ಬಜೆಟ್‌ ಅನುದಾನ ನೀಡದೆ ಹೊಸ ವಿ.ವಿ. ಬಂದ್‌ ನಿರ್ಧಾರಕ್ಕೆ ಶಿಕ್ಷಕರ ಆಕ್ರೋಶ

| Published : Mar 07 2025, 11:46 PM IST

ಬಜೆಟ್‌ ಅನುದಾನ ನೀಡದೆ ಹೊಸ ವಿ.ವಿ. ಬಂದ್‌ ನಿರ್ಧಾರಕ್ಕೆ ಶಿಕ್ಷಕರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನವನ್ನು ನೀಡದಿರುವುದು ಮತ್ತು 9 ಹೊಸ ವಿಶ್ವ ವಿದ್ಯಾಲಯಗಳಿಗೆ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಘೋಷಿಸದೆ ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಮತ್ತು ದುರಂತ ಎಂದು ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಕನ್ನಡಪ್ರಭವಾರ್ತೆ ಮಂಗಳೂರು

ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಸಾಕಷ್ಟು ಅನುದಾನವನ್ನು ನೀಡದಿರುವುದು ಮತ್ತು 9 ಹೊಸ ವಿಶ್ವ ವಿದ್ಯಾಲಯಗಳಿಗೆ ಸರ್ಕಾರ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಘೋಷಿಸದೆ ಮುಚ್ಚಲು ಹೊರಟಿರುವುದು ಅವೈಜ್ಞಾನಿಕ ಮತ್ತು ದುರಂತ ಎಂದು ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

ಸರ್ಕಾರ ಮುಚ್ಚಲು ಉದ್ದೇಶಿಸಿರುವ ಹೆಚ್ಚಿನ ವಿಶ್ವವಿದ್ಯಾಲಯಗಳು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಹಾಗು ಶೋಷಿತ ವರ್ಗದ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸ್ಥಾಪಿತವಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಸಂಶೋಧನಾ ಅಧ್ಯಯನಕ್ಕೆ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆಯುವ ಅವಕಾಶದಿಂದಲೂ ವಂಚಿತರಾಗಲಿದ್ದಾರೆ.ಅನೇಕ ವರ್ಷಗಳಿಂದ ಶಿಕ್ಷಣ ತಜ್ಞರು, ಶಿಕ್ಷಣ ಪ್ರಿಯರ ಆಗ್ರಹ ಹಾಗು ಅನೇಕ ಅಧ್ಯಯನಗಳ ಫಲಶೃತಿಯಿಂದ ಸ್ಥಾಪಿಸಲಾಗಿದ್ದ ವಿಶ್ವವಿದ್ಯಾಲಯಗಳು ಇವು. ರಾಜ್ಯ ಸರ್ಕಾರ ಏಕಾಏಕಿ ತೆಗೆದುಕೊಂಡಿರುವ ಈ ನಿರ್ಧಾರ ಶೈಕ್ಷಣಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಲಿದೆ.ಜಿಲ್ಲಾವಾರು ಯೂನಿವರ್ಸಿಟಿ ಸ್ಥಾಪನೆಯಿಂದ ಆರ್ಥಿಕ ಒತ್ತಡವಿಲ್ಲದೆ ಆಯಾ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮ್ಮ ಸಂಶೋಧನೆ ಹಾಗು ವಿದ್ಯಾಭ್ಯಾಸವನ್ನು ಮುಂದುವರಿಸಲು ಒಂದು ದೊಡ್ಡ ಅವಕಾಶವನ್ನು ಮಾಡಿಕೊಡಲಾಗಿತ್ತು.ಇಂತಹ ವಿವಿಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಖೇದಕರ. ಇದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳ ಕೈವಾಡವಿರಬಹುದೇ ಎನ್ನುವ ಶಂಕೆ ಮೂಡುತ್ತದೆ. ಶಿಕ್ಷಣದ ಮೇಲಿನ ಖರ್ಚು ಮುಂದಿನ ಮಾನವ ಸಂಪನ್ಮೂಲವನ್ನು ನಿರ್ಮಿಸುವ ಬಂಡವಾಳವಾಗಿರುತ್ತದೆ. ಶಿಕ್ಷಣದ ಮೇಲೆ ಹೂಡಿಕೆ ಮಾಡುವುದರಿಂದ ರಾಜ್ಯ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿಯು ಬಲಗೊಳ್ಳಲಿದೆ. ಈ ನಿರ್ಧಾರದಿಂದ ಹಿಂದಡಿ ಇಟ್ಟರೆ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯಕ್ಕೆ ಬಹುದೊಡ್ಡ ಹಿನ್ನಡೆಯಾಗಲಿದೆ. ಅಲ್ಲದೆ ಜನರ ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣವನ್ನು ಕಸಿದಂತಾಗುತ್ತದೆ. ಇದೆಲ್ಲವನ್ನು ಗಮನಿಸಿ ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಮಹಾ ವಿದ್ಯಾಲಯಗಳ ಶಿಕ್ಷಕರ ಸಂಘ ಉಡುಪಿ ಅಧ್ಯಕ್ಷ, ಪ್ರಾಧ್ಯಾಪಕ ಡಾ. ಸುರೇಂದ್ರ ಶೆಟ್ಟಿ, ಪದಾಧಿಕಾರಿಗಳಾದ ಡಾ. ರಾಧಾಕೃಷ್ಣ ಹಾಗೂ ಡಾ. ಭೈರವಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.