ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರಚಿಮ್ಮಡ ಗ್ರಾಮದ ಆರಾಧ್ಯದೇವರಾದ ಶ್ರೀ ಪ್ರಭುಲಿಂಗೇಶ್ವರ ಹರಿವಾಣೋತ್ಸವ, ಬಸವಜಯಂತಿ ಹಾಗೂ ರುದ್ರಾಭಿಷೇಕ ಮಹಾಮಂಗಲ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಹರಿವಾಣೋತ್ಸವ ನಿಮಿತ್ತ ಕಳೆದ ಹತ್ತು ದಿನಗಳಿಂದ ಪ್ರತಿದಿನ ಮುಂಜಾನೆ 5 ರಿಂದ 7 ಗಂಟೆಗಳವರೆಗೆ ನಡೆಯುತ್ತಿರುವ ರುದ್ರಾಭಿಷೇಕ, ಮಹಾಪೂಜೆಯ ಮಂಗಲೋತ್ಸವಕ್ಕೆ ಗ್ರಾಮದ ರೈತರು ಮಹಿಳೆಯರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ನಂತರ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು, ಮಹಿಳೆಯರಿಂದ ಆರತಿ, ಕುಂಭ, ಸಕಲ ವಾದ್ಯ ವೃಂದಗಳೊಂದಿಗೆ ಬಸ್ ನಿಲ್ದಾನದ ಹತ್ತಿರವಿರುವ ಬಸವೇಶ್ವರ ವೃತ್ತದಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರರ ಜಯಘೋಷಣೆಗಳೊಂದಿಗೆ ಪ್ರಭುಲಿಂಗೇಶ್ವರ ದೇವಸ್ಥಾನವರೆಗೆ ಮೆರವಣಿಗೆ ನಡೆಯಿತು.
ನಂತರ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಹರಿವಾಣ ತುಂಬುವ ಕಾರ್ಯಕ್ರಮದಲ್ಲಿ ಗ್ರಾಮದ ರೈತರು ಕಬ್ಬು, ಬಾಳೆ, ತೆಂಗು ಸೇರಿದಂತೆ ವಿವಿಧ ಹಣ್ಣು, ಕಾಯಿ ರಾಶಿಗಳಿಂದ ಹರಿವಾಣ ತುಂಬಿದರು. ಕೆಳಗೆ ಬಿದ್ದ ಹರಿವಾಣ ಯಾರಿಗೆ ದೊರೆಯುವುದೋ ಅವರ ಇಷ್ಠಾರ್ಥವನ್ನು ಪ್ರಭುಲಿಂಗೇಶ್ವರ, ಬಸವಣ್ಣನವರು ನೆರವೇರಿಸುತ್ತಾರೆಂಬ ಪ್ರತೀತಿ ಇದೆ. ಇದರೊಂದಿಗೆ ಹರಿವಾಣದ ನಿಮಿತ್ತ ಕಳೆದ ಹತ್ತು ದಿನಗಳಿಂದ ಸ್ಥಳೀಯ ಗದ್ದಿಗೆ ಗುಡಿಯಲ್ಲಿ ನಡೆಯುತ್ತಿರುವ ರುದ್ರಾಭಿಷೇಕ ವಿಶೇಷ ಪೂಜೆಯೊಂದಿಗೆ ಮಹಾಮಂಗಲಗೊಂಡಿತು.ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪ ಪೂಜಾರಿ, ಬಾಳಪ್ಪ ಹಳಿಂಗಳಿ, ಅಣ್ಣಪ್ಪಗೌಡ ಪಾಟೀಲ, ರಾಮಣ್ಣ ಬಗನಾಳ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಗುರಲಿಂಗಪ್ಪ ಪೂಜಾರಿ, ಪ್ರಭು ಪಾಲಭಾವಿ, ಬಸವರಾಜ ಕುಂಚನೂರ, ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಗಜ್ಯೋತಿ ಬಸವಣ್ಣನವರ ತೊಟ್ಟಿಲು ಕಾರ್ಯಕ್ರಮ ನೆರವೇರಿತು.