ಕನ್ನಡಪ್ರಭ ವಾರ್ತೆ ಪಾಂಡವಪುರ
ಹೈನುಗಾರಿಕೆ ಸಂಬಂಧ ಅಧ್ಯಯನ ಮಾಡಲು ಗುಜರಾತ್ ರಾಜ್ಯಕ್ಕೆ ಬಸ್ನಲ್ಲಿ ತೆರಳಿದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು, ಸಂಘದ ಕಾರ್ಯದರ್ಶಿಗಳ ತಂಡದ ವಾಹನಕ್ಕೆ ಮನ್ಮುಲ್ ಮುಖ್ಯವ್ಯವಸ್ಥಾಪಕ ನಿರ್ದೇಶಕ ಎಚ್.ಆರ್.ರಘು ಹಾಗೂ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ ನೀಡಿದರು.ಈ ವೇಳೆ ಎಚ್.ಆರ್.ರಘು ಮಾತನಾಡಿ, ಹೈನುಗಾರಿಕೆ ಕುರಿತು ವೈಜ್ಞಾನಿಕ ಅನುಭವ ಪಡೆದುಕೊಂಡು ತಮ್ಮ ರಾಜ್ಯದ ಹೈನುಗಾರಿಕೆಯಲ್ಲಿ ರೈತರು ಅಳವಡಿಸಿಕೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಗುಜರಾತ್ ರಾಜ್ಯದ ಆನಂದ್ ಎನ್ಡಿಡಿಬಿ ಪ್ರವಾಸಕ್ಕೆ ಇಲ್ಲಿನ ರೈತರು ಹಾಗೂ ಡೇರಿ ಕಾರ್ಯದರ್ಶಿಗಳನ್ನು ಕಳುಹಿಸಲಾಗಿದೆ ಎಂದರು.
ರೈತರು ಅಲ್ಲಿನ ತಂತ್ರಜ್ಞಾನ, ವೈಜ್ಞಾನಿಕವಾಗಿ ಹಸು ಸಾಕಾಣಿಕೆ, ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಕುರಿತು ಅಳವಡಿಸಿಕೊಳ್ಳಬೇಕು, ಪ್ರವಾಸದಲ್ಲಿ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಗುಜರಾತ್ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಗುಣಮಟ್ಟದ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಭಾಗದ ರೈತರು ಸಹ ಅದನ್ನು ಅಳವಡಿಕೆ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಇಲ್ಲಿನ ರೈತರು ಮತ್ತು ಡೇರಿ ಕಾರ್ಯದರ್ಶಿಗಳನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂದರು.
ಈ ವೇಳೆ ವ್ಯವಸ್ಥಾಪಕ ಡಾ.ಅಕ್ಲಪ್ಪರೆಡ್ಡಿ, ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗವಿಸ್ತರ್ಣಾಧಿಕಾರಿಗಳಾದ ಉಷಾ, ನಾಗೇಂದ್ರ, ಪ್ರಜ್ವಲ್, ಪ್ರಕಾಶ್, ಮಧುಶಂಕರ್, ಟೆಕ್ನಿಷಿಯನ್ ಆನಂದ್, ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶಿವಪ್ಪ ಸೇರಿದಂತೆ ಹಲವರು ಇದ್ದರು.
ಮಾಜಿ ಸಚಿವ ಎಂ.ಎಸ್.ಆತ್ಮಾನಂದರಿಗೆ ಅಭಿನಂದನೆ
ಪಾಂಡವಪುರ: ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಸಚಿವ ಎಂ.ಎಸ್.ಆತ್ಮಾನಂದರನ್ನು ಜನ್ಮದಿನದ ಪ್ರಯುಕ್ತ ತಾಲೂಕಿನ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.ಮಂಡ್ಯ ನಗರದ ಆತ್ಮಾನಂದರ ನಿವಾಸಕ್ಕೆ ತೆರಳಿದ ಕಾಂಗ್ರೆಸ್ ಮುಖಂಡರು ಶಾಲು ಹೊದಿಸಿ ಪಕ್ಷದ ಹಾರ ಹಾಕಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ವೇಳೆ ಕಿಸಾನ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಿ.ಆರ್.ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ನಿರ್ದೇಶಕರಾದ ಸಿದ್ದಲಿಂಗಯ್ಯ, ಉದಯ್, ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಎಂ.ಸತ್ಯೇಂದ್ರ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಮಾಜಿ ನಿರ್ದೇಶಕ ಎನ್.ಕೃಷ್ಣೇಗೌಡ ಇದ್ದರು.