ಗುತ್ತಲ ಸಮೀಪದ ಹಾವನೂರ ಗ್ರಾಮದೇವತೆ ದ್ಯಾಮವ್ವನ ಜಾತ್ರೆಯಲ್ಲಿ ಚೌತಮನೆ ಕಟ್ಟೆಯಲ್ಲಿ ಗ್ರಾಮದೇವತೆ ದ್ಯಾಮವ್ವ ದೇವಿಯನ್ನು ಕುಳ್ಳಿರಿಸಿರುವುದು.
ಗುತ್ತಲ: ಐತಿಹಾಸಿಕ ಹಿನ್ನೆಲೆಯ ಹಾವನೂರ ಗ್ರಾಮ ದೇವತಾ ಜಾತ್ರೆಯು ಸಾಂಪ್ರದಾಯಿಕವಾಗಿ ಹಾಗೂ ವಿಜೃಂಭಣೆಯಿಂದ ಜರುಗಿ ಬುಧವಾರ ಸಂಜೆ ಗ್ರಾಮದೇವಿಯನ್ನು ಗಡಿಗೆ ಕಳುಹಿಸುವುದರ ಮೂಲಕ ಜಾತ್ರೆ ಸಂಪನ್ನಗೊಂಡಿತು.
ಬುಧವಾರ ಪ್ರಾತಃ ಕಾಲ 4 ಗಂಟೆ ಸುಮಾರಿಗೆ ದೇವಸ್ಥಾನದಿಂದ ದೇವಿಯನ್ನು ಪೆಟ್ಟಿಗೆಯಿಂದ ಹೊರ ತಂದು ಹಳಿಬಂಡಿಯ ಮೂಲಕ ದೇವಿಯನ್ನು ಚೌತಮನೆ ಕಟ್ಟೆಯವರೆಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಮಯದಲ್ಲಿ ಭಾರಿ ತಮಾಷೆ ಮದ್ದುಗಳನ್ನು ಹಚ್ಚಲಾಯಿತು. ಹೆಡೆ ಎತ್ತಿದ ನಾಗಸರ್ಪ, ಬಣ್ಣ ಬಣ್ಣದ ಮದ್ದಿನ ಚಿತ್ತಾರ, ಚಕ್ರದಲ್ಲಿ ತಿರುಗು ಬಾಣ, ಕಮಲದ ಹೂ, ಆಕಾಶದಲ್ಲಿ ರಂಗು ರಂಗಿನ ಮದ್ದುಗಳು ಬಾನೆತ್ತರದಲ್ಲಿ ಹಾರುವ ಮದ್ದುಗಳನ್ನು ಭಕ್ತರು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.ಬೆಳಗಿನ ಜಾವ 6 ಗಂಟೆ ಸುಮಾರಿಗೆ ದೇವಿಯನ್ನು ಚೌತಮನೆ ಕಟ್ಟೆಗೆ ಕುಳ್ಳರಿಸಿ ಭಕ್ತರ ದರ್ಶನಕ್ಕೆ ಇಡಲಾಯಿತು. ಬುಧವಾರ ಸಹಸ್ರಾರು ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು. ಶಾಂತರೂಪದ ಗಜಗೌರಿ ರೂಪದಲ್ಲಿ ದೇವಿಯು ಭಕ್ತರಿಗೆ ದರ್ಶನ ಭಾಗ್ಯವನ್ನು ಕರುಣಿಸಿದಳು.
ಶೃಂಗರಿಸಿದ ಜೋಡೆತ್ತಿನ ಬಂಡೆಗಳು: ಹೆಚ್ಚಿದ ವಾಹನಗಳ ಪ್ರಯಾಣದ ಮಧ್ಯದಲ್ಲಿಯೇ ಸಂಪ್ರದಾಯಿಕ ಕೊಲ್ಲಾರಿ ಬಂಡಿಯನ್ನು (ಚಕ್ಕಡಿ)ಗಳನ್ನು ಶೃಂಗರಿಸಿಕೊಂಡು ಕೆಲವು ರೈತ ಸಮೂಹ ಅದ್ಧೂರಿಯಾಗಿ ಎತ್ತು ಚಕ್ಕಡಿಗಳನ್ನು ಶೃಂಗರಿಸಿ ಕುಟುಂಬದೊಂದಿಗೆ ಜಾತ್ರೆಗೆ ಆಗಮಿಸಿ ತುಂಗಭದ್ರಾ ನದಿಯ ತೀರದಲ್ಲಿ ವಿವಿಧ ಭಕ್ಷ್ಯಗಳನ್ನು ಸವಿದರು. ಅನೇಕರು ನದಿಯಲ್ಲಿ ಸ್ನಾನ ಮಾಡಿ ದೇವಿಯ ದರ್ಶನ ಪಡೆದು ಪುನೀತರಾದರು.ವ್ಯಾಪಾರಿಗಳಲ್ಲಿ ಮಂದಹಾಸ: ಮನರಂಜನೆಯ ಆಟಗಳು ಹಾಗೂ ಹೋಟೆಲ್, ಮಿಠಾಯಿ ಅಂಗಡಿ, ಆಟಿಕೆಗಳ ಅಂಗಡಿ ಸೇರಿದಂತೆ ಎಲ್ಲ ವಿಧಧ ಅಂಗಡಿಗಳಿಗೆ ಹೆಚ್ಚಿನ ಭಕ್ತರ ಆಗಮನದ ಹಿನ್ನೆಲೆ ಎಲ್ಲಾ ಅಂಗಡಿಗಳು ಜನಜಂಗುಳಿಯಿಂದ ತುಂಬಿದ್ದು ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿದಂತಾಗಿತ್ತು.
ಭಾರೀ ಪೊಲೀಸ್ ಬಂದೋಬಸ್ತ್: ಹಾವನೂರ ಜಾತ್ರೆಗೆ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಪೋಲಿಸರನ್ನು ನೇಮಿಸಿ ಭಾರೀ ಪೋಲಿಸ್ ಬಂದೋಬಸ್ತ್ ವಹಿಸಿದ್ದರು. ಆದರೆ ಸಾರಿಗೆ ಬಸ್ ಹಾಗೂ ಖಾಸಗಿ ವಾಹನಗಳಿಗೆ ಗ್ರಾಮದ ಹೊರಗಡೆಯೆ ನಿರ್ಬಂಧಿಸುವ ಮೂಲಕ ಭಕ್ತರು ಬಿಸಿಲಿನಲ್ಲಿಯೇ ದರ್ಶನಕ್ಕೆ ತೆರಳುವಂತಾಯಿತು. ಟ್ರಾಫಿಕ್ ಹತೋಟಿ ತರುವಲ್ಲಿ ಹರ ಸಾಹಸ ಪಟ್ಟಿದ್ದು, ಎಲ್ಲೆಂದರಲ್ಲಿ ಟ್ರಾಫಿಕ್ ಹೆಚ್ಚಾಗಿ ಭಕ್ತರು ನಡೆಯುತ್ತಾ ಸಾಗಿದರು.ಒಟ್ಟಿನಲ್ಲಿ ವರ್ಷದ 364 ದಿನ ಗುಪ್ತ ಪೂಜೆಗೊಳಪಟ್ಟು 1 ದಿನ ಮಾತ್ರ ಅದರಲ್ಲೂ ಕೇವಲ 13 ಗಂಟೆಗಳ ದರ್ಶನ ನೀಡುವ ಗ್ರಾಮದೇವತೆ ದ್ಯಾಮವ್ವ ದೇವಿಯ ದರ್ಶನವನ್ನು ಭಕ್ತರು ಪಡೆದರು, ಭಕ್ತಾಧಿಗಳು ತಮ್ಮ ಹರಕೆಯ ಮುಡುಪುಗಳನ್ನು ಭಕ್ತಿಯಿಂದ ತೀರಿಸಿದರು. ದೇವಿಯು ದೇವಸ್ಥಾನದಿಂದ ಚೌತಮನೆ ಕಟ್ಟೆ ಮತ್ತು ಚೌತಮನೆ ಕಟ್ಟೆಯಿಂದ ಗಡಿಗೆ ತೆರಳುವ ಮೆರವಣಿಗೆಯಲ್ಲಿ ವಿವಿಧ ಸಂಪ್ರದಾಯಿಕ ವಾದ್ಯಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು. ಮೆರವಣಿಗೆ ಸಂದರ್ಭದಲ್ಲಿ ದೇವಿಗೆ ಹಾರುಗೋಳಿ ತೂರುವದು ವಿಶೇಷವಾಗಿತ್ತು.
ನಂತರ ಸಾಯಂಕಾಲ 5 ಗಂಟೆ ನಂತರ ಚೌತಕಟ್ಟಿಯಿಂದ ದೇವಿಯನ್ನು ಗಡಿಗೆ ಕಳಿಸಲಾಯಿತು.