ರಾಜ್ಯದ ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದ್ದು, ಚುನಾವಣೆಗೆ ಹೋಗುತ್ತೇವೆ ಎಂಬ ಚಾಲೆಂಜ್‌ ಸ್ವೀಕಾರ ಮಾಡಲಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸವಾಲು ಹಾಕಿದ್ದಾರೆ.

ಶಿರಸಿ: ರಾಜ್ಯದ ಜನರ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದ್ದು, ಚುನಾವಣೆಗೆ ಹೋಗುತ್ತೇವೆ ಎಂಬ ಚಾಲೆಂಜ್‌ ಸ್ವೀಕಾರ ಮಾಡಲಿ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಸವಾಲು ಹಾಕಿದ್ದಾರೆ.

ಮಾಧ್ಯಮದವರ ಜತೆ ಶನಿವಾರ ಮಾತನಾಡಿದ ಅವರು, ಚುನಾವಣೆ ನಡೆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಗೆಲ್ಲುವುದು ಕಷ್ಟ. ನಾವು ಅವಿಶ್ವಾಸ ಮಂಡಿಸುವ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಕೆಲವು ಕಾಂಗ್ರೆಸ್ಸಿನವರಿಂದ ಸಲಹೆ ಬಂದಿದೆ. ನೀವು ಮಂಡಿಸಿ, ನಾವು ತಾಕತ್ತೇನು ಎಂಬುದನ್ನು ತೋರಿಸುತ್ತೇವೆ ಎಂದು ಹೇಳಿದ್ದಾರೆ. ಆ ನಿರ್ಣಯ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಡಿ.ಕೆ. ಶಿವಕುಮಾರ ಯಾವ ವಾಚ್‌ ಕಟ್ಟಿದ್ದರು? ಸಿದ್ದರಾಮಯ್ಯ ಯಾವ ವಾಚ್‌ ಕಟ್ಟಿದ್ದರು ಎನ್ನುವ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸುದ್ದಿನಾ? ಉತ್ತಮ ರಸ್ತೆ, ಕೈಗಾರಿಕೆ ತೆರೆದರೆ ಒಳ್ಳೆಯ ಸುದ್ದಿಯಾಗುತ್ತದೆ. ತುಂಗಭದ್ರಾ ಅಣೆಕಟ್ಟಿನ ಗೇಟ್‌ ಹಾಕುವ ಯೋಗ್ಯತೆಯನ್ನು ರಾಜ್ಯ ಸರ್ಕಾರ ಕಳೆದುಕೊಂಡಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ ಲೂಟಿಯಾಗುತ್ತಿದೆ. ವಾಲ್ಮೀಕಿ ನಿಗಮಕ್ಕೆ ₹187 ಕೋಟಿ ಬಿಡುಗಡೆಯಾಗಿತ್ತು. ಆದರೆ ಅನುಷ್ಠಾನವಾಗದೇ ಲೂಟಿಯಾಗಿದೆ. ಕಾಂಗ್ರೆಸ್ಸಿನ ಚುನಾವಣೆಗೆ ಬಳಕೆಯಾಗಿದೆ ಎಂದು ಆರೋಪಿಸಿದರು.

ಪ್ರಾಮಾಣಿಕರಾಗಿದ್ದರೆ ವಾಚ್‌ ಗಿಫ್ಟ್ ನೀಡುವುದಿಲ್ಲ. ಭ್ರಷ್ಟ ವ್ಯವಸ್ಥೆ ಪೋಷಣೆ ಮಾಡುವವರಿಗೆ ದೊಡ್ಡ ಖದೀಮರು ತಮ್ಮ ಕೆಲಸಕ್ಕೆ ಸಕಲಕಲಾ ವಲ್ಲಭರು, ಯಾವುದು ಪ್ರಿಯ ಇವರಿಗೆ? ಯಾವ ವಾಚ್‌ ಕಂಡರೆ ಇಷ್ಟವೋ ಅಂಥ ವಾಚ್‌ ನೀಡುತ್ತಾರೆ. ಮೊಬೈಲ್‌ ಇಷ್ಟವಾದರೆ ಅದನ್ನು ನೀಡುತ್ತಾರೆ. ಬಳೆ ಶಬ್ದಕ್ಕೆ ಅಲ್ಲಾಡುತ್ತಾರೆ ಎಂದರೆ ಅದನ್ನೇ ಗಿಲಿಗಿಲಿ ಎಂದು ಸೌಂಡ್‌ ಮಾಡಿ ಕರೆದುಕೊಂಡು ಬರುತ್ತಾರೆ. ದಲ್ಲಾಳಿಗಳು ಯಾರಿಗೆ ಯಾವ ಸೌಂಡ್‌ ಇಷ್ಟ ಎಂಬುದನ್ನು ಪತ್ತೆದಾರಿಕೆ ಮಾಡಿರುತ್ತಾರೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರ ಜನರ ಪಾಲಿಗೆ ಇದ್ದು ಸತ್ತಂತಾಗಿದೆ. ಯೋಜನೆಗಳನ್ನು ಅನುಷ್ಠಾನ ಮಾಡುವ ಸಾಮರ್ಥ್ಯ ಮತ್ತು ಯೋಗ್ಯತೆಯನ್ನು ಕಳೆದುಕೊಂಡಿದೆ. ಗುತ್ತಿಗೆದಾರರ ಕಮಿಷನ್‌ 80 ಪರ್ಸಂಟ್‌ ಈ ಸರ್ಕಾರದಲ್ಲಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆ ಕಾರಣಕ್ಕೆ ಈ ಸರ್ಕಾರ ಸುದ್ದಿಯಾಗಿರುವುದು ಬಿಟ್ಟರೆ ಕಳೆದ ಎರಡೂವರೆ ವರ್ಷದಲ್ಲಿ ಯಾವ ಕಾರಣಕ್ಕೆ ಸುದ್ದಿಯಾಗಿದೆ ಎಂದು ರವಿ ಪ್ರಶ್ನಿಸಿದ್ದಾರೆ.

ಅತಿವೃಷ್ಟಿಯ ಪರಿಹಾರ ಪೂರ್ಣ ಪ್ರಮಾಣದಲ್ಲಿ ರೈತರ ಖಾತೆಗೆ ಜಮಾ ಆಗಿಲ್ಲ. ಖರೀದಿ ಕೇಂದ್ರ ತೆರೆದಿಲ್ಲ. ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿಯನ್ನೂ ನೀಡಿಲ್ಲ. ಕೇವಲ ದಲ್ಲಾಳಿಗಳ, ಲೂಟಿ ಹೊಡೆಯುವವರ ಪಾಲಿಗೆ ಸರ್ಕಾರ ಬದುಕಿದೆ ಎಂದು ವಾಗ್ದಾಳಿ ನಡೆಸಿದರು.