ಸುಪ್ರೀಂಕೋರ್ಟ್ ಆದೇಶ ತಕ್ಷಣ ಜಾರಿ ಮಾಡಿ: ಮೇಲಿನಮನಿ

| Published : Aug 04 2024, 01:27 AM IST / Updated: Aug 04 2024, 01:28 AM IST

ಸಾರಾಂಶ

ಮೀಸಲಾತಿ ವರ್ಗೀಕರಣ ಸಂಬಂಧ ಸುಪ್ರೀಂ ಕೋರ್ಟ್ ಮಹಾ ತೀರ್ಪು ನೀಡಿರುವುದನ್ನು ಸ್ವಾಗತಿಸಿ ಹುಣಸಗಿ ಪಟ್ಟಣದಲ್ಲಿ ದಲಿತ ಮಾದಿಗ ಸಮುದಾಯದ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಮೀಸಲಾತಿ ವರ್ಗೀಕರಣ ಸಂಬಂಧ ಸುಪ್ರೀಂಕೋರ್ಟ್ ಮಹಾ ತೀರ್ಪು ನೀಡಿರುವುದನ್ನು ಸ್ವಾಗತಿಸಿ, ಪಟ್ಟಣದಲ್ಲಿ ದಲಿತ ಮಾದಿಗ ಸಮುದಾಯದ ಮುಖಂಡರು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ದಲಿತ ಯುವ ಮುಖಂಡ ಸಿದ್ದಣ್ಣ ಮೇಲಿನಮನಿ ಮಾತನಾಡಿ, ಒಳ ಮೀಸಲಾತಿಯನ್ನು ಎತ್ತಿ ಹಿಡಿಯುವ ಮೂಲಕ ಸುಪ್ರೀಂ ಕೋರ್ಟ್ 7 ಸದಸ್ಯರ ಪೀಠ ನೀಡಿರುವ ತೀರ್ಪು ಸಾಮಾಜಿಕ ನ್ಯಾಯಕ್ಕೆ ಹಾಗೂ ಕಳೆದ 30 ವರ್ಷಗಳ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು.

ಪರಿಶಿಷ್ಟ ಜಾತಿಯಲ್ಲಿಯೇ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಮೀಸಲು ಕಲ್ಪಿಸುವ ವಿಷಯದಲ್ಲಿ ತಾರತಮ್ಯವಾಗುತ್ತಿತ್ತು. ನಿರೀಕ್ಷಿತ ಮಟ್ಟದಲ್ಲಿ ಇಂಥ ಅನೇಕ ಸಮುದಾಯಗಳಿಗೆ ಮೀಸಲು ಸಿಗುತ್ತಿರುಲಿಲ್ಲ. ಜಾತಿವಾರು ವರ್ಗೀಕರಣ ಮಾಡಿ ಜನಸಂಖ್ಯೆಗನುಗುಣವಾಗಿ ಮಾದಿಗ ಸಮುದಾಯಕ್ಕೆ ಮೀಸಲು ಸಿಗಬೇಕು ಎಂಬ ಬಹು ದಿನಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕವಾಗಿದೆ ಎಂದರು.

ಮಾದಿಗ ಸಮಾಜದ ಬೇಡಿಕೆ ಪರಿಗಣಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ವಿಶೇಷ ಪೀಠ ಸ್ಥಾಪನೆಗೆ ಕಾರಣರಾಗುವ ಮೂಲಕ ಬೇಡಿಕೆಗೆ ಸ್ಪಂದಿಸಿದ್ದಾರೆ. ನೀಡಿದ ಭರವಸೆಯಂತೆ ಕಾಲಮಿತಿ ಒಳಗೆ ಆದೇಶ ಹೊರಬರಲು ಕಾರಣವಾಗಿದ್ದಾರೆ. ಈ ತೀರ್ಪಿನಿಂದ ಇಡೀ ದೇಶದ ಮಾದಿಗ ಸಮಾಜದ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದ ಅವರು, ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ನೋಟಪ್ಪ ಗ್ಯಾಂಗಮ್ಯಾನ್, ಪರಮಣ್ಣ ಕಟ್ಟಿಮನಿ, ನಂದಪ್ಪ ಪೀರಾಪೂರ, ಸಿದ್ದಪ್ಪ ಅಮ್ಮಣ್ಣ, ಭೀಮಣ್ಣ, ಸುರೇಶ ದೊಡ್ಡಮನಿ, ಲೋಹಿತ ದೊಡ್ಡಮನಿ, ಭೀಮಣ್ಣ ಬೇವಿನಾಳ, ತಿಪ್ಪಣ್ಣ ಬೇನಕನಹಳ್ಳಿ, ಕುಮಾರ ಹೊಸಹಳ್ಳಿ, ಭೀಮಣ್ಣ ಚೌನಿ, ಗೋಪಾಲ ಕಟ್ಟಿಮನಿ, ಪರಸಪ್ಪ ಕಡಿಮನಿ ಇತರರಿದ್ದರು.