ಸಾರಾಂಶ
ಬೆಂಗಳೂರು : ಕಡಿಮೆ ನೋವು, ಆಸ್ಪತ್ರೆಯಲ್ಲಿ ಕಡಿಮೆ ವಾಸ್ತವ್ಯ, ಶೀಘ್ರ ಚೇತರಿಕೆಗೆ ಅನುವಾಗುವಂತೆ ರೂಪಿಸಲಾದ ಸ್ವದೇಶಿ ಶಸ್ತ್ರಚಿಕಿತ್ಸಾ ರೋಬೋಟಿಕ್ ವ್ಯವಸ್ಥೆ ‘ಎಸ್ಎಸ್ಐ ಮಂತ್ರ’ಕ್ಕೆ ಪ್ರಕ್ರಿಯ ಆಸ್ಪತ್ರೆಯಲ್ಲಿ ಸಂಸದ, ಡಾ। ಸಿ.ಎನ್. ಮಂಜುನಾಥ್ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಚಿಕಿತ್ಸಾ ವಿಧಾನದಲ್ಲಿ ಇದೊಂದು ಹೊಸ ಮೈಲುಗಲ್ಲಾಗಿದೆ. ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಬಹುಬೇಗ ದೈನಂದಿನ ಚಟುವಟಿಕೆಗಳಿಗೆ ಮರಳಲು ಸಾಧ್ಯವಾಗುತ್ತದೆ. ರೋಗಿಗಳಿಗೆ ಕನಿಷ್ಠ ದರದಲ್ಲಿ ವಿಶ್ವದರ್ಜೆಯ ಚಿಕಿತ್ಸೆ ನೀಡಲು ಮುಂದಾಗಿದೆ. ಪ್ರಕ್ರಿಯ ಆಸ್ಪತ್ರೆ ರೋಗಿಗಳ ಆರೈಕೆಗೆ ನಿರಂತರವಾಗಿ ಆದ್ಯತೆ ನೀಡುತ್ತಿದೆ. ಪಾರದರ್ಶಕತೆ ಮತ್ತು ಸೇವಾ ಮನೋಭಾವದಿಂದ ಸಮಾಜದ ಎಲ್ಲಾ ವರ್ಗದವರಿಗೆ ಆರೋಗ್ಯ ಸೇವೆ ಒದಗಿಸುತ್ತಿವೆ. ಅತ್ಯುನ್ನತ ಉತ್ಕೃಷ್ಟ ತಜ್ಞರು ಮತ್ತು ಸಿಬ್ಬಂದಿ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಪ್ರಕ್ರಿಯ ಹಾಸ್ಪಿಟಲ್ಸ್ ಸಿಇಒ ಡಾ। ಶ್ರೀನಿವಾಸ್ ಚಿರಕುರಿ ಮಾತನಾಡಿ, ಎಸ್ಎಸ್ಐ ಮಂತ್ರ ರೋಬೋಟಿಕ್ ವ್ಯವಸ್ಥೆಯು ಶಸ್ತ್ರಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಇದನ್ನು ಶೇ.88ಕ್ಕಿಂತ ಹೆಚ್ಚು ಸ್ವದೇಶಿ ಉತ್ಪನ್ನಗಳ ಮೂಲಕ ತಯಾರಿಸಲಾಗಿದ್ದು, ಈ ರೋಬೋಟ್ ಜನರಲ್ ಸರ್ಜರಿ, ಸ್ತ್ರೀರೋಗಶಾಸ್ತ್ರ, ಮೂತ್ರಶಾಸ್ತ್ರ ಹಾಗೂ ಕ್ಯಾನ್ಸರ್ ಸೇರಿ ಅನೇಕ ವಿಭಾಗಗಳಲ್ಲಿ ಸೇವೆ ಸಲ್ಲಿಸುವಂತೆ ರೂಪುಗೊಂಡಿದೆ ಎಂದರು.
ಶಾಸಕ ಎಸ್.ಮುನಿರಾಜು ಮಾತನಾಡಿದರು. ಡಾ। ಕಾಮಿನಿ ರಾವ್, ರೋಬೋಟಿಕ್ ಸರ್ಜನ್ ಡಾ। ಸಂತೋಷ್, ಡಾ। ಹಬೀಬ್ ಮಾತನಾಡಿದರು. ಡಾ। ಪ್ರಕಾಶ್ ರಾಮಚಂದ್ರ ಇದ್ದರು.