ಸಾರಾಂಶ
ನೈಜ ಪ್ರಜಾ ಸರ್ಕಾರ ಸ್ಥಾಪನೆಯತ್ತ ನಾವೆಲ್ಲರೂ ಹೆಜ್ಜೆ ಹಾಕಬೇಕಾಗಿದೆ. ದೇಶಭಕ್ತಿ, ದೇಶಪ್ರೇಮದ ಮೂಲಕ ಸುಭದ್ರ ರಾಷ್ಟ್ರ ಕಟ್ಟಲು ಪರಿಶ್ರಮಿಸಬೇಕಾಗಿದೆ ಎಂದು ಶಿಗ್ಗಾಂವಿ ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ೭೫ನೆಯ ಪ್ರಜಾರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಂಜುನಾಥ ಕುನ್ನೂರು ಹೇಳಿದರು.
ಶಿಗ್ಗಾಂವಿ: ಶ್ರೇಷ್ಠ ಸಂವಿಧಾನವನ್ನು ಹೊಂದಿದ ನಮ್ಮ ದೇಶ ಇಡಿ ಜಗತ್ತಿಗೆ ಮಾದರಿಯಾದ ಪ್ರಜಾಪ್ರಭುತ್ವ ಹೊಂದಿದೆ ಎಂದು ಮಾಜಿ ಸಂಸದ ಮಂಜುನಾಥ ಸಿ. ಕುನ್ನೂರ ಹೇಳಿದರು.
ಇಂದು ಪಟ್ಟಣದ ಶ್ರೀ ಚನ್ನಪ್ಪ ಕುನ್ನೂರ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ೭೫ನೆಯ ಪ್ರಜಾರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನೈಜ ಪ್ರಜಾ ಸರ್ಕಾರ ಸ್ಥಾಪನೆಯತ್ತ ನಾವೆಲ್ಲರೂ ಹೆಜ್ಜೆ ಹಾಕಬೇಕಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅದ್ಭುತ ಯಶಸ್ಸನ್ನು ಪಡೆದಿದೆ. ಗಣರಾಜ್ಯವಾಗಿ ೭೫ನೇ ವರ್ಷಾಚರಣೆ ಈ ಸಂದರ್ಭದಲ್ಲಿ ದೇಶಭಕ್ತಿ, ದೇಶಪ್ರೇಮದ ಮೂಲಕ ಸುಭದ್ರ ರಾಷ್ಟ್ರ ಕಟ್ಟಲು ಪರಿಶ್ರಮಿಸಬೇಕಾಗಿದೆ. ಇಂದಿನ ವಿದ್ಯಾರ್ಥಿಗಳು ಮುಂದೆ ದೇಶ ಕಟ್ಟುವ ರೂವಾರಿಗಳಾಗಿ ಸಿದ್ಧವಾಗಬೇಕಿದೆ ಎಂದು ಹೇಳಿದರು.ಪ್ರತಿಯೊಬ್ಬರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು. ಭ್ರಾತೃತ್ವ ಹಾಗೂ ಸೌಹಾರ್ದದ ಬದುಕು ರೂಢಿಸಿಕೊಳ್ಳಬೇಕಾಗಿದೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಸಾಮಾನ್ಯರು ಅಸಾಮಾನ್ಯರಾಗಬಹುದಾದ ಅದ್ಬುತ ಅವಕಾಶಗಳನ್ನು ಮಾಡಿಕೊಟ್ಟ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಂಡು ಅವರು ನಮಗಾಗಿ ಕೊಟ್ಟಿರುವ ಸಂವಿಧಾನ ರಕ್ಷಿಸಿ ದೇಶ ಉಳಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ ಅವರು ಇವತ್ತು ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮ ತುಂಬಬೇಕಾದ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.ಮುಖ್ಯೋಪಾಧ್ಯಾಯೆ ಜಿ.ಎಂ. ಅರಗೋಳ, ಎಂ.ಎ. ಗಾಣಿಗೇರ, ಎಂ.ಬಿ. ನೀರಲಗಿ, ಶಿವಪುತ್ರಪ್ಪ ಜಕ್ಕಣ್ಣವರ, ಮಂಜು ಯಲಿಗಾರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೆ. ಬಸಣ್ಣ ವಂದಿಸಿದರು, ಕೆ.ಜಿ. ಮಲ್ಲೂರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.