ಸಾರಾಂಶ
ಗಿರೀಶ್ ಗರಗ
ಬೆಂಗಳೂರು : ರಾಜ್ಯದ ಏತ ನೀರಾವರಿ ಯೋಜನೆಗಳಿಂದಾಗುತ್ತಿರುವ ಪ್ರಯೋಜನ ಹಾಗೂ ಅವುಗಳ ಕಾರ್ಯನಿರ್ವಹಣೆಯನ್ನು ಆಡಿಟ್ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕಾಗಿ ವಿಧಾನಪರಿಷತ್ ಸದಸ್ಯ ಎಸ್.ರವಿ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಲಿದೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ಬಜೆಟ್ನಲ್ಲಿ ಸರಾಸರಿ 10ರಿಂದ 20 ಸಾವಿರ ಕೋಟಿ ರು.ವರೆಗೆ ಅನುದಾನ ಘೋಷಿಸಲಾಗುತ್ತಿದೆ. ಅದರಲ್ಲಿ ಶೇ.20ಕ್ಕಿಂತ ಹೆಚ್ಚಿನ ಮೊತ್ತವನ್ನು ಏತ ನೀರಾವರಿ ಯೋಜನೆಗಳಿಗಾಗಿ ಮೀಸಲಿಡಲಾಗುತ್ತಿದೆ. ಆದರೆ, ಈ ಏತ ನೀರಾವರಿ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿರುವುದಲ್ಲದೆ, ಅವುಗಳ ಕಾರ್ಯನಿರ್ವಹಣೆ ಬಗ್ಗೆಯೂ ಹಲವು ಅನುಮಾನಗಳಿವೆ. ಈ ಬಗ್ಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರು ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಹಾಗೂ ಕಾಮಗಾರಿ ಚಾಲ್ತಿಯಲ್ಲಿರುವ ಏತ ನೀರಾವರಿ ಯೋಜನೆಗಳ ಕಾರ್ಯವೈಖರಿ ಕುರಿತು ಆಡಿಟ್ ಮಾಡಲು ನಿರ್ಧರಿಸಿ, ಎಸ್.ರವಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುತ್ತಿದೆ.
ನೂರಾರು ಏತ ನೀರಾವರಿ ಯೋಜನೆಗಳು:
ರಾಜ್ಯದಲ್ಲಿ 1970ರಿಂದಲೂ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಏತ ನೀರಾವರಿ ಯೋಜನೆಗಳ ಮೂಲಕ ಕೃಷ್ಣಾ, ಕಾವೇರಿ, ತುಂಗ-ಭದ್ರಾ, ಹೇಮಾವತಿ, ಗೋದಾವರಿ, ಭದ್ರಾ ಹೀಗೆ ಹಲವು ನದಿಗಳಿಂದ ನೀರನ್ನು ಪಡೆದು, ಆ ನೀರನ್ನು ಕೆರೆಗಳ ಭರ್ತಿ ಮತ್ತು ನಾಲೆಗಳಿಗೆ ಹರಿಸುವ ಮೂಲಕ ಕೃಷಿ ಚಟುವಟಿಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಸುವಂತೆ ಮಾಡಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆ ಮಾಹಿತಿಯಂತೆ ಕೃಷ್ಣಾ ಕಣಿವೆ ವ್ಯಾಪ್ತಿಯಲ್ಲಿಯೇ 100ಕ್ಕೂ ಹೆಚ್ಚಿನ ಏತ ನೀರಾವರಿ ಯೋಜನೆಗಳಿದ್ದು, ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಏತ ನೀರಾವರಿ ಕುರಿತು ದೂರು: ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಡಿ.ಕೆ.ಶಿವಕುಮಾರ್ ಸರಣಿ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಏತ ನೀರಾವರಿ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕಾಗುತ್ತಿರುವ ನಷ್ಟ, ಏತ ನೀರಾವರಿ ಯೋಜನೆಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬಂತಹ ದೂರುಗಳು ಕೇಳಿಬಂದಿದ್ದವು. ಹೀಗಾಗಿ ರಾಜ್ಯದಲ್ಲಿನ ಎಲ್ಲ ಏತ ನೀರಾವರಿ ಯೋಜನೆಗಳ ಕುರಿತು ಪರಿಶೀಲಿಸಿ, ವರದಿ ನೀಡಲು ಎಸ್.ರವಿ ನೇತೃತ್ವದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ಯಾವ ಅಂಶಗಳ ಕುರಿತು ಪರಿಶೀಲನೆ?: ಸರ್ಕಾರದಿಂದ ರಚಿಸಲಾಗುವ ಸಮಿತಿಯು, ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡ ನಂತರ ಎಷ್ಟು ಕೆರೆಗಳನ್ನು ಭರ್ತಿ ಮಾಡಿ ಎಷ್ಟು ಪ್ರಮಾಣದ ಭೂ ಪ್ರದೇಶಕ್ಕೆ ನೀರುಣಿಸಲಾಗಿದೆ? ಕೆಲ ಏತ ನೀರಾವರಿ ಯೋಜನೆಗಳು ನೀರಿನ ಮೂಲಗಳಿಲ್ಲದೆಯೇ ಅನುಷ್ಠಾನಗೊಂಡಿದ್ದು, ಅವುಗಳನ್ನು ಪತ್ತೆ ಮಾಡುವುದು. ನೀರನ್ನು ಕೆರೆಗಳಿಗೆ ಹರಿಸಲು ಜಲಮೂಲವಿದ್ದರೂ ಪಂಪ್, ಮೋಟಾರು ಹಾಳಾಗಿ ದುರಸ್ತಿಯಾಗದಿರುವುದು, ತಾಂತ್ರಿಕವಾಗಿ ವಿಫಲವಾಗಿರುವ ಯೋಜನೆಗಳು ಹೀಗೆ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಯೋಜನೆಗಳನ್ನು ಪತ್ತೆ ಮಾಡಿ ವರದಿ ಸಿದ್ಧಪಡಿಸುವ ಹೊಣೆಯನ್ನು ಸಮಿತಿಗೆ ಹೊರಿಸಲಾಗುತ್ತಿದೆ.
ರಾಜ್ಯದ ಎಲ್ಲ ಏತ ನೀರಾವರಿ ಯೋಜನೆಗಳ ಅಧ್ಯಯನ ನಡೆಸುವ ಸಮಿತಿಯು, ಅವುಗಳನ್ನು ಯಶಸ್ಸುಗೊಳಿಸಲು ಕೈಗೊಳ್ಳಬೇಕಾದ ಅಂಶಗಳ ಬಗ್ಗೆಯೂ ತಿಳಿಸಬೇಕಿದೆ. ಪ್ರಮುಖವಾಗಿ ಜಲಮೂಲವಿಲ್ಲದ, ಪಂಪ್-ಮೋಟಾರು ಹಾಳಾಗಿ ಸ್ಥಗಿತಗೊಂಡಿರುವ ಯೋಜನೆಗಳಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಮಾಡುವ ವಿಧಾನವನ್ನೂ ಸಮಿತಿ ತನ್ನ ವರದಿಯಲ್ಲಿ ತಿಳಿಸಬೇಕಿದೆ.
ಈ ವರ್ಷ 16 ಸಾವಿರ ಕೋಟಿ ಮೀಸಲು!: 2024-25ನೇ ಸಾಲಿನ ರಾಜ್ಯ ಬಜೆಟ್ನಲ್ಲಿ ರಾಜ್ಯದ ನೀರಾವರಿ ಯೋಜನೆಗಳಿಗಾಗಿಯೇ 19,179 ಕೋಟಿ ರು. ಅನುದಾನ ಘೋಷಿಸಲಾಗಿತ್ತು. ಅದರಲ್ಲಿ ಏತ ನೀರಾವರಿ ಸೇರಿದಂತೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ 16 ಸಾವಿರ ಕೋಟಿ ರು. ವೆಚ್ಚ ಮಾಡುವುದಾಗಿ ತಿಳಿಸಲಾಗಿತ್ತು.
ಏತ ನೀರಾವರಿ ಯೋಜನೆಗಳ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ನನ್ನ ನೇತೃತ್ವದಲ್ಲಿ ಸಮಿತಿ ರಚನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಧಿಕೃತವಾಗಿ ಆದೇಶ ಬಂದ ಕೂಡಲೇ, ಏತ ನೀರಾವರಿ ಯೋಜನೆಗಳಿಂದ ಸರ್ಕಾರಕ್ಕಾಗುತ್ತಿರುವ ನಷ್ಟ, ಜನರಿಗೆ ಯಾವುದೇ ಪ್ರಯೋಜನ ಆಗದಿರುವುದು ಹಾಗೂ ಯೋಜನೆಯನ್ನು ಯಾವ ರೀತಿಯಲ್ಲಿ ಯಶಸ್ವಿಯಾಗಿಸಬಹುದು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುತ್ತೇನೆ.
। ಎಸ್.ರವಿ, ವಿಧಾನಪರಿಷತ್ ಸದಸ್ಯ