ಸಾರಾಂಶ
ಶತಮಾನ ಕಂಡಿರುವ ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಗೊಳಿಸಿ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ: ಶತಮಾನ ಕಂಡಿರುವ ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಗೊಳಿಸಿ ಬಂಟ್ವಾಳ ತಹಸೀಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಕ್ರಮವಹಿಸುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪಾಣೆಮಂಗಳೂರು ಗ್ರಾಮದಲ್ಲಿರುವ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು. ಸೇತುವೆಯಲ್ಲಿ ಈ ಹಿಂದೆ ಬಿರುಕು ಬಂದ ಹಿನ್ನಲೆಯಲ್ಲಿ ಸೇತುವೆಯ ಮೇಲೆ ಘನ ವಾಹನ ಸಂಚಾರ ತಾತ್ಕಾಲಿಕವಾಗಿ ಕಬ್ಬಿಣದ ಕಮಾನು ಅಳವಡಿಸಿ ಬಂದ್ ಮಾಡಲಾಗಿದ್ದು ಪ್ರಸ್ತುತ ಕಬ್ಬಿಣದ ಕಮಾನನ್ನು ಹಾನಿಗೊಳಿಸಿ ಘನವಾಹನಗಳು ಸಂಚರಿಸುತ್ತಿರುವುದು ವರದಿಯಾಗಿದೆ.
ಸೇತುವೆ ಶಿಥಿಲಾವಸ್ಥೆಯಲ್ಲಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಅಲ್ಲದೆ ಸೇತುವೆಯ ಧಾರಣಾ ಸಾಮರ್ಥ್ಯದ ಕುರಿತು ಸಕ್ಷಮ ಇಲಾಖೆಯಿಂದ ವರದಿ ಬರುವವರೆಗೆ ಸೇತುವೆಯ ಮೇಲೆ ಸಂಚಾರ ಮಾಡುವುದನ್ನು ಅಪಾಯಕಾರಿ ಎಂದು ಪರಿಗಣಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 68 ರ ಪ್ರಕಾರ ಈ ಅದೇಶ ಹೊರಡಿಸಿದೆ.ಪದೇ ಪದೇ ಏನಾದರೂ ಒಂದು ಸುದ್ದಿಯಾಗತ್ತಲೇ ಅಪಾಯಕಾರಿ ಸೇತುವೆಯಲ್ಲಿ ಘನ ವಾಹನಗಳು ಸಂಚಾರ ಮಾಡುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ಹಾಗಾಗಿ ಸೇತುವೆ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.