ಕನ್ನಡಪ್ರಭ ವಾರ್ತೆ ತುಮಕೂರುಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ನಮ್ಮ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹಿರಿಯ ಮನೋವೈದ್ಯ ಡಾ.ಕೀರ್ತಿ ಸುಂದರ್ ಜಿ.ಎಸ್.ತಿಳಿಸಿದರು. ನಗರದ ವರಾನ ಗ್ಲೋಬಲ್ ಟ್ರಸ್ಟ್ ಅಂಗ ಸಂಸ್ಥೆಯಾದ ಅನನ್ಯ ಇನ್ಸಿಟಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್‌ನ ವತಿಯಿಂದ ಪ್ರಥಮ ವರ್ಷದ ಬಿ.ಸಿ.ಎ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ, ಸಮಯ ನಿರ್ವಹಣೆ, ಮಾನಸಿಕ ಆರೋಗ್ಯದ ಮಹತ್ವ ಹಾಗೂ ಜೀವನದಲ್ಲಿ ಯಶಸ್ಸು ಸಾಧಿಸಲು ಅಗತ್ಯವಾದ ಮೌಲ್ಯಗಳ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು. ನಿಮ್ಮ ಗುರಿಯನ್ನು ಸಾಧಿಸಲು ಮೊದಲು ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳಿ, ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ನೀವು ಉತ್ತಮ ಆರೋಗ್ಯವನ್ನು ಹೊಂದಿದ್ದಾಗ ಯಶಸ್ಸನ್ನುಗಳಿಸುವುದು ಸುಲಭ ಎಂದು ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ನಿಮ್ಮಲ್ಲಿ ನೀವು ಎಂದಿಗೂ ಬಿಟ್ಟುಕೊಡದ ಮನೋಭಾವವನ್ನು ಬೆಳೆಸಿಕೊಂಡಾಗ ಅರ್ಧ ದಾರಿಯನ್ನು ನಿಮ್ಮ ಗುರಿಯ ಬಳಿ ತಲುಪಿದಂತಾಗುತ್ತದೆ ಎಂದರು.ವಿದ್ಯಾರ್ಥಿಗಳು ನಿಮ್ಮ ಗುರಿಯನ್ನು ನಿಮ್ಮ ಸುಪ್ತ ಮನಸ್ಸಿನಲ್ಲಿ ಎಚ್ಚರವಾಗಿಟ್ಟುಕೊಂಡಾಗ ಯಶಸ್ಸು ನಿಮ್ಮದೇ ಎಂದು ಪ್ರೇರೇಪಿಸಿದರು. ಧ್ಯಾನ, ವ್ಯಾಯಾಮ, ಉತ್ತಮ ಆಹಾರ ಸಂಸ್ಕೃತಿ, ದಿನಕ್ಕೆ ಕನಿಷ್ಠ ಏಳು ಗಂಟೆಯ ನಿದ್ರೆಯಂತಹ ಉತ್ತಮ ಜೀವನ ಶೈಲಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಸಾಹಿತ್ಯದ ಕಡೆಗೆ ನಿಮ್ಮ ಒಲವನ್ನು ಹೆಚ್ಚಿಸಿಕೊಳ್ಳಬೇಕೆಂದು ಹೇಳಿದ ಡಾ.ಕೀರ್ತಿಸುಂದರ್ ಜಿ.ಎಸ್ ರವರು ಉಪನ್ಯಾಸದ ಕೊನೆಯಲ್ಲಿ ವಿದ್ಯಾರ್ಥಿಗಳೊಡನೆ ಚರ್ಚೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸುಲಭ ರೀತಿಯಲ್ಲಿ ಉತ್ತರಿಸಿ ಅವರ ಗೊಂದಲಗಳನ್ನು ಪರಿಹರಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿತು.ಇದೇ ಸಂದರ್ಭದಲ್ಲಿ ಮನೋವೈದ್ಯರಾದ ಡಾ.ಕೀರ್ತಿಸುಂದರ್ ಜಿ.ಎಸ್.ರವರಿಗೆ ಸನ್ಮಾನಿಸಲಾಯಿತು. ಅನನ್ಯ ಸಂಸ್ಥೆಯ ಟ್ರಸ್ಟಿ ಡಾ.ಹರೀಶ್.ಎಚ್‌ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.