ಸಾರಾಂಶ
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು
ಹೊನ್ನಾವರ: ಇದು ಸ್ಪರ್ಧಾತ್ಮಕ ಯುಗವಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ತೀವ್ರವಾದ ಪೈಪೋಟಿ ಕಂಡುಬರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಭಾವನೆ ಬೆಳೆಸಿಕೊಳ್ಳಬೇಕು ಎಂದು ಭಾರತಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಗುಣವಂತೆ ನುಡಿದರು.
ಅವರು ಕವಲಕ್ಕಿಯ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ "ಆಹಾರ ಮೇಳ "ವನ್ನು ಉದ್ಘಾಟಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗವನ್ನು ಪಡೆಯಬೇಕಾದರೆ ಪ್ರತಿಯೊಬ್ಬರು ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ. ಮಾತಿನಲ್ಲಿ ಹಾಗೂ ವ್ಯವಹಾರದಲ್ಲಿ ಚಾಕಚಕ್ಯತೆ ಇರಲಿ ಎಂದು ಹೆಗಡೆಯವರು ನುಡಿದರು.ಅಧ್ಯಕ್ಷತೆ ವಹಿಸಿ ಕೊಂಡಿದ್ದ ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸುವ ಉದ್ದೇಶದಿಂದಲೇ ನಾವು "ಆಹಾರ ಮೇಳ "ವನ್ನು ಏರ್ಪಡಿಸಿದ್ದೇವೆ.ಇದು ಮಕ್ಕಳಲ್ಲಿ ಲಾಭನಷ್ಟದ ಕಲ್ಪನೆಯನ್ನು ಮೂಡಿಸುತ್ತದೆ, ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುತ್ತದೆ ಎಂದರು.
ಶಿಕ್ಷಕ ಶಂಕರ ಶಿಂಗೆಯವರು ಸ್ವಾಗತಿಸಿದರು.ಶಿಕ್ಷಕಿ ರೇಷ್ಮಾ ಜೊಗಳೆಕರ್ ವಂದಿಸಿದರು, ಸಂಗೀತ ಯಾಜಿ ನಿರ್ವಹಿಸಿದರು.ಪಾಲಕರು ಹಾಗೂ ನಾಗರಿಕರು ಆಹಾರ ಮೇಳದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.