ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಾಹಿತಿ ಹನೂರು ಚನ್ನಪ್ಪ ರಚಿತ ಕಥೆ, ನಾಟಕ, ಕಾದಂಬರಿಗಳು ಈ ನೆಲದ ಭಾಷೆಯ ಜೊತೆಗೆ ಗಟ್ಟಿತನದಿಂದ ಕೂಡಿವೆ ಎಂದು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್ ಹೇಳಿದರು.ನಗರದ ಚೇತನ ಕಲಾವಾಹಿನಿ, ಜೋಳಿಗೆ ಪ್ರಕಾಶನ ಹಾಗೂ ಮೈಸೂರು ನೆಲೆಹಿನ್ನೆಲೆ ಸಂಸ್ಥೆಯಿಂದ ನಗರದ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾಹಿತಿ ಹನೂರು ಚನ್ನಪ್ಪ ರಚಿತ ಕಥೆ, ನಾಟಕ, ಕಾದಂಬರಿ ಕುರಿತ ವಿಚಾರಸಂಕಿರಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚಲನಚಿತ್ರವಾಗಿರುವ ಕಥಾ ಸಂಕಲನ ಅನ್ನ, ನಾಟಕ ಬೆಲ್ಲದ ದೋಣಿ, ಕಾದಂಬರಿ ಕಬ್ಬಿಣದ ಕುದುರೆಗಳು ಒಂದೊಂದು ಸಾಮಾಜಿಕ ಪರಿಸ್ಥಿತಿಗಳನ್ನು ಅವಲೋಕಿಸಿರುವುದರ ಜೊತೆಗೆ, ಈ ನೆಲದ ಭಾಷೆಯ ಜೊತೆ ಗಟ್ಟಿತನದಿಂದ ಇದ್ದು, ಬೆಲ್ಲದ ದೋಣಿ ಮತ್ತೊಂದು ಚಲನಚಿತ್ರವಾಗುವ ಎಲ್ಲಾ ಗುಣಗಳನ್ನು ಹೊಂದಿದೆ ಎಂದರು.ಈ ನೆಲದದಲ್ಲಿ ಪ್ರಭಾವ ಬೀರುವ, ಅತ್ಯಂತ ಪ್ರತಿಭಾವಂತ ಸಾಹಿತಿಗಳು, ಕವಿಗಳು, ಕಲಾವಿದರು ಇದ್ದಾರೆ. ಆದರೆ ಪ್ರಚಾರದ ಕೊರೆತೆಯಿಂದ ಭಾಷೆಯ ಸೊಗಡು ಒಂದೆರಡು ಸಿನಿಮಾಗಳಿಗೆ ಮಾತ್ರ ಸೀಮಿತವಾಯಿತು ಎಂದರು.ಅನ್ನದಲ್ಲಿ ಅನ್ನಕ್ಕಾಗಿ ಪರಿತಪ್ಪಿಸುವ ಬಾಲಕ, ಬೆಲ್ಲದ ದೋಣಿಯ ನಾಯಕ ಮೇಲ್ವರ್ಗದಿಂದ ಸ್ವಾಮಿ ಎಂದು ಕರೆಸಿಕೊಳ್ಳುವುದಕ್ಕಾಗಿ ಅಯ್ಯಪ್ಪ ಮಾಲೆ ಹಾಕುವುದು, ಅದು ತಿರಸ್ಕಾರಕ್ಕೊಳಗಾದಾಗ ನೋವು ಅನುಭವಿಸುವುದು ಇವು ಸ್ವಾತಂತ್ರ್ಯ ಬಂದು ೭೮ ವರ್ಷವಾದರೂ ಇನ್ನು ಇರುವ ಅನಿಷ್ಟ ಸಾಮಾಜಿಕ ಪಿಡುಗುಗಳನ್ನು ಎತ್ತಿ ತೋರಿಸುತ್ತದೆ ಎಂದರು.ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ದೇವನೂರ ಮಹದೇವ ಅವರ ಕುಸುಮಬಾಲೆಯಲ್ಲಿ ಬರುವ ಸನ್ನಿವೇಶಗಳನ್ನು ಹನೂರು ಚನ್ನಪ್ಪ ತಮ್ಮ ಕೃತಿಗಳಲ್ಲಿ ಅತ್ಯಂತ ಸರಳವಾಗಿ, ಆಡು ಭಾಷೆಯಲ್ಲಿ ರಚಿಸಿರುವುದಿಂದ ಕುವೆಂಪು, ದೇವನೂರು ಮಹದೇವ ಅವರ ಕೃತಿಗಳಷ್ಟೇ ಮೌಲ್ಯಯುತವಾಗಿವೆ ಎಂದರು.ಕಬ್ಬಿಣದ ಕುದರೆಗಳು ಅಷ್ಟೇ, ವೇಗವಾಗಿ ಓಡುವ ಮನಸ್ಸುಗಳನ್ನು ನಿಯಂತ್ರಿಸುವುದನ್ನು ಓಡಲಾರದ ಕಬ್ಬಿಣದ ಕುದುರೆಗೆ ಹೋಲಿಸಿದ್ದಾರೆ. ಒಟ್ಟಾರೆ ಸಾಹಿತಿ ಹನೂರು ಚನ್ನಪ್ಪನವರ ಕೃತಿಗಳು ಅತ್ಯಂತ ಮೌಲ್ಯಯುತವಾಗಿವೆ ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರು ನಾಟಕ ಬೆಲ್ಲದ ದೋಣಿ ಬಗ್ಗೆ ಮಾತನಾಡಿ, ‘ಬೆಲ್ಲದ ದೋಣಿ ನಾಟಕದಲ್ಲಿ ಬರುವ ಒಂದೊಂದು ಪಾತ್ರವು ಸಮಾಜದಲ್ಲಿ ನಡೆಯುವ ಅನಿಷ್ಠ ಪದ್ಧತಿಗಳ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿವೆ’ ಎಂದರು.ಇನ್ನು ಗ್ರಾಮೀಣ ಭಾಗಗಳಲ್ಲಿ ಇರುವ ಸಾಮಾಜಿಕ ಕಟ್ಟುಪಾಡುಗಳ ಬಗ್ಗೆ ಈ ನಾಟಕ ಬೆಳಕು ಚೆಲ್ಲುವುದರ ಜೊತೆ ಸಮ ಸಮಾಜದ ತುಡಿತವನ್ನು ಹೊಂದಿದೆ ಎಂದರು.ಸಾಹಿತಿ ಅನಿಲ್ ಕುಮಾರ್‌ ಹೊಸೂರು ಇದಕ್ಕೆ ವಿಮರ್ಶಿಸಿದರು. ಸಾಹಿತಿ ಪೊನ್ನಾಚಿ ‘ಅನ್ನ’ ಕುರಿತು ಮಾತನಾಡಿದರೆ, ವಿಮರ್ಶಕಿ ಕುಸುಮ ಆಯರಹಳ್ಳಿ ಕಬ್ಬಿಣದ ಕುದುರೆಗಳ ಬಗ್ಗೆ ಮಾತನಾಡಿದರು. ಸಾಹಿತಿಗಳಾದ ಎಂ. ಬಸವರಾಜು, ಬಸವಣ್ಣ ಮೂಕಹಳ್ಳಿ ಪ್ರತಿಕ್ರಿಯೆ ನೀಡಿದರು. ಸಂಸ್ಕೃತಿ ಚಿಂತಕ ಎಚ್. ಗೋವಿಂದಯ್ಯ ಅಧ್ಯಕ್ಷತೆ ವಹಿಸಿದ್ದರು.

ಚೇತನ ಕಲಾವಾಹಿನಿಯ ಜಿ. ರಾಜಪ್ಪ ಸ್ವಾಗತಿಸಿ, ಕಲೆ ನಟರಾಜು ನಿರೂಪಿಸಿದರು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷೆ ಡಾ. ರೇಣುಕಾದೇವಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ. ಪುಟ್ಟಸ್ವಾಮಿ, ಸಮಾಜ ಸೇವಕ ಶ್ರೀನಿಧಿ ಕುದರ್, ಹನೂರು ಚನ್ನಪ್ಪ ಉಪಸ್ಥಿತರಿದ್ದರು.

---೨೧ಸಿಎಚ್‌ಎನ್೧ಹನೂರು ಚನ್ನಪ್ಪ ರಚಿತ ಕಥೆ, ನಾಟಕ, ಕಾದಂಬರಿ ಕುರಿತ ವಿಚಾರಸಂಕಿರಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ್‌ ಉದ್ಘಾಟಿಸಿದರು.--- ೨೧ಸಿಎಚ್‌ಎನ್೨ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಅವರು ಮಾತನಾಡಿದರು.