ಸಾರಾಂಶ
ಕನ್ನಡಪ್ರಭ ವಾರ್ತೆ ಔರಾದ್
ದೇಶದ ಅಭಿವೃದ್ಧಿಯಲ್ಲಿ ರೈತರ ಕೊಡುಗೆ ಅಪಾರವಾಗಿದ್ದು, ರೈತರ ಏಳಿಗೆಗೆ ಪೂರಕವಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿಕೆ ಸುಹಾಸಿನಿ ಬಹೇನ್ ಅಭಿಪ್ರಾಯಪಟ್ಟರು.ಪಟ್ಟಣದ ಕನಕ ಭವನದಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ನಡೆದ ರಾಷ್ಟ್ರೀಯ ಕಿಸಾನ್ ದಿವಸ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಅನ್ನದಾತರು ಸರಿಯಾದ ಬೇಸಾಯ ಪದ್ಧತಿ ಅನುಸರಿಸದೆ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಅಂತಹ ಅನ್ನದಾತರಿಗೆ ಪೂರಕವಾದ ಬೇಸಾಯ ಪದ್ಧತಿಗಳ ಕುರಿತು ತರಬೇತಿ ನೀಡಿ ಅವರನ್ನು ಕಷ್ಟದಿಂದ ಮುಕ್ತಗೊಳಿಸುವ ಕಾರ್ಯ ಮಾಡಬೇಕಾಗಿದೆ.
ತಾಲೂಕು ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಎಚ್. ಮಾತನಾಡಿ, ತಾಲೂಕಿನ ಕೃಷಿಕ ಸಮಾಜಕ್ಕೆ ಸನ್ಮಾನಿಸಿ ಗೌರವಿಸುತ್ತಿರುವ ಬ್ರಹ್ಮಕುಮಾರಿಸ್ ವಿಶ್ವವಿದ್ಯಾಲಯ ಸಂಸ್ಥೆ ಕಾರ್ಯ ಶ್ಲಾಘನೀಯವಾದ್ದು.ಕೃಷಿ ಇಲಾಖೆ ರೈತರಿಗೆ ಅನೇಕ ಸವಲತ್ತುಗಳನ್ನು ನೀಡುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಔರಾದ್ ಹಾಗೂ ಕಮಲನಗರ ತಾಲೂಕಿನ 200 ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಜಿಲ್ಲಾ ಕೃಷಿ ತರಬೇತಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕಿ ಆರತಿ ಪಾಟೀಲ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಫಹೀಮ್ ಖುರೇಶಿ, ಜಿಲ್ಲಾ ರೈತ ಸಂಘ ಕಾರ್ಯದರ್ಶಿ ಶ್ರೀಮಂತ ಬಿರಾದಾರ, ತಾಲೂಕು ಅಧ್ಯಕ್ಷ ಪ್ರಕಾಶ ಬಾವಗೆ, ಪ್ರವೀಣ ಕುಲಕರ್ಣಿ, ತಾಪಂ ತರಬೇತಿ ಸಂಯೋಜಕ ರಾಜೇಂದ್ರ ಮಾಳಿ, ಡಾ.ಗಂಗಾರೆಡ್ಡಿ, ಸಂಗಪ್ಪ ಘಾಟೆ, ಶಿವಕುಮಾರ ಗೀರಣೆ, ಅನಿಲ ದ್ಯಾಡೆ, ರಾಮ ರೆಡ್ಡಿ ಗಂಗಾಪೂರೆ, ಚಂದ್ರಕಾಂತ ರೆಡ್ಡಿ, ಬಿಕೆ ಬಾಲಾಜಿ, ಬಿಕೆ ಶಾಂತಾ, ಬಿಕೆ ಛಾಯಾ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.