ಕನ್ನಡಪ್ರಭ ವಾರ್ತೆ ದಾಂಡೇಲಿ

ದಾಂಡೇಲಿ ರೋಟರಿ ಕ್ಲಬ್, ಕುಂದಾಪುರದ ಬೆನಕ ಇವೆಂಟ್ಸ್ ಮತ್ತು ಅಂಕೋಲಾದ ಶ್ರೀ ಗುರು ರಾಘವೇಂದ್ರ ಇವೆಂಟ್ಸ್ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳಕ್ಕೆ ನಗರದ ವಿದ್ಯಾಧಿರಾಜ ಸಭಾಭವನದಲ್ಲಿ ತಹಶೀಲ್ದಾರ ಶೈಲೇಶ ಪರಮಾನಂದ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಸ್ವದೇಶಿ ಉತ್ಪನ್ನಗಳ ತಯಾರಕರಿಗೆ ಇಂತಹ ಮೇಳದಿಂದ ಬಹು ಉಪಯೋಗ ಆಗಲಿದೆ. ಇಂತಹ ಮೇಳಗಳು ನಗರದ ಶ್ರೀ ದಾಂಡೇಲಪ್ಪನ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಆಯೋಜನೆ ಮಾಡಿದರೆ ಉತ್ಪನ್ನಗಳ ಮಾರಾಟಕ್ಕೆ ನಿಶ್ಚಿತವಾಗಿ ಬಹುಬೇಡಿಕೆ ಬಂದು ಮಾರಾಟವು ಹೆಚ್ಚುವುದು ಮತ್ತು ಗ್ರಾಹಕರಿಗೆ ಇದರಿಂದ ಅತೀ ಹೆಚ್ಚು ಪ್ರಯೋಜನವಾಗುತ್ತದೆ ಎಂದರು.ರೋಟರಿ ಕ್ಲಬ್‌ನ ಎಸ್. ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ರಾಜ್ಯದ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದು ತಮ್ಮ ಉತ್ಪನ್ನಗಳ ಮೇಳದಲ್ಲಿ ಮಳಿಗೆ ಹಾಕಿದ್ದಾರೆ. ದಾಂಡೇಲಿಯಲ್ಲಿ ಮೊಟ್ಟಮೊದಲ ಬಾರಿಗೆ ಇಂತಹದೊಂದು ಮೇಳ ನಡೆಯುತ್ತಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಸಂಘಟಕರಾದ ಬೆನಕ ಇವೆಂಟ್ಸ್‌ನ ಗಣೇಶ್ ಶೆಟ್ಟಿ ಕಾರ್ಯಕ್ರಮ ಸಂಘಟನೆಯ ವಿಶೇಷತೆ ಬಗ್ಗೆ ವಿವರಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಅಶುತೋಶಕುಮಾರ್ ರಾಯ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಪ್ರಧಾನ ಕಾರ್ಯದರ್ಶಿ ಮಿಥುನ ನಾಯ್ಕ, ರೋಟೆರಿಯನ್‌ಗಳಾದ ಆರ್.ಪಿ. ನಾಯ್ಕ, ಡಾ. ಎಸ್.ಎನ್. ದಫೇದಾರ, ಸುಧಾಕರ್ ಶೆಟ್ಟಿ, ಶೇಖರ್ ಪೂಜಾರಿ, ಸೋಮಕುಮಾರ್ ಎಸ್., ವಿದ್ಯಾಧಿರಾಜ ಸಭಾಭವನ ಸಮಿತಿ ಅಧ್ಯಕ್ಷ ಜನಾರ್ದನ ಪ್ರಭು, ಅಂಕೋಲಾದ ಶ್ರೀ ಗುರು ರಾಘವೇಂದ್ರ ಇವೆಂಟ್ಸ್‌ನ ಮುಖ್ಯಸ್ಥ ಗಣೇಶ್ ಗುನುಗಾ ಇದ್ದರು.ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮೇಳದಲ್ಲಿ ಇಳಕಲ್ ಸೀರೆ ಹಾಗೂ ಖಾದಿ ಸೀರೆಗಳು, ಅಲಂಕಾರಿಕ ವಸ್ತುಗಳು, ಗೃಹಬಳಕೆಯ ವಸ್ತುಗಳು, ಬಿದಿರಿನ ಉತ್ಪನ್ನಗಳು, ಮಣ್ಣಿನ ಮಡಕೆಗಳು, ಹಲಸಿನ ಹಣ್ಣಿನ ಜಾಮ್, ಉಪ್ಪಿನ ಕಾಯಿ, ಹುಣಸೆ ಹುಳಿ ಚಟ್ಟಿ, ಅಪ್ಪೆ ಮಿಡಿ ಚಟ್ಟಿ, ಹಲಸಿನ ಸ್ವಾಪ್ಟಿ, ನ್ಯಾಚುರಲ್ ಐಸ್ ಕ್ರೀಮ್. ಮಣ್ಣಿನ ಆಭರಣಗಳು, ತಿನಿಸುಗಳು ಮಾವಿನ ಹಣ್ಣಿನ ಸ್ವೀಟ್ ಉಪ್ಪಿನ ಕಾಯಿ, ಸುಂದರ ಶಿಲಾಮೂರ್ತಿಗಳು, ಬ್ಯೂಟಿ ಪ್ರಾಡಕ್ಟ್ ಮತ್ತು ಬ್ಯಾಗ್, ಹಲಸಿನ, ಮಾವಿನ ಹಾಗೂ ವಿವಿಧ ಗಿಡಗಳ, ಹೂವಿನ ಸಸಿಗಳು, ಪುಸ್ತಕಗಳ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ.