ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲವಾಗಲು ಶ್ರಮಿಸಿ: ಡೀಸಿ ಡಾ.ಶಿವಶಂಕರ್

| Published : Jul 03 2024, 12:15 AM IST

ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲವಾಗಲು ಶ್ರಮಿಸಿ: ಡೀಸಿ ಡಾ.ಶಿವಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ಹಳ್ಳಿಯಿಂದ ಬಂದಿದ್ದೇವೆ ಅಲ್ಲದೇ, ಕನ್ನಡ ಮಾಧ್ಯಮದಲ್ಲಿ ಓದಿರುವುದು ಎಂಬ ಭಯವನ್ನು ಮೊದಲು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ, ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಲು ಶ್ರಮಿಸಲು ಮುಂದಾಗಬೇಕು.

ದೇವನಹಳ್ಳಿ: ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಾಣವಾಗುತ್ತಿರುವ ಆಡಿಟೋರಿಯಂ ಪೂರ್ಣಗೊಳ್ಳಲು ಸುಮಾರು 50 ಲಕ್ಷ ರು. ಬೇಕಾಗಬಹುದು. ಈ ಕಟ್ಟಡವನ್ನು ಸರ್ಕಾರ ಅಥವಾ ಖಾಸಗಿ ಕಂಪನಿಗಳ ಸಿಎಸ್‌ಆರ್‌ ಫಂಡ್‌ನಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ್‌ ತಿಳಿಸಿ, ಈ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡೆಯ ಪ್ರಗತಿಯನ್ನು ಶ್ಲಾಘಿಸಿದರು.

2023-24 ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ಯುವ ರೆಡ್‌ ಕ್ರಾಸ್ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಡಾ. ಶಿವಶಂಕರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ಹಳ್ಳಿಯಿಂದ ಬಂದಿದ್ದೇವೆ ಅಲ್ಲದೇ, ಕನ್ನಡ ಮಾಧ್ಯಮದಲ್ಲಿ ಓದಿರುವುದು ಎಂಬ ಭಯವನ್ನು ಮೊದಲು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ, ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಲು ಶ್ರಮಿಸಲು ಮುಂದಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಿ. ಮಂಜಯ್ಯ ಮಾತನಾಡಿ, ಕಳೆದ 40 ವರ್ಷಗಳ ಹಿಂದೆ ಕೇವಲ 30 ವಿದ್ಯಾರ್ಥಿಗಳಿಂದ ಆರಂಭವಾದ ಈ ಕಾಲೇಜಿನಲ್ಲಿ ಈಗ ಒಂದು ಸಾವಿರಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗೆ ಆಧ್ಯಾಪಕ ವೃಂದವೇ ಮುಖ್ಯ ಕಾರಣ ಎಂದು ತಿಳಿಸಿದರು.

ಸರ್ಕಾರದ ಆರ್ಥಿಕ ಇಲಾಖೆಯ ಪಿ. ವಿ. ಭೈರಪ್ಪ ಮಾತನಾಡಿದರು.ಜಿಲ್ಲಾಧಿಕಾರಿಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಬಿ. ರಾಜಣ್ಣ, ಸೋಮಶೇಖರ್‌ ಉಪಸ್ಥಿತರಿದ್ದರು, ಎನ್‌ಎಸ್ಎಸ್‌ ಘಟಕದ ಸಂಚಾಲಕ ಪ್ರೊ,ಕೆ.ಕೆ. ರವಿಚಂದ್ರ ಸ್ವಾಗತ ಕೋರಿದರು, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಪ್ರೊ. ಎಸ್‌ಎಂ. ರವಿಕುಮಾರ್‌ ನಿರೂಪಿಸಿದರು.