ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸರ್ವೆ ಕಾರ್ಯ

| Published : Dec 23 2024, 01:00 AM IST

ಸಾರಾಂಶ

ಸಿಂಧನೂರಿನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆ ಸರ್ವೆಕಾರ್ಯ ನಡೆಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ನಗರದ ಕನಕದಾಸಕ ವೃತ್ತದಿಂದ ಸುಕಾಲಪೇಟೆವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯ ಉದ್ದಳತೆಯ ಸರ್ವೆ ಕಾರ್ಯ ನಡೆಸಿದರು.ಕನಕದಾಸ ವೃತ್ತ, ವೆಂಕಟೇಶ್ವರ ಚಿತ್ರಮಂದಿರ, ಬನ್ನಿ ಮಹಾಂಕಾಳಿ ದೇವಸ್ಥಾನ, ಮಂಜುನಾಥ ಚಿತ್ರಮಂದಿರ, ಸುಕಾಲಪೇಟೆ ಶಾಲೆ ಮುಂಭಾಗದಲ್ಲಿ ಟೇಪ್ ಹಿಡಿದು ರಸ್ತೆಯ ಅಗಲವನ್ನು ಅಳತೆ ಮಾಡಿದಾಗ 60, 50, 40 ಅಡಿ ವ್ಯತ್ಯಾಸ ಕಂಡು ಬಂದಿತು.

ಈ ವೇಳೆ ನಗರಸಭೆಯ ಕಾರ್ಯಪಾಲಕ ಎಂಜಿನಿಯರ್ ಮನ್ಸೂರ್ ಅಹ್ಮದ್, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಅಮರೇಶ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 50 ಅಡಿ ಅಗಲದ ರಸ್ತೆ ಇರಬೇಕು ಎಂದು ಶಾಸಕರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹಂಪನಗೌಡ ಬಾದರ್ಲಿ, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಜಾಗದ ಕುರಿತು ಸರ್ವೆ ನಡೆಸಿ, ಮಾರ್ಕೌಟ್ ಮಾಡಿ. ರಸ್ತೆ ಜಾಗ ಅತಿಕ್ರಮಿಸಿರುವ ವ್ಯಾಪಾರಸ್ಥರಿಗೆ ಹಾಗೂ ಕಟ್ಟಡ ನಿರ್ಮಿಸಿಕೊಂಡಿರುವ ಮಾಲೀಕರಿಗೆ ನೋಟಿಸ್ ನೀಡಲು ತಿಳಿಸಿದರು.

ಎರಡು ಬದಿಯಲ್ಲಿ ಚರಂಡಿ ನಿರ್ಮಾಣ, ಎರಡು ಬದಿ ಎರಡು ಲೈನ್ ರಸ್ತೆ ನಿರ್ಮಿಸಿ ಡಿವೈಡರ್ ಬರುವಂತೆ ಕ್ರಿಯಾಯೋಜನೆ ತಯಾರಿಸಿ ಕೊಟ್ಟರೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುದಾನ ಬಿಡುಗಡೆ ಮಾಡಿಸಲಾಗುವುದು. ವಿದ್ಯುತ್ ಸೇರಿ ಕೇಬಲ್ ವೈರ್‌ಗಳನ್ನು ನೆಲದಲ್ಲಿ ಬರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಅಧಿಕಾರಿಗಳು, ಮುಖಂಡರು ಸೇರಿ ಅನೇಕರು ಇದ್ದರು.