ಇನ್ನೂ ಆರದ ಸೂಳೆಕೆರೆ ಗುಡ್ಡದ ಬೆಂಕಿ

| Published : Jan 25 2025, 01:01 AM IST

ಸಾರಾಂಶ

ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಗುರುವಾರ ಸಂಜೆಯೂ ಬೆಂಕಿಹತ್ತಿ ಉರಿಯುತ್ತಿರುವುದು ಕಂಡುಬಂದಿದ್ದು, ಇದರಿಂದ ಈಗಾಗಲೇ ಬೆಳೆದ ಹಾಗೂ ಬೆಳೆಯುತ್ತಿರುವ ಮರ-ಗಿಡಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ, ಬೂದಿಯಾಗುತ್ತಿವೆ.

- ಗುಡ್ಡದ ಸೆರಗಿನಲ್ಲಿರುವ ಹಲವಾರು ಗ್ರಾಮಗಳಲ್ಲಿ ಶುರುವಾಯ್ತು ಆತಂಕ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ಗುರುವಾರ ಸಂಜೆಯೂ ಬೆಂಕಿಹತ್ತಿ ಉರಿಯುತ್ತಿರುವುದು ಕಂಡುಬಂದಿದ್ದು, ಇದರಿಂದ ಈಗಾಗಲೇ ಬೆಳೆದ ಹಾಗೂ ಬೆಳೆಯುತ್ತಿರುವ ಮರ-ಗಿಡಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ, ಬೂದಿಯಾಗುತ್ತಿವೆ.

ಸೂಳೆಕೆರೆ ಗುಡ್ಡವು 15ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಈ ಪ್ರದೇಶದಲ್ಲಿ ಮರ-ಗಿಡಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿವೆ. ಶುಕ್ರವಾರ ಸಹಾ ಬೆಂಕಿ ಉರಿಯುತ್ತಿದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಬೆಂಕಿ ನಂದಿಸುವ ಕೆಲಸ ಸಮರ್ಪಕವಾಗಿ ಮಾಡುತ್ತಿಲ್ಲ. ಇದರಿಂದ ಗುಡ್ಡದ ಅಕ್ಕಪಕ್ಕ ಗ್ರಾಮಗಳಾದ ಮದುರನಾಯ್ಕನಹಳ್ಳಿ, ಸೋಮಶೆಟ್ಟಿಹಳ್ಳಿ, ಅರಶಿನಘಟ್ಟ, ಬಸವರಾಜಪುರ, ರುದ್ರಾಪುರ, ಹೊಸಹಳ್ಳಿ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಗುಡ್ಡಕ್ಕೆ ಬಿದ್ದ ಬೆಂಕಿ ಎಲ್ಲಿ ಗ್ರಾಮಗಳಿಗೂ ಆವರಿಸುತ್ತದೋ ಎಂಬ ಭೀತಿ ಗುಡ್ಡದ ಸೆರಗಿನಲ್ಲಿರುವ ಗ್ರಾಮಗಳ ಜನರದ್ದಾಗಿದೆ. ಗುಡ್ಡದ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಯಾವುದೇ ಪ್ರಯತ್ನ ಮಾಡದೇ ಇರುವುದರಿಂದ ಗುಡ್ಡದಲ್ಲಿ ವಾಸ ಮಾಡುವ ನವಿಲು, ಮೊಲ, ಅಳಿಲು, ಮುಳ್ಳುಹಂದಿ, ಕಾಡುಹಂದಿ, ಹಾವುಗಳು, ಕರಡಿಗಳು ಮುಂತಾದ ವನ್ಯಜೀವಿಗಳು ಆಕ್ರಂದನ ಕೇಳಿಬರುತ್ತಿದೆ. ಬೆಂಕಿ ಉರಿಯುವ ರಭಸಕ್ಕೆ ಅವುಗಳು ಕೂಗಾಡುವ ಶಬ್ದ ಮನಕರಗುವಂತಿದೆ ಎಂದು ಅರಶಿನಘಟ್ಟ ಗ್ರಾಮದ ನಾಗೇಶ್, ಪರಮೇಶ್ವರಪ್ಪ ಹೇಳುತ್ತಾರೆ.

ಕೆರೆಬಿಳಚಿಯ ಗ್ರೀನ್ ಆರ್ಥ ಮೋಟಿವೇಷನ್ ಅಂಡ್ ಸರ್ವೇವಲ್ ನ ಅಧ್ಯಕ್ಷ ಅಸ್ಲಂಶೇಖ್ ಮಾತನಾಡಿ, ಸೂಳೆಕೆರೆ ಗುಡ್ಡದ ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಪೂರ್ಣ ವಿಫಲರಾಗಿದ್ದಾರೆ. ಗುಡ್ಡದ ಒತ್ತುವರಿ ಆಗುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಗುಡ್ಡಕ್ಕೆ ಬಿದ್ದಿರುವ ಬೆಂಕಿ ನಂದಿಸಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಬಂಧಿಸಿದ ಇಲಾಖೆ, ಜಿಲ್ಲಾಡಳಿತ ಈ ಬಗ್ಗೆ ಶೀಘ್ರ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

- - - -24ಕೆಸಿಎನ್2, 3: ಅರಶಿನಘಟ್ಟ ಗ್ರಾಮದ ಬಳಿ ಹರಡಿಕೊಂಡಿರುವ ಸೂಳೆಕೆರೆ ಗುಡ್ಡದಲ್ಲಿ ಬೆಂಕಿ ಉರಿಯುತ್ತಿರುವುದು.