ಮಂಗಳೂರು: ಕೆಲವು ದಿನಗಳ ಹಿಂದೆ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿದ ಕೆಲವು ಶಿಕ್ಷಕರು ಗಣತಿ ಕಾರ್ಯದ ಸಮಯದಲ್ಲಿ ಮನೆ ಮನೆಗೆ ಭೇಟಿ ನೀಡುವಾಗ ಹೆಜ್ಜೇನು, ಹುಳ, ನಾಯಿಗಳು ಕಚ್ಚಿ ಹಾಗೂ ರಸ್ತೆ ಅಪಘಾತಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಅಂತಹ ಶಿಕ್ಷಕರನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೋಮವಾರ ಮೂಲ್ಕಿ, ಉಳ್ಳಾಲ ಮತ್ತು ಬಂಟ್ವಾಳದಲ್ಲಿ ಭೇಟಿ ಮಾಡಿದರು.ಶಿಕ್ಷಕರ ಆರೋಗ್ಯದ ಬಗ್ಗೆ ವಿಚಾರಿಸಿ, ಅಂತಹ ಕಷ್ಟದ ಸಮಯದಲ್ಲೂ ಸಹ ಧೃತಿಗೆಡದೆ ಯಶಸ್ವಿಯಾಗಿ ಗಣತಿ ಕಾರ್ಯವನ್ನು ಪೂರ್ಣಗೊಳಿಸಿದ್ದಕ್ಕೆ ಗಣತಿದಾರ ಶಿಕ್ಷಕರನ್ನು ಫಲಪುಷ್ಪ ಮತ್ತು ಅಭಿನಂದನಾ ಪತ್ರ ನೀಡಿ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಮೂಲ್ಕಿ ತಾಲೂಕಿನ ಗ್ರಾಮ ಪಂಚಾಯ್ತಿ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ, ಮೂಲ್ಕಿ ಕೆರೆಕಾಡು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ನವೀನ್ ಡಿಸೋಜ, ಮಂಗಳೂರು ತಾಲೂಕಿನ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆಯ ಎನ್ನಿ ನಿರ್ಮಲ್ ಡಿಸೋಜ, ಮರಕಡ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸರಿತಾ ಡಿಸೋಜ, ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ರಾಣಿಪುರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಗ್ಲೋರಿಯಾ ಅನುಶಿಯ ಲೋಬೊ, ಅಂಬ್ಲಮೊಗರು ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯ ರೋಜಾ, ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವೆಂಕಟರಮಣ ಆಚಾರ್, ಕಾವಳ ಮೂಡೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಸುರೇಖಾ ಅವರನ್ನು ಸನ್ಮಾನಿಸಿದರು.ಈ ಸಂದರ್ಭ ತಾಲೂಕು ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಇದ್ದರು.