ಹೆಂಡತಿ, ಮಕ್ಕಳು ಹಾಗೂ ತಾಯಿಯನ್ನೇ ಕೊಲೆ ಮಾಡಿದ್ದ ಅಪರಾಧಿಗೆ ಮರಣ ದಂಡನೆ

| Published : Nov 28 2024, 12:31 AM IST

ಸಾರಾಂಶ

ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಲೇಟ್ ಚಿಕ್ಕನಾಯಕ ಎಂಬವರ ಪುತ್ರ ಮಣಿಕಂಠಸ್ವಾಮಿ ಅ. ಕುಂಟ ಎಂಬ ವ್ಯಕ್ತಿ ವಿಶಿಷ್ಟ ಚೇತನನಾಗಿದ್ದು, ಆತ 2014ರ ಮಾರ್ಚ್ ತಿಂಗಳಲ್ಲಿ ಗಂಗೆ ಎಂಬುವರನ್ನು ವಿವಾಹವಾದ.

ಕನ್ನಡಪ್ರಭ ವಾರ್ತೆ ಮೈಸೂರುಹೆಂಡತಿ, ಮಕ್ಕಳ ಜೊತೆಗೆ ತನ್ನ ತಾಯಿಯನ್ನೂ ಕೊಲೆ ಮಾಡಿದ ಅಪರಾಧಿಗೆ ಮೈಸೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮರಣ ದಂಡನೆ ವಿಧಿಸಿ ತೀರ್ಪು ನೀಡಿದೆ.ಸರಗೂರು ತಾಲೂಕು ಚಾಮೇಗೌಡನಹುಂಡಿ ಗ್ರಾಮದ ನಿವಾಸಿ ಲೇಟ್ ಚಿಕ್ಕನಾಯಕ ಎಂಬವರ ಪುತ್ರ ಮಣಿಕಂಠಸ್ವಾಮಿ ಅ. ಕುಂಟ ಎಂಬ ವ್ಯಕ್ತಿ ವಿಶಿಷ್ಟ ಚೇತನನಾಗಿದ್ದು, ಆತ 2014ರ ಮಾರ್ಚ್ ತಿಂಗಳಲ್ಲಿ ಗಂಗೆ ಎಂಬುವರನ್ನು ವಿವಾಹವಾದ. ಆತನಿಗೆ 4 ವರ್ಷದ ಸಾಮ್ರಾಟ್ ಮತ್ತು ಒಂದೂವರೆ ವರ್ಷದ ರೋಹಿತ್ ಎಂಬ ಇಬ್ಬರು ಮಕ್ಕಳಿದ್ದರು. ಅಲ್ಲದೆ ಆತನ ಹೆಂಡತಿ 9 ತಿಂಗಳ ಗರ್ಭಿಣಿಯಾಗಿದ್ದು ಆಕೆಯ ಮೇಲೆ ಅನುಮಾನಪಟ್ಟು ಪದೇ ಪದೇ ಜಗಳವಾಡುತ್ತಿದ್ದ. ಆತನ ತಾಯಿ ಕೆಂಪಾಜಮ್ಮ ಸಮಾಧಾನ ಮಾಡುತ್ತಿದ್ದಾಗ ಆಕೆಯೊಂದಿಗೂ ಜಗಳವಾಡುತ್ತಿದ್ದ.2021ರ ಏಪ್ರಿಲ್ 28 ರಂದು ಸಂಜೆ ಮಣಿಕಂಠಸ್ವಾಮಿಯು ತನ್ನ ಹೆಂಡತಿಯ ಶೀಲ ಶಂಕಿಸಿ ಆಕೆಯೊಂದಿಗೆ ಮತ್ತು ತನ್ನ ತಾಯಿ ಕೆಂಪಾಜಮ್ಮನೊಂದಿಗೆ ಜಗಳವಾಡಿ ಗಲಾಟೆ ಮಾಡಿದ್ದ. ಬಳಿಕ ಅದೇ ದಿನ ರಾತ್ರಿ 9 ಗಂಟೆಗೆ ಮನೆಗೆ ಬಂದು ಮಧ್ಯರಾತ್ರಿ 12 ಗಂಟೆವರೆಗೆ ಟಿವಿ ನೋಡಿ ಬೆಳಗಿನ ಜಾವ 4 ಗಂಟೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ತಾನು ನಡೆದಾಡಲು ಉಪಯೋಗಿಸುತ್ತಿದ್ದ ಅಂಗವಿಕಲರ ಸಾಧನವಾದ ಕಬ್ಬಿಣದ ಊರುಗೋಲಿನಿಂದ ಒಂಬತ್ತು ತಿಂಗಳ ಗರ್ಭಣಿಯಾದ ತನ್ನ ಹೆಂಡತಿ, ತಾಯಿ ಕೆಂಪಾಜಮ್ಮ ಹಾಗೂ ತನ್ನ ನಾಲ್ಕು ವರ್ಷದ ಮಗ ಸಾಮ್ರಾಟ್ ಸೇರಿದಂತೆ ಮೂರೂ ಜನರಿಗೆ ತಲೆಗೆ ಮುಖಕ್ಕೆ ಬಲವಾಗಿ ಹೊಡೆದು ಸಾಯಿಸಿದ್ದಲ್ಲದೆ, ಇನ್ನೊಬ್ಬ ಒಂದೂವರೆ ವರ್ಷದ ಮಗ ರೋಹಿತ್ ನನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಸಾಯಿಸಿದ್ದ. ಜೊತೆಗೆ ತನ್ನ ಪತ್ನಿಯ ಗರ್ಭದಲ್ಲಿದ್ದ ಮಗುವಿನ ಸಾವಿಗೂ ಕಾರಣವಾಗಿದ್ದ.ಘಟನೆಯ ಮಾಹಿತಿ ತಿಳಿದ ಸರಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಅಭಿಯೋಜಕರು ಆರೋಪಿಯ ವಿರುದ್ಧ ಆಪಾದಿಸಲಾದ ಆರೋಪವನ್ನು ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆಂದು ನ್ಯಾಯಾಧೀಶ ಗುರುರಾಜ್ ಸೋಮಕ್ಕಲವರ್ ಅವರು ಅಪರಾಧಿಯಾದ ಮಣಿಕಂಠ ಸ್ವಾಮಿಗೆ ಮರಣದಂಡನೆ ವಿಧಿಸಿ ಆದೇಶ ನೀಡಿದ್ದಾರೆ.ರಾಜ್ಯದ ಪರವಾಗಿ ಸರ್ಕಾರಿ ಅಭಿಯೋಜಕ ಬಿ.ಇ. ಯೋಗೇಶ್ವರ್ ವಾದಿಸಿದ್ದರು.---ಕೋಟ್ನ್ಯಾಯಾಲಯದ ಶಿಕ್ಷೆ ಸೇಡಿನ ಕ್ರಮವಲ್ಲ. ಅಪರಾಧ ಎಸಗುವವನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬ ಸತ್ಯವು ಸಮಾಜಕ್ಕೆ ತಿಳಿಯಲಿ ಎಂದು. ಅಪರಾಧ ಎಸಗುವವನು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸತ್ಯ ಬಹಿರಂಗವಾದರೆ ಅಪರಾಧ ಎಸಗುವವರು ಅಪರಾಧ ಎಸಗಲು ಹಿಂದೇಟು ಹಾಕಬಹುದು ಎಂಬ ಕಾರಣಕ್ಕಾಗಿಯೇ ಅಪರಾಧಿಗೆ ಶಿಕ್ಷೆ ನೀಡುವುದು. ಶಿಕ್ಷೆಯ ಭಯವೇ ಶಾಂತಿಯ ಮೂಲ. ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಅಪರಾಧಿಗೆ ಶಿಕ್ಷೆಯಾಗಲೇಬೇಕು.- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು