ಮಾಗಡಿ: ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ವತಿಯಿಂದ ಪಟ್ಟಣದ ಹೊಸಪೇಟೆ ವೃತ್ತದಲ್ಲಿ ನಿರ್ಮಿಸಿರುವ ನೂತನ ಗೋದಾಮನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಉದ್ಘಾಟಿಸಿದರು
ಮಾಗಡಿ: ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ವತಿಯಿಂದ ಪಟ್ಟಣದ ಹೊಸಪೇಟೆ ವೃತ್ತದಲ್ಲಿ ನಿರ್ಮಿಸಿರುವ ನೂತನ ಗೋದಾಮನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್.ಅಶೋಕ್ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇವಲ ಒಂದು ವರ್ಷದ ಅಲ್ಪಾವಧಿಯಲ್ಲಿ ಈ ಬೃಹತ್ ಗೋದಾಮುಗಳನ್ನು ನಿರ್ಮಿಸಲಾಗಿದೆ. 2025ರ ಜನವರಿಯಲ್ಲಿ ಭೂಮಿಪೂಜೆ ನೆರವೇರಿಸಲಾಗಿತ್ತು. 180 ಅಡಿ ಉದ್ದ ಹಾಗೂ 90 ಅಡಿ ಅಗಲದ ಎರಡು ಬೃಹತ್ ಗೋದಾಮುಗಳು ಈಗ ಸಾರ್ವಜನಿಕ ಸೇವೆಗೆ ಸಿದ್ಧವಾಗಿವೆ. ಈ ಯೋಜನೆಗೆ ₹3.10 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ ಸಂಘದ ಉಪಸಮಿತಿ ಹಾಗೂ ಕಟ್ಟಡ ನಿರ್ಮಾಣ ಸಮಿತಿಯ ನೇರ ಉಸ್ತುವಾರಿಯಿಂದಾಗಿ ಕೇವಲ ₹2.70 ಕೋಟಿಯಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಮೊತ್ತದಲ್ಲಿ ₹60 ಲಕ್ಷ ವೆಚ್ಚದ ಗೋದಾಮು ಮುಂಭಾಗದಲ್ಲಿ ಎರಡು ಅಂತಸ್ತಿನ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಇದು ಆಡಳಿತ ಮಂಡಳಿಯ ಬದ್ಧತೆಯನ್ನು ತೋರಿಸುತ್ತದೆ ಎಂದು ಪ್ರಶಂಸಿದರು.ಮಾಗಡಿ ತಾಲೂಕಿನ ಸುಮಾರು 39 ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ಪೂರೈಸುವ ಹೊಣೆಗಾರಿಕೆಯನ್ನು ಸಂಘ ಹೊಂದಿದೆ. ಸ್ವಂತ ಗೋದಾಮು ಇಲ್ಲದ ಕಾರಣ ಈವರೆಗೆ ಬಾಡಿಗೆ ಕಟ್ಟಡದಲ್ಲೇ ವಹಿವಾಟು ನಡೆಸಲಾಗುತ್ತಿತ್ತು. ಈಗಿನ ಸ್ವಂತ ಗೋದಾಮಿನಿಂದ ಸಂಘಕ್ಕೆ ಆರ್ಥಿಕ ಲಾಭವಾಗುವುದಲ್ಲದೆ, ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ. ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನ ಮತ್ತು ಕರ್ತವ್ಯ ನಿಷ್ಠೆಯಿಂದಾಗಿ ಈ ಅಭಿವೃದ್ಧಿ ಸಾಧ್ಯವಾಗಿದೆ. ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸದೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.
ತಾಲೂಕಿನಲ್ಲಿ ಬಮೂಲ್ ಹಾಗೂ ವಿಎಸ್ಎಸ್ಎನ್ ಬ್ಯಾಂಕ್ಗಳ ಅಭಿವೃದ್ಧಿಗೂ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಟ್ಟಣದ ಪಿಎಲ್ಡಿ ಬ್ಯಾಂಕ್ನ ಜಾಗದ ಅದಲು-ಬದಲು ಪ್ರಕ್ರಿಯೆ ಸರ್ಕಾರದ ಹಂತದಲ್ಲಿದ್ದು, ಶೀಘ್ರದಲ್ಲೇ ಅಲ್ಲಿಯೂ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದರು ಭರವಸೆ ನೀಡಿದರು.ಕಾಂಗ್ರೆಸ್ ಬೆಂಬಲಿತರಿಗೆ ಜಯ:
ಬಿಡದಿ ರೈತ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ. ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ. ಇದು ಈ ಭಾಗದ ರೈತರು ಮತ್ತು ಸಾರ್ವಜನಿಕರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಮೇಲೆ ಇಟ್ಟಿರುವ ನಂಬಿಕೆಗೆ ಸಂದ ಜಯವಾಗಿದೆ. ಚುನಾಯಿತರಾದ 11 ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಸಂಘದ ಏಳಿಗೆಗೆ ಶ್ರಮಿಸಲಿದ್ದಾರೆ. ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಈ ಹೊಸ ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ. ಚುನಾವಣಾ ವಿಜಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಮೂಲ್ ಅಧ್ಯಕ್ಷರಾದ ಡಿ.ಕೆ.ಸುರೇಶ್ ಹಾಗೂ ಶಾಸಕ ಬಾಲಕೃಷ್ಣ ಮಾರ್ಗದರ್ಶನ ಸ್ಥಳೀಯ ಕಾರ್ಯಕರ್ತರ ಶ್ರಮ ಪ್ರಮುಖವಾಗಿದೆ ಎಂದು ಅಶೋಕ್ ತಿಳಿಸಿದರು.ಈ ವೇಳೆ ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಟಿಎಪಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಸೋಮಶೇಖರ್, ರವಿಕುಮಾರ್, ಮಂಜುನಾಥ್, ಗಂಗಣ್ಣ, ನಂಜುಂಡಯ್ಯ, ರವೀಶ್, ಗೀತಾ ರಂಗನಾಥ್, ಮುಖಂಡರಾದ ಚಕ್ರಬಾವಿ ಮಾರೇಗೌಡ, ಶ್ರೀನಿವಾಸ್, ದೀಪಕ್, ಮೂರ್ತಿ, ರಘು, ನಾರಾಯಣ್ ಭಾಗವಹಿಸಿದ್ದರು.
(ಫೋಟೋ ಕ್ಯಾಫ್ಞನ್)ಮಾಗಡಿಯ ಹೊಸಪೇಟೆಯಲ್ಲಿ ಟಿಎಪಿಸಿಎಂಎಸ್ ನಿರ್ಮಿಸಿರುವ ನೂತನ ಗೋದಾಮನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎನ್. ಅಶೋಕ್ ಉದ್ಘಾಟಿಸಿದರು. ಸಹಕಾರ ಸಂಘದ ಅಧ್ಯಕ್ಷ ಶಿವಪ್ರಸಾದ್ ಹಾಗೂ ನಿರ್ದೇಶಕರು ಜೊತೆಯಲ್ಲಿದ್ದರು.