ಕನ್ನಡಪ್ರಭ ವಾರ್ತೆ, ತುಮಕೂರುದೇಶದ ನಾಗಲೋಟದ ಆರ್ಥಿಕ ಪ್ರಗತಿಗೆ ಯುವಶಕ್ತಿ ಕೊಡುಗೆ ಕಾರಣ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್‌ ತಿಳಿಸಿದರು.

ನಗರದ ಶಿರಾರಸ್ತೆಯ ಶ್ರೀರಮಣ ಮಹರ್ಷಿ ಎಜ್ಯುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಶ್ರೀದೇವಿ ಪಿ.ಯು. ಕಾಲೇಜಿನ ವತಿಯಿಂದ ಶ್ರೀಆರೋಹಿ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಎಲ್ಲಾ ವಲಯದಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದೆ. ಇದರ ಫಲವಾಗಿ ವಿಶ್ವದ ನಾಲ್ಕನೇ ಆರ್ಥಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ್ದು ಮೂರನೇ ಸ್ವಾನಕ್ಕೆ ದಾಪುಗಾಲಿಡುತ್ತಿದೆ. ಗುಣಮಟ್ಟದ ಶಿಕ್ಷಣಕ್ಕೆ ಶ್ರೀದೇವಿ ವಿದ್ಯಾಸಂಸ್ಥೆ ಮಹತ್ವ ನೀಡಿದೆ. ವಿದ್ಯಾರ್ಥಿಗಳ ಬೌದ್ಧಿಕ ವಿಕಸನಕ್ಕೆ ತಕ್ಕಂತೆ ಗ್ರಂಥಾಲಯ, ಕ್ರೀಡಾಂಗಣ ಮುಂತಾದ ವಿಶ್ವದರ್ಜೆಯ ಮೂಲ ಸೌಲಭ್ಯ, ಶೈಕ್ಷಣಿಕ ಪರಿಸರದ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನುರಿತ ಅಧ್ಯಾಪಕರ ತಂಡ ನಿಮ್ಮ ಭವಿಷ್ಯಕ್ಕೆ ಹೊಸ ದಾರಿ ತೋರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್‌ ಮಾತನಾಡಿ, ಭವಿಷ್ಯ ರೂಪಿಸಿಕೊಳ್ಳಲು ಕನಸು ಕಾಣುವುದು ತಪ್ಪಲ್ಲ ಆದರೆ ಆ ಕನಸನ್ನು ನನಸು ಮಾಡಲು, ಗುರಿಮುಟ್ಟಲು ನಿರಂತರವಾಗಿ ಶ್ರಮ ಪಡಬೇಕು. ಇಲ್ಲದೆ ಹೋದರೆ ನಿಮ್ಮ ಕನಸಿಗೆ ಅರ್ಥ ಬರುವುದಿಲ್ಲ. ಕೇವಲ ಅಂಕಗಳಿಕೆಗೆ ಶಿಕ್ಷಣ ಮತ್ತು ಕಾಲೇಜಿನ ಗುರಿಯಲ್ಲ ಸಮಗ್ರ ಬೆಳವಣಿಗೆ, ವ್ಯಕ್ತಿತ್ವ ವಿಕಾಸಕ್ಕೆ ಶ್ರೀದೇವಿ ವಿದ್ಯಾಸಂಸ್ಥೆ ಪ್ರತಿ ಹಂತದಲ್ಲಿ ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ಮಾಡಲಿದೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀದೇವಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಪ್ರೊ.ಅಜಯ್.ಸಿ.ರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿ ಡಾ.ಲಾವಣ್ಯ, ಶ್ರೀದೇವಿ ಪಿ.ಯು.ಕಾಲೇಜಿನ ಡೀನ್ ಎ.ಕೆ.ಸಾಹ, ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ. ನಾಗರಾಜ ಸೂರ್ಯದೇವರ ಹಾಗೂ ಶ್ರೀದೇವಿ ಪಿ.ಯು.ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.