ಸಾರಾಂಶ
ಗುಂಡ್ಲುಪೇಟೆಯಲ್ಲಿ ಶಂಕರಾಚಾರ್ಯರು, ರಾಮಾನುಜಚಾರ್ಯರ ಜಯಂತಿಯಲ್ಲಿ ತಹಸೀಲ್ದಾರ್ ಟಿ.ರಮೇಶ್ ಬಾಬು ಪುಷ್ಪಾರ್ಚನೆ ನೆರವೇರಿಸಿದರು.
ಗುಂಡ್ಲುಪೇಟೆ: ಶಂಕರಾಚಾರ್ಯ, ರಾಮಾನುಜಚಾರ್ಯರನ್ನು ಸ್ಮರಿಸುವುದೇ ಒಂದು ಹಬ್ಬ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ್ ದೀಕ್ಷಿತ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ಹಾಗೂ ತಾಲೂಕು ಬ್ರಾಹ್ಮಣ ಸಭಾ ಆಯೋಜಿಸಿದ್ದ ಶಂಕರಾಚಾರ್ಯರು ಹಾಗೂ ರಾಮಾನುಜಾಚಾರ್ಯರ ಜಯಂತಿಯಲ್ಲಿ ಮಾತನಾಡಿದರು. ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರು ಮತ್ತು ತತ್ವಜ್ಞಾನಿಗಳಾದ ಶಂಕರಾಚಾರ್ಯರ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮೊದಲ ಬಾರಿಗೆ ತಾಲೂಕು ಮಟ್ಟದಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.8 ನೇ ಶತಮಾನದಲ್ಲಿ ಅದ್ವೈತ ವೇದಾಂತದ ಅಡಿಪಾಯ ಹಾಕಿದ ಮತ್ತು ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜಿವನಗೊಳಿಸುವಲ್ಲಿ ಶಂಕರಾಚಾರ್ಯರು ಪ್ರಮುಖರು ಎಂದರು.
ತಹಸೀಲ್ದಾರ್ ಟಿ.ರಮೇಶ್ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 9 ವರ್ಷಗಳ ಹಿಂದೆಯೇ ಯತಿಶ್ರೀಗಳ ಜಯಂತಿ ಅಚರಣೆಗೆ ಸರ್ಕಾರ ಸೂಚನೆ ನೀಡಲಾಗಿದ್ದರೂ ಬ್ರಾಹ್ಮಣ ಸಮಾಜ ಆಚರಣೆ ಮಾಡಲು ಮುಂದೆ ಬಂದಿರಲಿಲ್ಲ. ಮುಂದೆ ಹೀಗಾಗದಂತೆ ತಾಲೂಕು ಆಡಳಿತವೂ ನೋಡಿಕೊಳ್ಳಲಿದೆ ಎಂದರು.ಜಯಂತಿಯಲ್ಲಿ ಬ್ರಾಹ್ಮಣ ಸಭಾದ ಅಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷರಾದ ರವಿಕಾಂತ್, ಮಂಜುನಾಥ್, ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇಷ್ಟ್ರು, ಜಿಲ್ಲಾ ಕಸಾಪ ಅಧ್ಯಕ್ಷ ಶೈಲೇಶ್ ಕುಮಾರ್, ತಿವಾರಿ, ಸುರೇಶ್, ಶಿರಸ್ತೇದಾರ್ ಮಹೇಶ್ ಸೇರಿದಂತೆ ಬ್ರಾಹ್ಮಣ ಸಮಾಜದ ಮುಖಂಡರು, ವಿಪ್ರ ಬಳಗದ ಸದಸ್ಯರು ಹಾಜರಿದ್ದರು.