ಸಾರಾಂಶ
-ತೋಟಗಾರಿಕೆ ಪಿತಾಮಹಾ ಡಾ.ಎಂ.ಹೆಚ್.ಮರಿಗೌಡರ ಜನ್ಮದಿನ । ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವೀರೇಂದ್ರ ಪಪ್ಪಿ ಅಭಿಪ್ರಾಯ
-------ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಹಣ್ಣು, ತರಕಾರಿಗಳ ಹೇಗೆ ಬೆಳೆಯುತ್ತಾರೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ಜ್ಞಾನ ಮೂಡಿಸುವುದು ಅಗತ್ಯವೆಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.ನಗರದ ತೋಟಗಾರಿಕೆ ಇಲಾಖೆ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಪಿತಾಮಹಾ ದಿ. ಡಾ.ಎಂ.ಹೆಚ್.ಮರಿಗೌಡರ ಜನ್ಮದಿನದ ಪ್ರಯುಕ್ತ ತೋಟಗಾರಿಕೆ ದಿನಾಚರಣೆ ಹಾಗೂ 2024-25ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಮಕ್ಕಳಿಗೆ ತೋಟಗಾರಿಕೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಹೆಚ್ಚಿನ ಗಮನಹರಿಸಿ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು. ತೋಟಗಾರಿಕೆ ಬಗ್ಗೆ ತರಬೇತಿ ಪಡೆಯುವ ಮೂಲಕ ತಮಗೆ ಬೇಕಾಗಿರುವ ಹಣ್ಣು, ತರಕಾರಿಗಳನ್ನು ತಾವೇ ಬೆಳೆದುಕೊಳ್ಳಲು ಮುಂದಾಗಬೇಕು ಎಂದರು.
ಹೆಚ್ಚಿನ ಪರಿಶ್ರಮ ಪಟ್ಟರೆ ಕೃಷಿ ಹಾಗೂ ತೋಟಗಾರಿಕೆಯನ್ನು ಲಾಭದಾಯಕವಾಗಿಸಬಹುದಾಗಿದ್ದು, ನೌಕರಿಗಿಂತಲೂ ಹೆಚ್ಚು ಆದಾಯ ಗಳಿಕೆ ಮಾಡಲು ಸಾಧ್ಯವಿದೆ. ಜತೆಗೆ ಇದೊಂದು ದೇಶಸೇವೆಯೂ ಆಗಲಿದೆ. ತೋಟಗಾರಿಕೆ ಪಿತಾಮಹಾ ಡಾ.ಎಂ.ಹೆಚ್.ಮರಿಗೌಡರು ತೋಟಗಾರಿಕೆ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಾಧಕರನ್ನು ಆದರ್ಶವಾಗಿಟ್ಟುಕೊಂಡು ತಾವುಗಳು ಸಹ ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುವಂತಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಭೋಗಿ ಮಾತನಾಡಿ, ಡಾ.ಎಂ.ಹೆಚ್.ಮರಿಗೌಡರ ಜನ್ಮ ದಿನಾಚರಣೆ ಪ್ರಯುಕ್ತ ತೋಟಗಾರಿಕ ದಿನ ಆಚರಣೆ ಮಾಡಲಾಗುತ್ತಿದೆ. ತೋಟಗಾರಿಕೆ ದಿನದ ಪ್ರಯುಕ್ತ ಶಾಲಾ ಮಕ್ಕಳಿಗೆ ಕಿಚನ್ ಗಾರ್ಡನ್ ಮಾಡುವ, ಮನೆಯ ಅಕ್ಕಪಕ್ಕ ಹಣ್ಣಿನ ಗಿಡಗಳನ್ನು ಬೆಳೆಯುವ ಪದ್ಧತಿ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ತರಬೇತಿ ನಂತರ ಶಾಲಾ ಮಕ್ಕಳಿಗೆ ವಿವಿಧ ಬಗೆಯ ತರಕಾರಿ ಬೆಳೆಗಳ ಬೀಜದ ಕಿಟ್ನ್ನು ವಿತರಣೆ ಮಾಡಲಾಗುವುದು ಎಂದರು.
ಮಾರುಕಟ್ಟೆಯಲ್ಲಿ ಸಿಗುವ ಹಣ್ಣು, ತರಕಾರಿಗಳು ಸಾಕಷ್ಟು ರಾಸಾಯನಿಕಗಳಿಂದ ಕೂಡಿದ್ದು, ಕೆಲವು ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಹಾಗಾಗಿ, ನಮ್ಮ ಮನೆಗೆ ಬೇಕಾದ ಹಣ್ಣು, ತರಕಾರಿ ಬೆಳೆದು ಜನರು ಉತ್ತಮ ಆರೋಗ್ಯ, ಪೌಷ್ಠಿಕ ವೃದ್ಧಿ ಮಾಡುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ದೇವರಾಜ್ ಮಾತನಾಡಿ, ಡಾ.ಎಂ.ಹೆಚ್.ಮರಿಗೌಡರ ಸಾಧನೆ ಕುರಿತು ಸವಿವರವಾಗಿ ಮಾಹಿತಿ ನೀಡಿದರು.ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ತರಕಾರಿ, ಹಣ್ಣು ಬೀಜಗಳ ಕಿಟ್ನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ನಂತರ ತೋಟಗಾರಿಕೆ ಆವರಣದಲ್ಲಿ ಗಿಡನೆಟ್ಟು ನೀರೆರೆದರು. ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ನಗರಸಭೆ ಸದಸ್ಯ ವೆಂಕಟೇಶ್, ಕೆಡಿಪಿ ಸದಸ್ಯ ನಾಗರಾಜ್ ಸೇರಿದಂತೆ ತೋಟಗಾರಿಕೆ ಇಲಾಖೆ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.
-----------ಪೋಟೋ: 8 ಸಿಟಿಡಿ1
ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಆಯೋಜಿಸಲಾದ ತೋಟಗಾರಿಕೆ ದಿನಾಚರಣೆಯಲ್ಲಿ ಶಾಸಕ ವೀರೇಂದ್ರ ಪಪ್ಪಿ ವಿದ್ಯಾರ್ಥಿಗಳಿಗೆ ತರಕಾರಿ, ಹಣ್ಣು ಬೀಜಗಳ ಕಿಟ್ ವಿತರಿಸಿದರು.--