ಕನಕಪುರ: ರೈತರಿಗೆ ಮರಣ ಶಾಸನ ತಂದಿದ್ದು ದೇವೇಗೌಡರ ಕುಟುಂಬ, ಜೆಡಿಎಸ್ ಹೊರತು ಡಿ.ಕೆ.ಶಿವಕುಮಾರ್ ಆಗಲೀ, ಕಾಂಗ್ರೆಸ್ ಪಕ್ಷವಾಗಲೀ ಅಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನಾಯಕರಾದ ಡಿಕೆಶಿ ತಮ್ಮ ಸ್ವಂತ ಲಾಭಕ್ಕಾಗಿ ಬಿಡದಿ ಟೌನ್ ಶಿಪ್ ಮಾಡುವ ಮೂಲಕ ರೈತರಿಗೆ ಮರಣ ಶಾಸನ ಬರೆಯುತ್ತಿದ್ದಾರೆಂಬ ನಿಖಿಲ್ ಹೇಳಿಕೆ ಅತ್ಯಂತಬಾಲಿಶತನದ್ದು. ಬೆಂಗಳೂರು ಅಭಿವೃದ್ಧಿ ವಿಷಯದಲ್ಲಿ ಎಸ್.ಎಂ.ಕೃಷ್ಣ ಅವರ ಹೆಸರು ಹೇಳುವಾಗ ನಿಮ್ಮ ತಂದೆ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಹೇಳುವಂತೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಜಿಗಣಿ, ಹಾರೋಹಳ್ಳಿ ಬಿಡದಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಾಡುವ ವೇಳೆ ಸಾವಿರಾರು ರೈತರ ಜಮೀನನ್ನು ವಶಪಡಿಸಿಕೊಳ್ಳುವ ಮೂಲಕ ರೈತರ ಮರಣ ಶಾಸನ ಬರೆದಿದ್ದು ನಿಮ್ಮ ಕುಟುಂಬವೇ ಹೊರತು ಡಿ.ಕೆ.ಶಿವಕುಮಾರ್ ಆಗಲೀ ಕಾಂಗ್ರೆಸ್ ಪಕ್ಷವಾಗಲೀ ಅಲ್ಲ. ಈ ಬಗ್ಗೆ ತಂದೆ ಹಾಗು ತಾತನ ಬಳಿ ತಿಳಿದುಕೊಂಡು ಮಾತನಾಡಿ. ಇದುವರೆಗೂ ಒಂದು ಎಕರೆ ಜಮೀನನ್ನು ರೈತರಿಂದ ಡಿಕೆಶಿ ವಶಪಡಿಸಿಕೊಂಡಿಲ್ಲ. ಈ ಬಿಡದಿ ಟೌನ್ ಶಿಪ್ ಕೂಡ ನಿಮ್ಮ ತಂದೆಯ ಕೂಸಾಗಿದ್ದರೂ ತಮ್ಮ ಬಾಯಿ ಚಪಲಕ್ಕಾಗಿ ನಮ್ಮ ನಾಯಕರ ವಿರುದ್ಧ ಕ್ಷುಲ್ಲಕವಾಗಿ ಮಾತನಾಡುವುದು ಸರಿಯಲ್ಲ. ಮುಂದಿನ ಚುನಾವಣೆಯಲ್ಲಿ ಗೆದ್ದು ನಿಮ್ಮ ಸ್ಟೇಟಸ್ ತೋರಿಸಿ ಎಂದು ಸವಾಲು ಹಾಕಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯ್ ದೇವ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಎನ್ ದಿಲೀಪ್, ಈ ವೇಳೆ ಮುಖಂಡರಾದ ಮುನಿಹುಚ್ಚೇಗೌಡ, ಶಿವಶಂಕರ್, ವಕೀಲ ರಾಮಚಂದ್ರು, ಯೂತ್ ಕಾಂಗ್ರೆಸ್ ಮುಖಂಡ ಅನಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಧು, ನಾಗರಾಜು, ಮುತ್ತುರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹರೀಶ್, ಬಸಪ್ಪ, ವೆಂಕಟೇಶ್, ನಟರಾಜು, ಸುಕನ್ಯಾ ಇತರರಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.