ಮನಶ್ಶಾಂತಿ, ಕಷ್ಟಗಳನ್ನು ಪರಿಹರಿಸಲು ದೇಗುಲಗಳು ಅಗ್ಯವಾಗಿದೆ: ವಿಜಯ್ ರಾಮೇಗೌಡ

| Published : Nov 15 2024, 12:34 AM IST

ಮನಶ್ಶಾಂತಿ, ಕಷ್ಟಗಳನ್ನು ಪರಿಹರಿಸಲು ದೇಗುಲಗಳು ಅಗ್ಯವಾಗಿದೆ: ವಿಜಯ್ ರಾಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಯುವಕರಿಗೆ ನಾವು ದೈವ ಮಾರ್ಗದ ಬದುಕನ್ನು ತೋರಿಸಬೇಕು. ಯುವಕರು ನಿತ್ಯ ದೇವಾಲಯಕ್ಕೆ ಬರಬೇಕು. ದೇವಾಲಯಕ್ಕೆ ಬಂದು ದೇವರಿಗೆ ಶರಣಾಗುವುದರಲ್ಲಿಯೇ ನಮ್ಮ ನೆಮ್ಮದಿ ಇದೆ. ಇದನ್ನು ನಮ್ಮ ಹಿರಿಯರು ಅರ್ಥ ಮಾಡಿಕೊಂಡಿದ್ದರು. ಈ ಹಿಂದೆ ಹಿರಿಯರು ‘ಕೆರೆಯಂ ಕಟ್ಟಿಸು, ದೇವಾಗಾರಮಂ ನಿರ್ಮಿಸು’ ಎಂದು ತಮ್ಮ ಮಕ್ಕಳಿಗೆ ಹಿತವಚನ ಹೇಳುತ್ತಿದ್ದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುರಾತನ ಕಾಲದಿಂದಲೂ ಮನುಷ್ಯನ ಮನಶ್ಶಾಂತಿಗೆ ಹಾಗೂ ಕಷ್ಟಗಳನ್ನು ಪರಿಹರಿಸಲು ದೇಗುಲಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಮಿತ್ರ ಫೌಂಡೇಷನ್ ಅಧ್ಯಕ್ಷ , ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಅಭಿಪ್ರಾಯಪಟ್ಟರು.

ತಾಲೂಕಿನ ಅಗಸರಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶಕ್ತಿದೇವತೆ ಶ್ರೀಮಾರಮ್ಮದೇವಿ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಧರ್ಮ ಮಾರ್ಗದಲ್ಲಿ ಬದುಕಿದರೆ ಸುಖ ಮತ್ತು ಸಾಮಾಜಿಕ ಶಾಂತಿ ಇದೆ. ನಂಬಿದವರ ಪಾಲಿಗೆ ದೇವರು ಇದ್ದಾನೆ. ದೇವರಿಲ್ಲದೆ ಜಗತ್ತು ಇಲ್ಲ ಎಂದರು.

ನಮ್ಮ ಯುವಕರಿಗೆ ನಾವು ದೈವ ಮಾರ್ಗದ ಬದುಕನ್ನು ತೋರಿಸಬೇಕು. ಯುವಕರು ನಿತ್ಯ ದೇವಾಲಯಕ್ಕೆ ಬರಬೇಕು. ದೇವಾಲಯಕ್ಕೆ ಬಂದು ದೇವರಿಗೆ ಶರಣಾಗುವುದರಲ್ಲಿಯೇ ನಮ್ಮ ನೆಮ್ಮದಿ ಇದೆ. ಇದನ್ನು ನಮ್ಮ ಹಿರಿಯರು ಅರ್ಥ ಮಾಡಿಕೊಂಡಿದ್ದರು ಎಂದರು.

ಈ ಹಿಂದೆ ಹಿರಿಯರು ‘ಕೆರೆಯಂ ಕಟ್ಟಿಸು, ದೇವಾಗಾರಮಂ ನಿರ್ಮಿಸು’ ಎಂದು ತಮ್ಮ ಮಕ್ಕಳಿಗೆ ಹಿತವಚನ ಹೇಳುತ್ತಿದ್ದರು. ನಮ್ಮ ಹಿರಿಯರ ಬದುಕಿನ ಆದರ್ಶವನ್ನು ನಮ್ಮ ಮಕ್ಕಳಿಗೆ ಪರಿಚಯಿಸುವ ಕೆಲಸ ಆಗಬೇಕು ಎಂದರು.

ಪೂರ್ವಜರ ಅಣತಿಯಂತೆ ಭಗವಂತನಿಗೆ ವಿಶೇಷ ಸ್ಥಾನ ನೀಡುತ್ತಾ ಬಂದಿರುವ ನಾವು ಬಹಳ ಹಿಂದಿನಿಂದಲೂ ಗ್ರಾಮಗಳಲ್ಲಿ ಮಕ್ಕಳಿಗೆ ಸಿಡುಬು, ಸೇರಿದಂತೆ ಹಲವು ರೋಗಗಳಿಗೆ ಶಕ್ತಿದೇವತೆ ಶ್ರೀಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದೇವೆ ಎಂದರು.

ಮಕ್ಕಳಿಗೆ ಆರೋಗ್ಯವನ್ನು ಕರುಣಿಸುವಲ್ಲಿ ಮಾರಮ್ಮದೇವಿ ಮಹತ್ತರ ಪಾತ್ರವನ್ನು ವಹಿಸುತ್ತಾರೆ. ಅದರಂತೆ ಅಗಸರಹಳ್ಳಿ ನೂತನ ದೇಗುಲ ನಿರ್ಮಿಸಿರುವುದು ಸಂತಸ ತಂದಿದೆ. ಸಕಲ ಮನುಕುಲಕ್ಕೆ ಒಳಿತನ್ನು ಬಯಸುವ ಮಾರಮ್ಮದೇವಿ ನಿಮ್ಮೆಲ್ಲರಿಗೂ ಒಳಿತನ್ನು ಉಂಟುಮಾಡಲಿ ಎಂದು ಶುಭಕೋರಿದರು.

ಇದೇ ವೇಳೆ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗೋವಿಂದರಾಜು ಸೇರಿದಂತೆ ಗ್ರಾಮದ ಮುಖಂಡರುಗಳು ಹಾಜರಿದ್ದರು.