ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾಂಗ್ರೆಸ್ ಪಕ್ಷದ ನಾಯಕನ ಮಾಧ್ಯಮ ಸಲಹೆಗಾರನ ಸೋಗಿನಲ್ಲಿ ವಿಧಾನಪರಿಷತ್ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ಸಮಾಜ ಸೇವಕಿಯಿಂದ 1.5 ಕೋಟಿ ರು. ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಪತ್ರಕರ್ತ ಹಾಗೂ ಆತನ ಇಬ್ಬರು ಸಹಚರರ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಗೀತಾ.ಕೆ.ಸುವರ್ಣ ವಂಚನೆಗೊಳಗಾಗಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಜೆ.ಪಿ.ನಗರದ ನಿವಾಸಿ ಪತ್ರಕರ್ತ ಸಿರಿಗೆರೆ ಯರ್ರಿಸ್ವಾಮಿ, ಶಿಕ್ಷಕರ ಸದನದ ಸಹಾಯಕ ಸಿದ್ದರಾಜು ಹಾಗೂ ಬಸವರಾಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ವಂಚನೆ ಕೃತ್ಯ ಬೆಳಕಿಗೆ ಬಂದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹೇಗೆ ವಂಚನೆ

ನಾನು 25 ವರ್ಷಗಳಿಂದ ಜನನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆಯಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿದ್ದೇನೆ. 1.5 ವರ್ಷಗಳ ಹಿಂದೆ ನನಗೆ ಸಿರಿಗೆರೆ ಯರ್ರಿಸ್ವಾಮಿ ಪರಿಚಯವಾಯಿತು. ಆಗ ತನ್ನನ್ನು ಕಾಂಗ್ರೆಸ್ ನಾಯಕರ ಮಾಧ್ಯಮ ಸಲಹೆಗಾರ ಎಂದು ಆತ ಹೇಳಿಕೊಂಡಿದ್ದ. ನೀವು ಇಷ್ಟೆಲ್ಲ ಒಳ್ಳೆಯ ಹೆಸರು ಸಂಪಾದಿಸಿರುವ ನೀವು ಒಳ್ಳೆಯ ರಾಜಕೀಯ ಹುದ್ದೆ ಪಡೆಯಬಹುದಲ್ಲವೇ? ನಾನು ದೆಹಲಿಯಲ್ಲಿ ಎಐಸಿಸಿ ನಾಯಕರೊಂದಿಗೆ ಮಾತನಾಡಿ ಎಂಎಲ್‌ಸಿ ಮಾಡಿಸುತ್ತೇನೆ ಎಂದ. ಆಗ ನನಗೆ ಕೆಲ ಕಾಂಗ್ರೆಸ್ ನಾಯಕರ ಜತೆ ಇರುವ ಪೋಟೋಗಳನ್ನು ಯರ್ರಿಸ್ವಾಮಿ ತೋರಿಸಿದ. ಈ ಕೆಲಸಕ್ಕೆ 5 ಕೋಟಿ ರು. ನೀಡುವಂತೆ ಆತ ಬೇಡಿಕೆ ಇಟ್ಟನು ಎಂದು ದೂರಿನಲ್ಲಿ ಗೀತಾ ಆರೋಪಿಸಿದ್ದಾರೆ.


ಆದರೆ ಅಷ್ಟು ದೊಡ್ಡ ಮೊತ್ತ ತನ್ನ ಬಳಿ ಇಲ್ಲವೆಂದು ಆತನಿಗೆ ತಿಳಿಸಿದೆ. ಆಗ 1.25 ಕೋಟಿ ರು. ಕೊಟ್ಟರೆ ಕೆಲಸ ಆಗುತ್ತದೆ ಎಂದು ಯರ್ರಿಸ್ವಾಮಿ ಹೇಳಿದ. ಕೊನೆಗೆ ನನ್ನ ಸ್ನೇಹಿತರಿಂದ ಸಾಲ ಪಡೆದು ಯರ್ರಿಸ್ವಾಮಿ ಸೂಚಿಸಿದಂತೆ ಶಿಕ್ಷಕರ ಸದನದಲ್ಲಿ ಬಸವರಾಜು ಹಾಗೂ ಸಿದ್ದರಾಜು ಅವರಿಗೆ 2024ರ ಆ.1 ರಂದು ಮಧ್ಯಾಹ್ನ ಹಣವನ್ನು ನೀಡಿದೆ. ನಂತರ ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆ ಬಳಿ ಮಹಿಳೆಯೊಬ್ಬಳಿಗೆ 5 ಲಕ್ಷ ರು. ಕೊಟ್ಟಿದ್ದೇನೆ ಎಂದು ಗೀತಾ ದೂರಿದ್ದಾರೆ.

ಎಐಸಿಸಿ ನಾಯಕರ ಭೇಟಿಗೆ ಬರಲು ಹೇಳಿದ್ದಾರೆ ಎಂದು ತಿಳಿಸಿ ದೆಹಲಿಗೆ ನನ್ನನ್ನು ಯರ್ರಿಸ್ವಾಮಿ ಕರೆದೊಯ್ದ. ಅಲ್ಲಿ ಹೋಟೆಲ್‌ನಲ್ಲಿ ತಂಗಿದ್ದಾಗ ನನಗೆ ಆತ ಲೈಂಗಿಕ ಕಿರುಕುಳ ನೀಡಿದ. ಈ ಘಟನೆ ಬಳಿಕ ನಾನು ಹಣ ಮರಳಿಸುವಂತೆ ಯರ್ರಿಸ್ವಾಮಿಗೆ ಹೇಳಿದೆ. ಆಗ ನನಗೆ ಆತ ಜೀವ ಬೆದರಿಕೆ ಹಾಕಿದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.