ಧಾರವಾಡ ಜನಕ್ಕೆ ದ್ರೋಹ ಮಾಡುತ್ತಿರುವುದು ಖಂಡನೀಯ. ಈ ಗೊತ್ತುವಳಿ ಸ್ವೀಕರಿಸಬೇಕೆಂಬ ಹುನ್ನಾರ ಹೊಂದಿರುವ ಪಾಲಿಕೆ ಸದಸ್ಯರು ಮತ್ತು ಹಾಗೂ ಶಾಸಕರು, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಸಿಗದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿಯೂ ಹೇಳಿದ್ದರು. ವಿಪರ್ಯಾಸವೆಂದರೆ ಇದೇ ಸದಸ್ಯರು ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ವೇದಿಕೆ ಕಿಡಿಕಾರಿದ್ದಾರೆ.

ಶಾಸಕ ಅರವಿಂದ ಬೆಲ್ಲದ ಸ್ಮಾರ್ಟ್‌ಸಿಟಿ ಯೋಜನೆ ಸಲುವಾಗಿ ಧಾರವಾಡಕ್ಕೆ ಹೊಸದಾಗಿ ಸಾವಿರ ಕೋಟಿ ರೂಪಾಯಿ ಅನುದಾನ ಕೊಡಿಸುವುದಾಗಿ ಹೇಳಿದ್ದರು. ಇದಕ್ಕೆ ಕಾರಣವೆಂದರೆ ಈ ಹಿಂದೆ ಬಿಡುಗಡೆಯಾದ ಸಾವಿರ ಕೋಟಿ ಅನುದಾನದಲ್ಲಿ ಧಾರವಾಡಕ್ಕೆ ಬಿಡಿಕಾಸು ಕೂಡಾ ಸಿಕ್ಕಿಲ್ಲ. ಹಣವೂ ಬೆಲ್ಲದ ಅವರು ಪ್ರತಿನಿದಿಸುತ್ತಿರುವ ಹುಬ್ಬಳ್ಳಿ ಭಾಗಕ್ಕೆ ಖರ್ಚು ಮಾಡಿದ್ದರು. ಶಾಸಕ ಬೆಲ್ಲದ ಮತ್ತು ಸಂಸದ ಸಚಿವ ಪ್ರಹ್ಲಾದ ಜೋಶಿ ಅವರು ಈಗ ಅನುದಾನದ ಬಗ್ಗೆ ಮಾತನಾಡಿ ಪ್ರತ್ಯೇಕ ಪಾಲಿಕೆ ಸೌಲಭ್ಯಕ್ಕೆ ವಿರೋಧಿಸುತ್ತಿದ್ದಾರೆ ಎಂದು ವೇದಿಕೆ ಆರೋಪಿಸಿದೆ.


ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಕಾಗಿರುವುದು ಇಲ್ಲಿಯ ನಾಗರಿಕರ ಅಸ್ಮಿತೆ ಮತ್ತು ಸ್ವಾಭಿಮಾನದ ಹಕ್ಕು. ಕಳೆದ 70 ವರ್ಷಳಿಂದಲೂ ಧಾರವಾಡಕ್ಕೆ ಅನ್ಯಾಯ ಆಗುತ್ತಲಿದೆ. ಮೊದಲು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಂತರ ವಿಧಾನಮಂಡಳ ಸರ್ವಾನುಮತದಿಂದ ಪ್ರತ್ಯೇಕ ಪಾಲಿಕೆ ಗೊತ್ತುವಳಿಯನ್ನು ಸ್ವೀಕರಿಸಿದ ನಂತರ ರಾಜ್ಯಪಾಲರು ಹತ್ತು ತಿಂಗಳಿಂದ ಇದಕ್ಕೆ ಸಹಿ ಹಾಕದೆ ಇಟ್ಟುಕೊಂಡಿದ್ದಾರೆ. ಇದನ್ನು ಯಾವ ಶಕ್ತಿಗಳು ತಡೆ ಹಿಡಿದಿವೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಮಿತಿ ಅಧ್ಯಕ್ಷ ಮನೋಜ ಪಾಟೀಲ್ ಒತ್ತಾಯಿಸಿದರು.

ವೇದಿಕೆ ಉಪಾಧ್ಯಕ್ಷ ಪ್ರೊ. ಆರ್.ಎಂ. ಷಡಕ್ಷರಯ್ಯ, ಪ್ರಧಾನ ಕಾರ್ಯದಸರ್ಶಿ ಎಂ.ಬಿ. ಕಟ್ಟಿ, ಜಿ.ಎಸ್. ಬ್ಯಾಡಗಿ, ಡಾ. ಪಿ.ಎ. ಪೊಲೀಸ್‌ಪಾಟೀಲ್, ಪ್ರೊ. ಎಸ್.ಬಿ. ಹಿರೇಮಠ, ಡಾ. ಎಸ್.ಜಿ. ಹಿರೇಮಠ ಇದ್ದರು.