ಮಠ ಪ್ರವೇಶಿಸಿದ ಸ್ವರ್ಣವಲ್ಲಿಶ್ರೀ ಉತ್ತರಾಧಿಕಾರಿ

| Published : Feb 14 2024, 02:19 AM IST

ಸಾರಾಂಶ

ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಶಿಷ್ಯ ಹಾಗೂ ಉತ್ತರಾಧಿಕಾರಿ ವಿದ್ವಾನ್ ನಾಗರಾಜ ಭಟ್ಟ ಅವರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ೫.೨೭ಕ್ಕೆ ಶ್ರೀಮಠವನ್ನು ಪ್ರವೇಶಿದರು.

ಶಿರಸಿ:

ತಾಲೂಕಿನ ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಶಿಷ್ಯ ಹಾಗೂ ಉತ್ತರಾಧಿಕಾರಿ ವಿದ್ವಾನ್ ನಾಗರಾಜ ಭಟ್ಟ ಅವರು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ೫.೨೭ಕ್ಕೆ ಶ್ರೀಮಠವನ್ನು ಪ್ರವೇಶಿದರು.

ಯಲ್ಲಾಪುರ ತಾಲೂಕಿನ ಈರಾಪುರದಿಂದ ಯಲ್ಲಾಪುರ ಪಟ್ಟಣದ ಮೂಲಕ ಸಾವಿರಾರು ಭಕ್ತರ ಸಮ್ಮುಖ ಹಾಗೂ ೧೫೦ ಹೆಚ್ಚಿನ ಕಾರಿನೊಂದಿಗೆ ಭವ್ಯ ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಶ್ರೀಮಠಕ್ಕೆ ಆಗಮಿಸಿದ ವಿ. ನಾಗರಾಜ ಭಟ್ಟರು, ಸ್ವರ್ಣವಲ್ಲೀ ಶ್ರೀಗಳೊಂದಿಗೆ ರಾಜರಾಜೇಶ್ವರಿ, ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ನಂತರ ಗುರುಮೂರ್ತಿ ಮಂದಿರಕ್ಕೆ ತೆರಳಿ, ಪೂಜೆ ಸಲ್ಲಿಸಿದರು.ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದ ಶ್ರೀಗಳು, ಇಂದಿನ ದಿನ ಮಠದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದ್ದು, ನಮ್ಮೆಲ್ಲರ ಆಪೇಕ್ಷೆಯಂತೆ ಯೋಗ್ಯತಾವಂತ ಶಿಷ್ಯರು ದೊರೆತಿದ್ದಾರೆ. ಸಾಧನೆ ಮತ್ತು ಜನರಿಗೆ ಬೋಧನೆ ಇದುವೆ ಗುರು ಪೀಠದ ಪರಂಪರೆ. ಕೇವಲ ಸಾಧನೆ ಇದ್ದರೆ ಸಾಧಕರಾಗುತ್ತಾರೆ. ಬೋಧನೆ ಇದ್ದರೆ ಪ್ರವಚನಕಾರಾಗುತ್ತಾರೆ. ವೈಯಕ್ತಿಕ ಸಾಧನೆ ಮೂಲಕ ಲೋಕದ ಹಿತ ಕಾಯುವುದು ಇರುತ್ತದೆ. ಬ್ರಹ್ಮಾಂಡದ ಸೃಷ್ಟಿಯಲ್ಲಿ ಸೂರ್ಯ ಮಂಡಲ ದಾಟಿ, ಬ್ರಹ್ಮ ಲೋಕಕ್ಕೆ ಹೋಗುವವರು ಸನ್ಯಾಸಿಗಳು ಮತ್ತು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರು ಮಾತ್ರ. ಗುರು ಪರಂಪರೆಯ ಸನ್ಯಾಸಿಯಾಗುವುದು ಬಹಳ ವಿಶೇಷವಾಗಿದ್ದು, ಆದರೆ ಪರಂಪರೆ ಚೆನ್ನಾಗಿ ಮುಂದುವರಿಯಬೇಕು ಎಂದರು.ನೂತನ ಶಿಷ್ಯರನ್ನು ಹುಡುಕಾಟ ನಡೆಸಲು ಪ್ರಾರಂಭಿಸಿ ಐದು ವರ್ಷವಾಗಿತ್ತು. ಕೈಯಲ್ಲಿ ರತ್ನ ಹಿಡಿದುಕೊಂಡು ಊರೆಲ್ಲ ಹುಡುಕಿದಂತಾಗಿತ್ತು. ಆ ನಂತರ ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಮಠದಲ್ಲಿಯೇ ಉತ್ತರಾಧಿಕಾರಿ ಲಭಿಸಿರುವುದು ಪುಣ್ಯ. ನಾಗರಾಜ ಭಟ್ಟ ಅವರನ್ನು ಬೇರೆ ಮಠದವರು ಸಹ ಕೇಳಿದ್ದರು. ಆದರೆ ನಾವು ಅವರನ್ನು ಬಿಟ್ಟುಕೊಡದೇ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲು ತೀರ್ಮಾನಿಸಿದ್ದೇವು. ಈಗ ಕಾಲ ಕೂಡಿ ಬಂದಿರುವುದು ಬಹಳ ವಿಶೇಷ ಎಂದ ಅವರು, ನಮಗೆ ನೀಡಿದ ಸಹಕಾರವನ್ನು ನೂತನ ಶ್ರೀಗಳಿಗೂ ನೀಡಿ ಎಂದು ನುಡಿದರು.ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಪ್ರಾಸ್ತಾವಿಕ ಮಾತನಾಡಿ, ಶ್ರೀಗಳ ಅಪೇಕ್ಷೆಯಂತೆ ನೂತನ ಶಿಷ್ಯರನ್ನು ಸ್ವೀಕರಿಸಲಾಗಿದ್ದು, ನಮ್ಮ ಮಠದಲ್ಲಿ ಅಧ್ಯಯನ ಮಾಡಿದ ಶಿಷ್ಯರು ಲಭಿಸಿರುವುದು ನಮ್ಮ ಪುಣ್ಯ. ಫೆ. ೨೨ರಂದು ಸನ್ಯಾಸ ಸ್ವೀಕರಿಸಿ, ನೂತನ ಶಿಷ್ಯರಾಗಿ ನಿಯೋಜನೆಗೊಳ್ಳಲಿದ್ದಾರೆ. ಮಗನನ್ನು ಮಠಕ್ಕೆ ನೀಡುವುದು ತಂದೆ-ತಾಯಿಗೆ ದುಃಖವಾದರೂ ಸಂತೋಷವಾಗುತ್ತದೆ. ಭಗವಂತನ ಅನುಗ್ರಹ ಹಾಗೂ ಶ್ರೀಗಳ ಆಶೀರ್ವಾದವಿದ್ದರೆ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂದರು.ನೂತನ ಶಿಷ್ಯರನ್ನು ಮಾತೆಯರು ಪೂರ್ಣಕುಂಭ ಸ್ವಾಗತ, ಡೊಳ್ಳು ಕುಣಿತ, ಪಂಚವಾದ್ಯಗಳ ಮೂಲಕ ಮಠಕ್ಕೆ ಬರಮಾಡಿಕೊಳ್ಳಲಾಯಿತು. ನೂತನ ಉತ್ತರಾಧಿಕಾರಿ ನಾಗರಾಜ ಭಟ್ಟರ ತಂದೆ-ತಾಯಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ, ಸನ್ಮಾನಿಸಿ, ಗೌರವಿಸಿದರು.ಈ ವೇಳೆ ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಾಗರಾಜ ಭಟ್ಟರ ತಂದೆ ಗಣಪತಿ ಭಟ್ಟ, ತಾಯಿ ಭುವನೇಶ್ವರಿ ಭಟ್ಟ, ಸಹೋದರ ಲಕ್ಷ್ಮೀಕಾಂತ ಭಟ್ಟ ಸೇರಿದಂತೆ ಮಠದ ಪುರೋಹಿತರು ಉಪಸ್ಥಿತರಿದ್ದರು.

ನನ್ನ ಜೀವನದಲ್ಲಿ ಹುಟ್ಟಿನಿಂದ ಇಲ್ಲಿಯ ವರೆಗೆ ಆಗದಷ್ಟು ಸಂತೋಷ ಇಂದು ಆಗಿದೆ. ಸನ್ಯಾಸ ಯೋಗ ಹಿಂದಿನ ಜನ್ಮದ ಸಾಧನೆಯಿಂದ ಬಂದಿರುವ ಯೋಗ. ತಂದೆ-ತಾಯಿಯ ತ್ಯಾಗಕ್ಕೆ ಪ್ರತಿಫಲವಿದೆ. ಅವರ ಮನಸ್ಸಿಗೆ ದುಃಖವಾಗುವುದು ಸಹಜ. ಆದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಒಳ್ಳೆಯ ಫಲ ದೊರೆಯುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಹೇಳಿದರು.