ತೆಂಗಿಗೆ ಕಪ್ಪುತಲೆ ಹುಳುಬಾಧೆ ಹತೋಟಿಗೆ ಸಾಮೂಹಿಕ ಕ್ರಮ ಅನುಸರಿಸಿ: ರೂಪಶ್ರೀ

| Published : Jul 17 2024, 12:49 AM IST

ತೆಂಗಿಗೆ ಕಪ್ಪುತಲೆ ಹುಳುಬಾಧೆ ಹತೋಟಿಗೆ ಸಾಮೂಹಿಕ ಕ್ರಮ ಅನುಸರಿಸಿ: ರೂಪಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ವಾತಾವರಣದ ಉಷ್ಣತೆಯಿಂದಾಗಿ ತೆಂಗಿನ ತೋಟಗಳಿಗೆ ನಿಗದಿತ ಸಮಯದಲ್ಲಿ ಉಳುಮೆ ಮಾಡಿ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಮಾಡದಿರುವುದರಿಂದ ಮರಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೀಟಬಾಧೆ ಉಲ್ಬಣಗೊಳ್ಳಲು ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತೆಂಗು ಬೆಳೆಗಳಿಗೆ ಕಾಡುತ್ತಿರುವ ಕಪ್ಪು ತಲೆ ಹುಳುವಿನ ಬಾಧೆ ನಿಯಂತ್ರಣಕ್ಕೆ ರೈತರು ಸಾಮೂಹಿಕವಾಗಿ ಹತೋಟಿ ಕ್ರಮ ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೂಪಶ್ರೀ ಹೇಳಿದರು.

ತಾಲೂಕಿನ ಬೂದಗುಪ್ಪೆ ಗ್ರಾಮದ ಸದಾಶಿವರಾಯರ ತೋಟದಲ್ಲಿ ತೆಂಗಿನ ಬೆಳೆಗೆ ಕಪ್ಪು ತಲೆ ತುಳುಬಾಧೆಯ ನಿಯಂತ್ರಣ ಕ್ರಮದ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ವಾತಾವರಣದ ಉಷ್ಣತೆಯಿಂದಾಗಿ ತೆಂಗಿನ ತೋಟಗಳಿಗೆ ನಿಗದಿತ ಸಮಯದಲ್ಲಿ ಉಳುಮೆ ಮಾಡಿ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಬಳಕೆ ಮಾಡದಿರುವುದರಿಂದ ಮರಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೀಟಬಾಧೆ ಉಲ್ಬಣಗೊಳ್ಳಲು ಕಾರಣವಾಗಿದೆ ಎಂದರು.

ರೋಗದ ನಿಯಂತ್ರಕ್ಕಾಗಿ ತೋಟಗಳನ್ನು ಉಳುಮೆ ಮಾಡುವುದರ ಜೊತೆಗೆ ಮರಗಳಿಗೆ ಪಾತಿ ಮಾಡಿ ಸರಿಯಾದ ಸಮಯದಲ್ಲಿ ಪೊಟಾಸಿಯಂ ಯುಕ್ತ ರಸಗೊಬ್ಬರ ಮತ್ತು ಬೇವಿನ ಹಿಂಡಿಗಳನ್ನು ಹಾಗೂ ಸಾವಯುವ ಗೊಬ್ಬರದ ಉಪಚಾರ ಮಾಡಬೇಕು ಎಂದರು.

ಕೀಟಬಾಧೆ ನಿಯಂತ್ರಣಕ್ಕೆ ಪ್ರಥಮ ಹಂತದಲ್ಲಿ ರೋಗಭಾದಿತ ಗರಿಗಳನ್ನು ಕತ್ತರಿಸಿ ಸುಟ್ಟು ಹಾಕಬೇಕು. ಸಣ್ಣ ಸಸಿಗಳಾಗಿದ್ದಲ್ಲಿ ಕ್ಲೋರೋಪೈರಿಪಾಸ್ ಎರಡು ಮೀ.ಲೀಟರ್ ನೊಂದಿಗೆ ಇತರ ರೋಗನಿರೋಧಕ ಔಷಧಿಗಳನ್ನು ತಜ್ಞರ ಸಲಹೆ ಪಡೆದು ಸಿಂಪಡಣೆ ಮಾಡಬೇಕು ಎಂದರು.

ತೋಟಗಾರಿಕೆ ಇಲಾಖೆ ವಿಜ್ಞಾನಿಗಳಾದ ಡಾ.ಪವಿತ್ರ ಮತ್ತು ಡಾ.ಅದೀಪಾ ತೆಂಗಿನ ಮರಗಳಿಗೆ ಬೇರಿನ ಮೂಲಕ ಔಷಧಿ ಹಿಡಿದಾಗ ಮೂರು ತಿಂಗಳ ಕಾಲ ತೆಂಗಿನಕಾಯಿ ಮತ್ತು ಎಳನೀರು ಕಟಾವು ಮಾಡಬಾರದು ಎಂದು ರೈತರಿಗೆ ಮನವಿ ಮಾಡಿದರು.

ಸ್ಥಳದಲ್ಲಿಯೇ ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಕಪ್ಪು ತಲೆ ಹುಳುವಿನ ಬಾದೆ ನಿಯಂತ್ರಣ ಕುರಿತು ಪ್ರಾತ್ಯಕ್ಷತೆ ಮೂಲಕ ಅರಿವು ಮೂಡಿಸಲಾಯಿತು. ಮದ್ದೂರು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ಸಹಾಯಕ ಅಧಿಕಾರಿಗಳಾದ ಸಂಪತ್ ಕುಮಾರ್, ನಿತಿನ್ ಕುಮಾರ್, ಡಾ.ಶಿವಪ್ರಸಾದ್, ಸಿಬ್ಬಂದಿ ಮಾಫೀಗೌಡ, ಪದ್ಮ, ಅಶ್ವಿನಿ ಇದ್ದರು.