ಸದ್ಯದ ಪಠ್ಯಕ್ರಮ ಕೇವಲ ತರಗತಿ ಬೋಧನೆಗೆ ಸೀಮಿತವಾಗಿದೆ, ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸೃಜನಶೀಲತೆ, ಅನ್ವೇಷಣೆ, ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಧಾರವಾಡ:

ರಾಷ್ಟ್ರೀಯ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಮಂಗಳೂರು ವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ. ವಜೀದಾ ಬಾನು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ಆಯೋಜಿಸಿದ್ದ ಹತ್ತು ದಿನಗಳ ಆನ್‌ಲೈನ್ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಕೋನ ಮತ್ತು ಸಂವೇದನಾ ತರಬೇತಿಯಲ್ಲಿ ಮಾತನಾಡಿದ ಅವರು, ಸದ್ಯದ ಪಠ್ಯಕ್ರಮ ಕೇವಲ ತರಗತಿ ಬೋಧನೆಗೆ ಸೀಮಿತವಾಗಿದೆ, ವಿದ್ಯಾರ್ಥಿಗಳಿಗೆ ಪ್ರಯೋಗಾತ್ಮಕ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಸೃಜನಶೀಲತೆ, ಅನ್ವೇಷಣೆ, ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಸಾಂಪ್ರದಾಯಿಕವಾಗಿ ಶಿಕ್ಷಕರು ಕೇವಲ ಮಾಹಿತಿಯನ್ನು ಒದಗಿಸುವ ರಾಯಭಾರಿಗಳಾಗಬಾರದು. ಅವರು ಸಮಗ್ರ ಜ್ಞಾನ, ಪರಂಪರೆ, ಮೌಲ್ಯಗಳನ್ನು ಹೊಂದಿರುವ ಶಿಕ್ಷಣ ನೀಡಬೇಕಾದ ಅಗತ್ಯವಿದೆ. ವಿದ್ಯಾರ್ಥಿಗಳನ್ನು ಕಲಿಕೆಗೆ ಪ್ರೋತ್ಸಾಹಿಸುವ ಜತೆಗೆ ಕೌಶಲ್ಯಯುಕ್ತ ತರಬೇತಿ ನೀಡುವ ಅವಶ್ಯಕತೆ ಇದೆ. ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಐದು ವರ್ಷಗಳಲ್ಲಿ ಯುಜಿಸಿ ಎಂಎಂಟಿಸಿ ಕೇಂದ್ರಗಳ ‌ಮೂಲಕ 1.5 ಮಿಲಿಯನ್ ಶಿಕ್ಷಕರಿಗೆ ಹೊಸ ಶಿಕ್ಷಣ ನೀತಿಯ ಕುರಿತು ತರಬೇತಿ ‌ನೀಡಲು ಯೋಜಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸಲು ಮಾನವೀಯ ವಿಷಯಗಳ ಜತೆಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತದ ಪರಿಕಲ್ಪನೆಯನ್ನು ನೀಡುವುದು ಪ್ರಮುಖವಾದ ಉದ್ದೇಶವಾಗಿದ್ದು, ಮುಂಬರುವ ದಿನಗಳಲ್ಲಿ ''''''''ಸ್ಕಿಲ್ ಹಬ್'''''''' ಸ್ಥಾಪಿಸುವುದು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ‌ಮನೋಭಾವ ಹೆಚ್ಚಿಸಲು ಸಂಶೋಧನೆ ಸೇರಿದಂತೆ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಆಧುನಿಕತೆ ಪಠ್ಯಕ್ರಮವನ್ನು ಅಳವಡಿಸುವುದು ಹೊಸ ಶಿಕ್ಷಣ ನೀತಿಯ ಪ್ರಮುಖ ಉದ್ದೇಶವಾಗಿದೆ ಎಂದ ಅವರು, ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಎಐ, ವರ್ಚುವಲ್ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ವಿಶೇಷ ಜ್ಞಾನವನ್ನು ‌ನೀಡುವ ಜತೆಗೆ ಸರ್ವತೋಮುಖ ಬೆಳವಣಿಗೆಗೆ ಹೊಸ ಕೋರ್ಸ್‌ಗಳ ಅಳವಡಿಕೆ, ವಿದ್ಯಾರ್ಥಿಗಳಿಗೆ ಭಾರತೀಯ ಜ್ಞಾನ ಪರಂಪರೆಯ ಕುರಿತು ಎನ್‌ಇಪಿ ಅಡಿಯಲ್ಲಿ ಸರ್ಕಾರವು ಅನುದಾನವನ್ನು ಒದಗಿಸುತ್ತಿದೆ ಎಂದರು.

ಈ ವೇಳೆ ದೇಶದ ವಿವಿಧ ವಿಶ್ವವಿದ್ಯಾಲಯ, ‌ಕಾಲೇಜುಗಳ 95 ಶಿಕ್ಷಕರು, ಸಂಶೋಧಕರು, ಉದ್ಯಮ ಪರಿಣಿತರು ಸಂಪನ್ಮೂಲ ವ್ಯಕ್ತಿಯೊಂದಿಗೆ ಸಂವಾದ ನಡೆಯಿತು. ಅಧ್ಯಕ್ಷತೆಯನ್ನು ಮಾಳವೀಯ ಮಿಷನ್ ಟೀಚರ್ ಟ್ರೇನಿಂಗ್ ಸೆಂಟರ್ ನಿರ್ದೇಶಕ ಡಾ. ಬಿ.ಎಚ್.ನಾಗೂರ ವಹಿಸಿದ್ದರು.