ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಮಿಲ್ಟ್ರಿಕ್ಯಾಂಪ್ ಶ್ರೀನಿವಾಸ ದೇವಸ್ಥಾನದಲ್ಲಿ ಶುಕ್ರವಾರ 40ನೇ ವರ್ಷದ ಗಿಡದ ಜಾತ್ರಾ ಮಹೋತ್ಸವ (ಶ್ರೀ ವೆಂಕಟಚಲ ಯಾತ್ರೆ) ಸಹಸ್ರರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಆರಾಧಕರು, ದಾಸಪ್ಪರು ಒಂದೆಡೆ ಸೇರಿ ಆಚರಿಸುವ ಜಾತ್ರೆ ಇದಾಗಿದೆ. ಸ್ವಾಮಿಯ ಮೂಲ ನೆಲೆ ತಿರುಪತಿಗೆ ತೆರಳಲು ಸಾಧ್ಯವಾಗದ ದಾಸಪ್ಪ ಸಮೂಹದವರು ಒಂದೆಡೆ ಸೇರಿ ಶ್ರೀ ಸ್ವಾಮಿಯನ್ನು ಆರಾಧಿಸುವ ಪರಿ ಇದಾಗಿದೆ. ಈ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಭಕ್ತರು ದಾಸಪ್ಪರಿಗೆ ತಮ್ಮ ಹರಕೆ ಸಮರ್ಪಿಸುವುದು ವಾಡಿಕೆ. ಗಿಡದ ಜಾತ್ರಾ ಮಹೋತ್ಸವ ಮಂಡ್ಯ ನಾಗನಕೆರೆ ಸಮೀಪದ ಕಾಡುಗಳ ಮಧ್ಯೆ ಹೆಚ್ಚಾಗಿ ನಡೆಯುತ್ತದೆ. ಈ ಜಾತ್ರಾ ಮಹೋತ್ಸವ 2ನೇ ತಿರುಪತಿ ಎಂದು ಪ್ರಸಿದ್ಧಿ ಪಡೆದಿದೆ.
ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಆರಂಭಗೊಂಡ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಿಂದ ಬಹುತೇಕ ಕುಟುಂಬಗಳು ಉದ್ಯೋಗಕ್ಕಾಗಿ ಕ್ಷೇತ್ರಕ್ಕೆ ವಲಸೆ ಬಂದಿದ್ದು, ಇಲ್ಲಿಯೇ ನೆಲೆ ನಿಂತಿವೆ. ಈ ಹಿನ್ನಲೆಯಲ್ಲಿ ಈ ಭಾಗದ ದಾಸಪ್ಪರು ಹಾಗು ಶ್ರೀ ವೆಂಕಟೇಶ್ವರ ಸ್ವಾಮಿ ಭಕ್ತರು ಕಳೆದ 40 ವರ್ಷಗಳಿಂದ ಗಿಡದ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುದು ಒಂದು ಮಾಹಿತಿಯಾದರೆ, ಮತ್ತೊಂದೆಡೆ ದೀಪಾವಳಿ ಮಾಸದಲ್ಲಿ ಒಲಗದ್ದೆಗಳಲ್ಲಿ ರೈತರು ಬೆಳೆದ ಬೆಳೆಗಳು ಕಟಾವು ಹಂತಕ್ಕೆ ತಲುಪುವ ಹಿನ್ನಲೆಯಲ್ಲಿ ಸಮೃದ್ಧಿಯ ಸಂಕೇತವಾಗಿ ಯಾವುದೇ ವಿಘ್ನಗಳು ಎದುರಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.ಜಾತ್ರಾ ಮಹೋತ್ಸವ ಅಂಗವಾಗಿ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಎಂ. ವೆಂಕಟೇಶ್, ಅಧ್ಯಕ್ಷ ಎನ್.ಸಿ ಗಿರೀಶ್, ಉಪಾಧ್ಯಕ್ಷ ನಿಂಗರಾಜು, ಪ್ರಧಾನ ಕಾರ್ಯದರ್ಶಿ ಆರ್. ನಾಗರಾಜ್, ಕಾರ್ಯದರ್ಶಿ ಎಚ್.ಪಿ ಶ್ರೀನಿವಾಸ್, ಸಹ ಕಾರ್ಯದರ್ಶಿ ಎನ್.ಸಿ ಯೋಗೇಶ್, ಖಜಾಂಚಿ ಕಾಂತರಾಜ್, ಸಂಚಾಲಕ ತಿಮ್ಮಯ್ಯ, ಗುರು ನಂಜಯ್ಯ, ಭೀಮಯ್ಯ, ಎಸ್. ನಾಗರಾಜ್, ಡಿ. ಯಾಲಕ್ಕಯ್ಯ, ಸೋಮಶೇಖರ್, ಪ್ರಧಾನ ಅರ್ಚಕರಾದ ಟಿ. ರಾಮದಾಸಯ್ಯ ಸುತ್ತಮುತ್ತಲ ಪ್ರದೇಶಗಳಿಂದ ಭಕ್ತರು ಪಾಲ್ಗೊಂಡಿದ್ದರು.