ಧಾರವಾಡ:

ತಾಯಂದಿರು-ಹಿರಿಯರು ಕಟ್ಟಿಕೊಟ್ಟು ಹೋದ ಮೂಲ ಜನಪದ ಹಾಡುಗಳನ್ನು ಮಕ್ಕಳಿಗೆ-ಯುವಕರಿಗೆ ಕಲಿಸುವ ಮೂಲಕ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕಾರ್ಯ ಆಗಬೇಕೆಂದು ರಾಷ್ಟ್ರೀಯ ಬೇಂದ್ರೆ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಕರೆ ನೀಡಿದರು.

ಇಲ್ಲಿನ ರಾಣಿ ಚೆನ್ನಮ್ಮ ನಗರದ ಉದ್ಯಾನವನದಲ್ಲಿ ಹುಬ್ಬಳ್ಳಿಯ ಜನಪದರು ಕರ್ನಾಟಕ ಜಾನಪದ ಜಗತ್ತು ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಸಂಸ್ಥೆ ರಾಣಿ ಚೆನ್ನಮ್ಮ ಮಹಿಳಾ ಮಂಡಲ ಆಶ್ರಯದಲ್ಲಿ ನಡೆದ 13 ದಿನಗಳ ಮೂಲ ಜನಪದ ಹಾಡುಗಳ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂತಹ ಶಿಬಿರಗಳು ತಾಯಂದಿರಿಗೆ ಹಮ್ಮಿಕೊಂಡಿದ್ದು ಸೂಕ್ತ ಎಂದ ಅವರು, ಇಂತಹ ತರಬೇತಿ ಎಲ್ಲೆಡೆ ನಡೆದರೆ ಮೂಲ ಜನಪದ ಹಾಡು, ಸಂಸ್ಕೃತಿಗಳು ಉಳಿಯುವಲ್ಲಿ ಸಂದೇಹವಿಲ್ಲ ಎಂದರು.

ನಿವೃತ್ತ ಹಿರಿಯ ಅಧಿಕಾರಿ ಮಾಲತಿ ಪೋಳ ಅಧ್ಯಕ್ಷತೆ ವಹಿಸಿದ್ದರು. ವಕೀಲ ಪಿ.ಎಚ್. ನೀರಲಕೇರಿ, ಸಾಹಿತಿ ಡಾ. ಸಂಗಮನಾಥ ಲೋಕಾಪುರ, ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ್, ಸುರೇಶ ಜಟ್ಯಣ್ಣವರ, ಬಿಇಒಸುಜಾತಾ ತಿಮ್ಮಾಪುರ, ವಕೀಲರಾದ ರಾಜು ಮಸವಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


ಸಂಪನ್ಮೂಲ ವ್ಯಕ್ತಿಗಳಾದ ಜೀವಿ ಹಿರೇಮಠ ಡಾ. ಎಚ್.ಎಚ್. ನದಾಫ, ಪ್ರಮೀಳಾ ಜಕ್ಕಣ್ಣವರ, ಸಂಚಾಲಕರಾದ ಸುಜಾತ ಗಿರಡ್ಡಿ, ಶೋಭಾ ಭೂಮರಡ್ಡಿ, ಸುಹಾಸ ಮೂಲಗಿ ಹಾಗೂ ಡಾ. ರಾಮು ಮೂಲಗಿ ಅವರನ್ನು ಗೌರವಿಸಲಾಯಿತು. 13 ದಿನ ತರಬೇತಿ ಪಡೆದ ಮಹಿಳೆಯರು 5 ತಂಡಗಳಲ್ಲಿ ತಾವು ಕಲಿತ ಹಾಡು, ನೃತ್ಯ ಪ್ರದರ್ಶನ ನೀಡಿದರು. ಉಮಾ ಪಾಡಿಗಾರ್ ಹಾಗೂ ತಂಡ ಪ್ರಾರ್ಥಿಸಿದರೆ, ಶೋಭಾ ಭೂಮರೆಡ್ಡಿ ಸ್ವಾಗತಿಸಿದರು. ವೃಂದಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರೆ, ಸುಧಾ ಸಾಹುಕಾರ ವಂದಿಸಿದರು.