ಯಲಬುರ್ಗಾ: ಸಮಾಜದಲ್ಲಿ ಮನುಷ್ಯನು ಮನುಷ್ಯನನ್ನು ಸಮಾನತೆಯಿಂದ ನೋಡದೇ ಹೋದರೆ ಅದಕ್ಕಿಂತ ದೊಡ್ಡ ಮಹಾಪರಾಧ ಮತ್ತೊಂದಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ 2023-24ನೇ ಸಾಲಿನ ಕೆಕೆಆರ್ಡಿಬಿ ಮಂಡಳಿಯ ಸಿಎಂ ವಿವೇಚನಾ ನಿಧಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನದಡಿ ನಿರ್ಮಾಣವಾದ ಬುದ್ಧ, ಬಸವ ಅಂಬೇಡ್ಕರ್ ಸಾಂಸ್ಕೃತಿಕ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಸಮಾಜದಲ್ಲಿ ಜಾತಿ, ಬೇಧ-ಭಾವ ಇರಬಾರದು. ಧರ್ಮದ ಹೆಸರಿನಲ್ಲಿ ಇಂದಿಗೂ ಮೂಢನಂಬಿಕೆ, ಅಸ್ಪೃಶ್ಯತೆ ನಡೆಯುತ್ತಿರುವುದು ಖೇದಕರ. ಇದಕ್ಕೆಲ್ಲ ಕಾರಣ ಪಟ್ಟಭದ್ರ ಹಿತಾಸಕ್ತಿಗಳು. ಸಮಾಜ ಸುಧಾರಣೆಗೆ ಮಹಾತ್ಮರು ಸಾಕಷ್ಟು ಶ್ರಮಿಸಿದ್ದಾರೆ. ಮನುಷ್ಯರಾಗಿ ಬದುಕಲು ಸಮಾನತೆ ಇರಬೇಕು ಎಂದರು.
ಹಿರೇವಂಕಲಕುಂಟಾ ಹೋಬಳಿ ಕೇಂದ್ರದ ಚಿಕ್ಕವಂಕಲಕುಂಟಾದಲ್ಲಿ ಬಡವರ ಅನುಕೂಲಕ್ಕಾಗಿ ಸುಸಜ್ಜಿತವಾದ ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಭವನ ನಿರ್ಮಿಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಬಸವೇಶ್ವರ ಭಾವಚಿತ್ರಕ್ಕೆ ಅಲೆದಾಟ
ಬುದ್ಧ, ಬಸವ, ಅಂಬೇಡ್ಕರ್ ಸಾಂಸ್ಕೃತಿಕ ಭವನ ಲೋಕಾರ್ಪಣೆ ಬಳಿಕ ವೇದಿಕೆ ಕಾರ್ಯಕ್ರಮ ಪ್ರಾರಂಭದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕಿತ್ತು. ವೇದಿಕೆಯಲ್ಲಿ ಭಾವಚಿತ್ರ ಇಲ್ಲದಿರುವುದಕ್ಕೆ ಶಾಸಕ ಬಸವರಾಜ ರಾಯರಡ್ಡಿ ಕಾರ್ಯಕರ್ತರ ಮೇಲೆ ಸಿಡಿಮಿಡಿಗೊಂಡರು. ಭಾವಚಿತ್ರಕ್ಕಾಗಿ ಅರ್ಧಗಂಟೆ ಕಾರ್ಯಕರ್ತರು ಅಲೆದಾಡಿದರು. ನಂತರ ಫೋಟೋ ತಂದು ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ, ಗಣ್ಯರಾದ ಎಸ್.ಆರ್. ನವಲಿಹಿರೇಮಠ, ಯಂಕಣ್ಣ ಯರಾಶಿ, ಮಹೇಶ ಹಳ್ಳಿ, ಪಿಡಬ್ಲುಡಿ ಎಇಇ ಬಿ. ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ ಸಕ್ರಿ ಮಾತನಾಡಿದರು.
ಇದೇ ವೇಳೆ ಆರು ಜೋಡಿಗಳು ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಾಮೂಹಿಕ ವಿವಾಹ ನಿಮಿತ್ತ ಕುಂಭ ಮೆರವಣಿಗೆ ಜರುಗಿತು.ಡಿವೈಎಸ್ಪಿ ಮುತ್ತಣ್ಣ ಸಾವರಗೋಳ, ಸಿಪಿಐ ಮೌನೇಶ್ವರ ಮಾಲಿಪಾಟೀಲ್, ಪಿಎಸ್ಐ ಗುರುರಾಜ, ಉಪ ತಹಸೀಲ್ದಾರ್ ವಿಜಯಕುಮಾರ ಗುಂಡೂರ, ಸಿಡಿಪಿಒ ಬೆಟದೇಶ ಮಾಳೆಕೊಪ್ಪ, ಪ್ರಮುಖರಾದ ರಾಘವೇಂದ್ರಾಚಾರ್ ಜೋಶಿ, ವೀರನಗೌಡ ಪಾಟೀಲ್, ಮಹೇಶ ಹಳ್ಳಿ, ಹನುಮಂತಗೌಡ ಚಂಡೂರ, ಷಣ್ಮುಖಪ್ಪ ಬಳ್ಳಾರಿ, ಎ.ಜಿ. ಭಾವಿಮನಿ, ಫರೀದಾ ಬೇಗಂ, ಶರಣಪ್ಪ ಉಪ್ಪಾರ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಸುಧೀರ ಕೊರ್ಲಹಳ್ಳಿ, ಸಾವಿತ್ರಿ ಗೊಲ್ಲರ, ಚಂದ್ರಶೇಖರಯ್ಯ ಭಾನಾಪುರ, ಅಪ್ಪಣ್ಣ ಜೋಶಿ, ಹಂಪಯ್ಯಸ್ವಾಮಿ ಹಿರೇಮಠ, ರುದ್ರಪ್ಪ ಮರಕಟ್, ಅಶೋಕ ಹರ್ಲಾಪುರ, ಬಸವರಾಜ ಹಿರೇಮನಿ, ಹನುಮಂತ ಕಲಭಾವಿ, ಆದೇಶ ರೊಟ್ಟಿ, ರವಿಚಂದ್ರ ಹೊಸೂರ, ಚಂದ್ರಪ್ಪ ಕುರಿ, ನಾಗರಾಜ ನವಲಹಳ್ಳಿ, ಅಶ್ರಫಲಿ ಕುಷ್ಟಗಿ, ರಮೇಶ ಚಿಕ್ಕಮನ್ನಾಪುರ, ಮಂಜುನಾಥ ಸಜ್ಜನ, ಪ್ರಕಾಶ ಮಾಲಿಪಾಟೀಲ್, ಸೇರಿದಂತೆ ಮತ್ತಿತರರು ಇದ್ದರು.